Friday, 10 August 2018

ಅವನು-ಅವಳು: ಗುರುತು


#filch-fiction
---
ನೀನು ಸರಿ ಇಲ್ಲಾ... ಬೆಡ್‌ರೂಂನಿಂದ ಅಪ್ಪಳಿಸಿದ ಅವಳ ಧ್ವನಿಯಲ್ಲಿ ಕೋಪವಿತ್ತು.
ಥ್ಯಾಂಕ್ಸ್... ಆದ್ರೆ ಇವಾಗ ಈ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಟ್ಟಿದ್ದು ಯಾಕೆ ಅಂಥಾ ಗೊತ್ತಾಗ್ತಿಲ್ಲ - ಅವನ ಉತ್ತರದಲ್ಲಿದ್ದುದು ಕೆಣಕುವ ತುಂಟತನ. ಅಷ್ಟರಲ್ಲೇ ತೂರಿಬಂದ ತಲೆದಿಂಬು ಅವನ ಮುಖದ ಮೇಲೆ ಅಪ್ಪಳಿಸಿತು.
ಬೆಡ್‌ರೂಂನಿಂದ ಗುಡುಗಿನ ಸದ್ದು ಕೇಳಿದಾಗ್ಲೇ ಈ ಥರ ಆಲಿಕಲ್ಲು ಬಂದು ಬಡಿಯುತ್ತೆ ಅಂತಾ ಗೆಸ್ ಮಾಡ್ಬೇಕಾಗಿತ್ತು. ಮಿಸ್ಸಾಗೋಯ್ತು. ಇರ‍್ಲಿ... - ಅವನು ಮತ್ತೆ ಕೆಣಕಿ ಕೆಳಗೆ ಬಿದ್ದ ದಿಂಬನ್ನು ಎತ್ತಿಕೊಂಡ. ದಿಂಬಿನ ತುಂಬಾ ಅವಳ ಕೂದಲ ಘಮ. ಬೇಡವೆಂದರೂ ಆಘ್ರಾಣಿಸಿದ ಮೂಗಿಗೆ ಹಿಡಿಶಾಪ ಹಾಕುತ್ತಲೇ ದಿಂಬನ್ನೆತ್ತಿದ ಅವನಿಗೋ ಅವಳನ್ನೇ ಅಪ್ಪಿದ ಅನುಭೂತಿ. ಕುಳಿತಿದ್ದ ಚೇರ್‌ನಲ್ಲಿ ಹಾಗೇ ಹಿಂದಕ್ಕೆ ವಾಲಿದ ಅವನ ಕಣ್ಣುಗಳು ಅದೇನನ್ನೊ ನೆನಪಿಸಿಕೊಂಡು ತಾವಾಗಿಯೇ ಮುಚ್ಚಿಕೊಂಡವು. ಮುಖದಲ್ಲಿ ತುಂಟ ನಗು.
ಆಲಿಕಲ್ಲು ಬಿದ್ದಿದ್ದೇನೋ ಸರಿ. ಆದ್ರೆ ಇಷ್ಟೊತ್ತಿಗೆ ಮಳೆನೂ ಬರಬೇಕಿತ್ತಲ್ಲಾ? - ಗೊಣಗುತ್ತಾ ಅವನು ಕಣ್ಣು ತೆರೆಯುವ ಮೊದಲೇ ಮಲ್ಲಿಗೆಯ ಬುಟ್ಟಿ ಮೈ ಮೇಲೆ ಬಿದ್ದ ಹಾಗಾಯ್ತು. ಅವಳ ಧಾಳಿ ಆರಂಭವಾಗಿತ್ತು.
ಸಾವರಿಸಿಕೊಂಡು ಕಣ್ಣು ತೆರೆದರೆ ಕಂಡಿದ್ದು ಮಿನುಗುತ್ತಿದ್ದ ಕಣ್ಣುಗಳು. ಅವಳ ಹಣೆ ಅವನ ಹಣೆಯೊಂದಿಗೆ ಯುದ್ದಕ್ಕಿಳಿದಿತ್ತು. ಅವನ ಮೇಲೆ ಮಗುವಿನಂತೆ ಕುಳಿತಿದ್ದ ಅವಳ ಕೈಗಳು ಅದಾಗಲೇ ಅವನ ಕೂದಲನ್ನು ಹಿಡಿದೆಳೆಯುತ್ತಿದ್ದವು. ಮುಖದ ಸುತ್ತಲೂ ಹರಡಿದ್ದ ಅವಳ ಕೂದಲಿನಿಂದ ನೀರು ತೊಟ್ಟಿಕ್ಕುತ್ತಿತ್ತು.
ಓಹ್... ಮಳೆ ಬಂತು - ಸ್ವಗತದೊಂದಿಗೆ ತೋಳಿಲ್ಲದ ಟಾಪ್‌ನಲ್ಲಿದ್ದ ಅವಳ ಒದ್ದೆಗೂದಲನ್ನು ಬದಿಗೆ ಸರಿಸಿ, ಆಕೆಯ ಮೃದು ಕೆನ್ನೆಯನ್ನು ಬೊಗಸೆಯಲ್ಲಿ ತುಂಬಿಕೊಂಡ. ಆಗಷ್ಟೆ ಮಿಂದ ಅವಳ ಕೂದಲಿನಿಂದ ಜಿನುಗುತ್ತಿದ್ದ ನೀರ ಹನಿಗಳು ಶರ್ಟ್‌ನೊಳಗೆ ಹುದುಗಿ ಅವನೆದೆಯನ್ನು ನೆನೆಸುತ್ತಿದ್ದವು. ದೇಹಕ್ಕೆ ಮಂಜಿನ ಹನಿಯನ್ನು ಸ್ಪರ್ಶಿಸಿದ ಅನುಭವ. ಅವಳು ಕೊಸರಾಡುತ್ತಿದ್ದಳು.
ಸ್ನಾನ ಆದ ಮೇಲೆ ಕೂದಲನ್ನು ಹೀಗೂ ಒರೆಸಬಹುದು ಅಂತಾ ಗೊತ್ತೆ ಇರ‍್ಲಿಲ್ಲ ನೋಡು. ನಾಳೆಯಿಂದ ನಾನೂ ಇದನ್ನ ಟ್ರೈ ಮಾಡ್ತೀನಿ... - ಅವನು ಮತ್ತೆ ಕೆಣಕಿ, ಹತ್ತಿರ ಸೆಳೆದ. ಅವಳ ಘಮ ಮತ್ತಷ್ಟು ಹೆಚ್ಚಾಯ್ತು. ಜೊತೆಗೆ ಕೋಪವೂ...
ಬಿಡು ನನ್ನ... ಐ ಹೇಟ್ ಯೂ. ಯಾವಾಗ್ಲೂ ಹೀಗೆ ನೀನು... ಈಡಿಯಟ್ ಎಂದ ಅವಳು ಬಿಡಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದಳು.
ಆಯ್ತಪ್ಪಾ... ಕೋಪ ಬಂದಿದೆ ಅಂತಾ ಗೊತ್ತಾಯ್ತು. ಆದ್ರೆ ಯಾಕೆ ಅಂತಾನೂ ಗೊತ್ತಾದ್ರೆ ಒಳ್ಳೇದು. ಸ್ಸಾರಿ ಕೇಳೋಕೆ ಈಸಿ ಆಗುತ್ತೆ ನೋಡು. ಹೇಳ್ಬಿಡು... ಬೇಗ ಸ್ಸಾರಿ ಕೇಳಿ ಬಿಡ್ತಿನೀ - ಅವನ ಬೊಗಸೆಯಲ್ಲಿ ಅಡಗಿದ್ದ ಅವಳ ಮುಖ ಕೆಂಪು ಚಂದಿರನಂತೆ ಭಾಸವಾಯ್ತು.
ಥೂ... ನಂಗೆ ಸ್ಸಾರಿ ಬೇಡ. ನಾ ಹೇಳಿದ್ದು ಕೇಳೋದೆ ಇಲ್ಲಾ... ಬೇಡ ಅಂದಿದ್ದನ್ನೇ ಮಾಡ್ತೀಯಾ? ಇವತ್ತು ನಾನು ಫಂಕ್ಷನ್‌ಗೆ ಹೋಗೋಕೆ ಆಗೊಲ್ಲ. ಎಲ್ಲಾ ನಿನ್ನಿಂದ. ಐ ಹೇಟ್ ಯೂ. ಕೋಪಕ್ಕಿಂತ ಹೆಚ್ಚಾಗಿ ನಿರಾಸೆಯ ಛಾಯೆ ಅವಳ ಮೊಗದಲ್ಲಿತ್ತು.
ನಿನ್ನ ಬೆಸ್ಟೀ ಬರ್ತ್‌ಡೇ ಪಾರ್ಟಿ ತಾನೇ... ಅದು ಇರೋದು ಸಂಜೆ. ನೆಂಪಿದೆ ನಂಗೆ. ಸಂಜೆ ನಾವು ಸ್ಪೈಸ್ ಡೆಕ್ನಲ್ಲಿರೋ ಪಾರ್ಟಿಗೆ ಹೋಗೋಕಿದೆ. ಅದಿಕ್ಕೆ ತಾನೇ ನಾನು ಯಾವ ಪ್ರೋಗ್ರಾಂ ಹಾಕ್ಕೊಳ್ಳದೆ ಮನೆಲಿರೋದು ಇವತ್ತು’. ಅವನ ಉತ್ತರಕ್ಕೆ ಅವಳು ತೃಪ್ತಳಾದಂತೆ ಕಾಣಲಿಲ್ಲ.
ಪಾರ್ಟಿ ಇರೋದು ಸಂಜೇನೆ. ಆದ್ರೂ ಹೋಗೋಕಾಗೊಲ್ಲ. ಎಲ್ಲಾ ನಿನ್ನಿಂದ. ನಿಂದೇ ತಪ್ಪು. ಅವಳ ಆದೇಶಪೂರ್ವಕ ಧ್ವನಿಗೆ ಅವನು ಶರಣಾಗಲೇ ಬೇಕಾಯ್ತು.
ಆಯ್ತು... ನನ್ನಿಂದ ತಪ್ಪಾಗಿದೆ. ಆದ್ರೆ ಯಾವ ತಪ್ಪು ಅಂತಾ ಗೊತ್ತಾಗ್ತಿಲ್ಲ. ಏನಾಯ್ತು ಅಂತಾ ಹೇಳಿದ್ರೆ ತಪ್ಪು ಸರಿ ಮಾಡ್ಕೋಬಹುದು. ಹೇಳಿಬಿಡು - ಅವನ ಮಾತಿನಲ್ಲಿ ಮತ್ತಷ್ಟು ತುಂಟತನ ಇದ್ದಂತೆ ಅವಳಿಗನಿಸಿತು.
ಸಿಟ್ಟಿನಿಂದಲೇ ಅವನ ತಲೆಗೆ ಮೊಟಕಿ, ಅವನ ಹಿಡಿತದಿಂದ ಬಿಡಿಸಿಕೊಂಡಳು ಅವಳು, ಏನು ಸರಿ ಮಾಡೋದು ನಿನ್ನ ತಲೆ. ಇವತ್ತು ಫಂಕ್ಷನ್‌ಗೆ ಬ್ಯಾಕ್‌ಲೆಸ್ ಗೌನ್ ಹಾಕ್ಕೋಬೇಕು, ಅಪ್‌ಡೂ ಹೇರ್‌ಸ್ಟೈಲ್ ಮಾಡ್ಕೋಬೇಕು ಅಂತಿದ್ದೆ. ಈಗ ನೋಡು. ನೀನು ಮಾಡಿರೋ ಕೆಲ್ಸ ಅಂದು ಕೂತಲ್ಲೇ ತಿರುಗಿದಳು. ತಲೆಯ ಮೇಲಿಂದ ಹಾದು ಬಂದ ಅವಳ ತೋರುಬೆರಳು ಕತ್ತಿನಿಂದ ಕೊಂಚ ಕೆಳಗೆ ಏನನ್ನೋ ಸೂಚಿಸುತ್ತಿದ್ದವು.
ಏನು ಮಾಡಿದೆ? ಅನ್ನುವ ಕುತೂಹಲದಿಂದಲೇ ಅವಳ ಬೆನ್ನತ್ತ ನೋಡಿದ ಅವನಿಗೆ ಅಲ್ಲಿ ಕಂಡಿದ್ದು ಸಣ್ಣ ಗುರುತು. ಬೆಳದಿಂಗಳ ಬಣ್ಣದ ಅವಳ ಕತ್ತಿನಿಂದ ಕೊಂಚ ಕೆಳಗೆ ಮೂಡಿದ್ದ ಕೆಂಪನೆಯ ಗುರುತು ಚಂದಿರನ ಮೇಲಿನ ಮಚ್ಚೆಯಂತೆ ಸ್ಪುಟವಾಗಿತ್ತು. ಆ ಗುರುತು ಮೂಡಿದ್ದರ ಹಿಂದಿನ ಘಟನೆ ನೆನಪಾಯ್ತು. ಅವನಿಗೂ ನಗು-ನಾಚಿಕೆ ಒತ್ತರಿಸಿಕೊಂಡು ಬಂತು. ಪೆಚ್ಚು ಮೊಗದ ಹುಡುಗಿ ಮತ್ತಷ್ಟು ಮುದ್ದಾಗಿ ಕಂಡಳು.
ನಗ್ಬೇಡಾ ನೀನು. ಈ ಮಾರ್ಕ್ ಇಟ್ಕೊಂಡು ಬ್ಯಾಕ್‌ಲೆಸ್ ಗೌನ್ ಹಾಕ್ಕೋಳೋಕ್ಕಾಗೊಲ್ಲ. ಅಪ್‌ಡೂ ಹೇರ್‌ಸ್ಟ್ರೈಲ್ ಹೇಗೆ ಮಾಡ್ಕೋಳ್ಳಿ? ಎಲ್ರೂ ಟೀಸ್ ಮಾಡ್ತಾರೆ. ಎಷ್ಟು ಆಸೆಯಿಂದ ಇವತ್ತಿಗೆ ಅಂತಾ ತೆಗೆದಿಟ್ಟಿದ್ದೆ ಗೊತ್ತಾ ಎಲ್ಲಾ ಹಾಳಾಯ್ತು. ನಿನ್ನಿಂದ... - ಅವಳ ಕಣ್ಣುಗಳಲ್ಲಿ ಅಸಹಾಯಕತೆಯೊಂದಿಗೆ ಸಣ್ಣ ಬೇಸರವೂ ಇಣುಕುತ್ತಿತ್ತು. ಹೃದಯ ಹಿಂಡಿದ ಅನುಭವ ಇವನಿಗೆ. ಕೂಡಲೇ ಸಾವರಿಸಿಕೊಂಡು ಆ ಗುರುತನ್ನೇ ದಿಟ್ಟಿಸಿ ನೋಡಿದ. ಅವನ ತಲೆಯೊಳಗೆ ನಕ್ಷತ್ರ ಮಿನುಗಿತು.
ನೀ ಹೀಗೆಲ್ಲಾ ಬೇಸರ ಮಾಡ್ಕೊಂಡ್ರೆ ನಂಗೆ ಕಷ್ಟ ಆಗುತ್ತೆ. ನೀನು ಆ ಗೌನ್ ಹಾಕ್ಕೋಬಹುದು, ಅಪ್‌ಡೂ ಹೇರ್ ಕೂಡ ಮಾಡ್ಕೋಬಹುದು. ಮಾರ್ಕ್ ಕಾಣೋಲ್ಲ - ಅವನದ್ದು ವಿಶ್ವಾಸದ ನುಡಿ. ಜಗತ್ತನ್ನೇ ಉಳಿಸುವ ಸಂಶೋಧನೆ ಮಾಡಿದ ಹೆಮ್ಮೆ.
ಹೇಗೆ? ಅವಳ ಧ್ವನಿ ಮೃದುವಾಗಿತ್ತು. ಪ್ರಾಯಶಃ ಅವಳೂ ಆ ಗುರುತಿನ ಹಿಂದಿನ ಘಟನೆ ನೆನಪಿಸಿಕೊಂಡ ಸೂಚನೆ ಅದು.
ಅವನು ಏನೂ ಮಾತನಾಡದೆ ಅವಳನ್ನು ಬದಿಗೆ ಸರಿಸಿ ಪಕ್ಕದ ಟೇಬಲ್‌ನಲ್ಲಿದ್ದ ಪೆನ್‌ಸ್ಟ್ಯಾಂಡ್‌ನತ್ತ ನಡೆದ. ರೆಡ್ ಇಂಕ್‌ನ ಪೆನ್ ತಂದು ಕುತೂಹಲದಿಂದ ಇವನನ್ನೇ ನೋಡುತ್ತಿದ್ದ ಅವಳ ಪಕ್ಕ ಕುಳಿತು, ಮಿನುಗುವ ಬೆನ್ನಿನ ಮೇಲಿದ್ದ ಆ ಗುರುತಿನ ಮೇಲೆ ಏನೋ ಗೀಚಲಾರಂಭಿಸಿದ. ಪೆನ್‌ನ ನಿಬ್ ಅವಳನ್ನು ಕೆಣಕುತ್ತಿತ್ತು. ತಣ್ಣಗಿನ ನಿಬ್ ಕತ್ತಿನ ಬಳಿ ಹರಿದಾಡುತ್ತಿದ್ದಂತೆ ಅವಳೆದೆಯಲ್ಲಿ ಪುಳಕ. ಮೊಗದಲ್ಲಿ ನಗು, ನಾಚಿಕೆ ಎರಡೂ ಮೇಳೈಸುತ್ತಿತ್ತು.
ಏನು ಮಾಡ್ತಿದ್ದೀ? ಎಂದು ಕೇಳಬೇಕೆಂದೆನಿಸಲಿಲ್ಲ ಅವಳಿಗೆ. ಹಿತವಾಗಿತ್ತು. ಎಲ್ಲೋ ಕಳೆದು ಹೋಗುವ ಹಂತದಲ್ಲಿದ್ದ ಅವಳನ್ನು ಎಚ್ಚರಿಸಿದ್ದು ಅವನ ಧ್ವನಿ.
ಏಳು... - ಅವನು ಅವಳನ್ನು ನಿಧಾನಕ್ಕೆ ಎತ್ತಿಕೊಂಡು ಬೆಡ್‌ರೂಂನಲ್ಲಿದ್ದ ಡ್ರೆಸ್ಸಿಂಗ್ ಟೇಬಲ್ ಬಳಿ ತಂದು ನಿಲ್ಲಿಸಿದ.
ಇರು ಬಂದೆ... ಎಂದವನು ಹೊರಹೋಗಿ ಮತ್ತೆ ಹಿಂದಿರುವಾಗ ಅವನ ಕೈಯಲ್ಲಿ ಸಣ್ಣದೊಂದು ಕನ್ನಡಿ. ಅವಳ ಬೆನ್ನ ಹಿಂದೆ ಅವನು ಹಿಡಿದ ಕನ್ನಡಿಯಲ್ಲಿ ಕತ್ತಿನ ಕೆಳಗೆ ಮೂಡಿದ ಹೊಸ ಗುರುತಿನ ಪ್ರತಿಬಿಂಬವಿತ್ತು. ಎರಡು ಸಣ್ಣ ಮಿಡಿವ ಹೃದಯಗಳ ಟ್ಯಾಟೋನಂತಹ ಗುರುತು. ಮೊದಲಿನ ಗುರುತಿನ ಮೇಲೆ ಮೂಡಿದ್ದ ಈ ಹೃದಯಗಳ ಚಿತ್ರ ಅವಳ ಬೆನ್ನಿನ ಸೌಂದರ್ಯವನ್ನು ನೂರ್ಮಡಿಗೊಳಿಸಿತ್ತು. ಬೆಳದಿಂಗಳಿಗೆ ದೃಷ್ಟಿ ಬೊಟ್ಟು ಇಟ್ಟ ಹಾಗೆ.
ಈಗ ಗೌನ್ ಹಾಕ್ಕೋಬಹುದು ಎಂದ ಅವನು ಕನ್ನಡಿಯನ್ನು ಪಕ್ಕಕ್ಕಿಟ್ಟು ಅವಳನ್ನು ಬಳಸಿದ. ನಿಧಾನಕ್ಕೆ ಬಾಗಿ ತಾನೇ ಮೂಡಿಸಿದ್ದ ಹೃದಯದ ಟ್ಯಾಟೋ ಮೇಲೆ ಮೆತ್ತನೆ ಮುತ್ತಿಟ್ಟ. ಅವಳು ನಾಚಿದಳು. ಕೋಪ ಕರಗಿತ್ತು. ಬೆಡ್‌ರೂಮಿನ ಡ್ರೆಸ್ಸಿಂಗ್ ಟೇಬಲ್‌ನ ಕನ್ನಡಿಯ ಮುಂದಿನಿಂದ ಅವರಿಬ್ಬರ ಬಿಂಬವೂ ನಿಧಾನಕ್ಕೆ ಮರೆಯಾಯಿತು.
ಇತ್ತ ಹಾಲ್‌ನಲ್ಲಿ ಅವನು ಬಿಟ್ಟಿದ್ದ ಪೆನ್ನಿನ ನಿಬ್ ಮತ್ತಷ್ಟು ಹೊಸ ಚಿತ್ರ ಬರೆಯುವ ಹುಮ್ಮಸ್ಸಿನಿಂದ ತಣ್ಣನೆ ಮಲಗಿತ್ತು...
###
#filchfiction #secondpage #fantacy #abstractstories

Sunday, 25 February 2018

ಅವನು-ಅವಳು: “ಸೌಂದರ್ಯ ಲಹರಿ”



"ನಿಂಗೆ ಹೊಟ್ಟೆ ಉರಿ. ಅದಿಕ್ಕೇ ಇಷ್ಟು ಚೆನ್ನಾಗಿರೋ ಪೋಟೋನ ಚೆನ್ನಾಗಿಲ್ಲ ಅಂತಿದ್ಯಾ. ಎಲ್ರೂ ‘ಸೋ... ಕ್ಯೂಟ್, ಲುಕಿಂಗ್ ಪ್ರೆಟ್ಟಿ’ ಅಂತೆಲ್ಲಾ ಎಫ್.ಬಿ-ಯಲ್ಲಿ ಕಮೆಂಟ್ ಮಾಡಿದ್ದಾರೆ ಗೊತ್ತಾ?... ನೀನೋಬ್ನೇ ಏನೂ ಹೇಳಿಲ್ಲಾ. ಯೂ ಆರ್ ಜೆಲಸ್” ಅಂದು ಬುಸುಗುಡುತ್ತಾ ಅವನ ಕೈಲಿದ್ದ ಕಾದಂಬರಿ ಕಿತ್ತುಕೊಂಡು ಬದಿಗೆಸೆದು, ಸೋಪಾದ ಮೇಲೆ ಅವನಿಗೊರಗಿಕೊಂಡ ಅವಳ ಕಣ್ಣಲ್ಲಿದ್ದುದು ಅವನಿಂದ ಪ್ರಶಂಸೆಯ ಪುಟ್ಟ ಮಾತೊಂದನ್ನು ಕದಿಯುವ ಹಂಬಲ... ಒಂದಷ್ಟು ಹುಸಿಗೋಪ.

Image Courtesy: http://illusion.scene360.com

ಆದರೆ ಅವಳ ಆರೋಪವನ್ನೆಲ್ಲಾ ಸಾರಾಸಗಟಾಗಿ ಅಲ್ಲಗಳೆದ ಆವನು, ಅವಳನ್ನು ಮೆತ್ತಗೆ ಎದೆಗಾನಿಸಿಕೊಂಡು ಕಣ್ಣು ಮುಚ್ಚಿಕೊಂಡ. ಧ್ಯಾನಸ್ಥನ ಏಕಾಗ್ರತೆಯಿಂದ ಅವಳ ತಲೆಗೂದಲ ಘಮದ ಅಮಲು ಹತ್ತಿದಂತೆ ಆತ ಹೇಳಲಾರಂಭಿಸಿದ... “ಬೆಳ್‍ಬೆಳಗ್ಗೇನೆ ನಿನ್ನ ಎಬ್ಸೋಕೆ ಬಂದಾಗ ಇನ್ನೊಂದೈದು ನಿಮಿಷ ಮಲಗ್ತೀನಿ ಕಣೋ ಪ್ಲೀಸ್... ಅಂತಾ ಮಗು ಥರಾ ಮುಖ ಮಾಡ್ತಿಯಲ್ಲಾ? ಆವಾಗ ಕಾಣೋವಷ್ಟು ಚೆನ್ನಾಗಿ ಆ ಎಫ್.ಬಿ ಪೋಟೋದಲ್ಲಿ ಕಾಣ್ತಿಲ್ಲ ನೀನು...”

ಕೊಸರಿಕೊಂಡ ಅವಳ ತುಟಿಯಿಂದ ಮತ್ತೊಂದು ಆಕ್ಷೇಪ ಹೊರಡುವ ಮುನ್ನ ಮತ್ತಷ್ಟು ಬಿಗಿಯಾಗಿ ಅವಳನ್ನಪ್ಪಿದ ಅವನ ಮಾತು ಮುಂದೆ ಸಾಗಿತು... “ಎಬ್ಬಿಸೋಕೆ ಬಂದ ನನ್ನನ್ನೂ ಎಳ್ಕೊಂಡು, ಜಸ್ಟ್ 5 ಮಿನಿಟ್ಸ್ ಅಂತಾ ಮತ್ತರ್ಧ ಗಂಟೆ ಎದೆ ಮೇಲೆ ತಲೆ ಇಟ್ಕೊಂಡು ಮಲಗ್ತೀ ಅಲ್ವಾ? ಆಗ ನಿನ್ನ ಮುಖದಲ್ಲಿ ಬೇಗ ಏಳೋ ನನ್ನ ಮತ್ತೆ ಮಲಗಿಸಿದ ಖುಷಿ ಇರುತ್ತಲ್ವಾ? ಅವಾಗಿನ ಕ್ಯೂಟ್‍ನೆಸ್ ಆ ಎಫ್.ಬಿ ಪೋಟೋದಲ್ಲಿಲ್ಲಾ ಬಿಡು...” ಎಂದು ಮತ್ತಷ್ಟು ತನ್ಮಯತೆಯಿಂದ ಅವಳನ್ನು ಬಳಸಿಕೊಂಡ.

ಅಷ್ಟರಲ್ಲಿ ಅವನ ಮಾತಿನ ಪ್ರತೀ ಶಬ್ಧವನ್ನು ಅನುಭವಿಸುತ್ತಾ ಮೈ ಮರೆತಿದ್ದ ಆಕೆಯ ಹುಸಿಗೋಪ ಮಾಯವಾಗಿತ್ತು. ಆತ ಇನ್ನೇನೋ ಹೇಳುವ ಮುನ್ನ ಬಾಹುಬಂಧನದಿಂದ ಬಿಡಿಸಿಕೊಂಡು ಅವನನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳ ಮುಖದಲ್ಲಿ ಮುಂಜಾನೆಯ ಸೌಂದರ್ಯ ಮತ್ತೆ ಅರಳಿತ್ತು. ಆ ಕ್ಷಣದಲ್ಲಿ ಅವರಿಬ್ಬರ ಕಣ್ಣಲ್ಲೂ ಪ್ರತಿಫಲಿಸುತ್ತಿದ್ದುದು ಅವಳದೇ ಸೌಂದರ್ಯ.

“ಆ ಪೋಟೋ...” ಎಂದು ಹೇಳಲು ಹೊರಟ ಆತನ ಬಾಯಿಂದ ಹೊರಟ ವಾಕ್ಯಗಳು ಅವಳ ಕಿವಿ ತಲುಪುವ ಬದಲು ಮುತ್ತಾಗಿ ಆಕೆಯ ಹೃದಯ ತಲುಪಿತು...
ಇತ್ತ ಮೊಬೈಲ್ ನೋಟಿಫಿಕೇಷನ್ ಅವಳ ಪೋಟೋಗೆ ಮತ್ತಷ್ಟು ಲೈಕ್ಸ್ ಬಂದ ಸೂಚನೆ ನೀಡುತ್ತಲೇ ಇತ್ತು...
---

#filchfiction #firstpage #fantacy #abstractstories

Friday, 30 December 2011

ಬದಲಾವಣೆ ಜಗದ ನಿಯಮ...

ಬೆಳಗ್ಗೆ ಎಷ್ಟೇ ಬೇಗ ಎದ್ದರೂ 8 ಮುಂಚೆ ಮನೆ ಬಿಡುವ ಪ್ರಶ್ನೆಯೇ ಇಲ್ಲ... ಹಾಗೂ-ಹೀಗೂ ಸಮಯಕ್ಕೆ ಸರಿಯಾಗಿ ಬಸ್‌ಸ್ಟ್ಯಾಂಡ್‌ಗೆ ಹೋದ್ರೆ ಅಲ್ಲಿ ಬಸ್ಸುಗಳೇ ಇರೋದಿಲ್ಲ... ಅಪ್ಪಿ-ತಪ್ಪಿ ಕಾಲೇಜ್‌ಗೆ ಬೇಗನೇ ತಲುಪಿದ್ರೆ ಅವತ್ತು ಫಸ್ಟ್ ಅವರ್ ಇರ‍್ತಾನೇ ಇರ್ಲಿಲ್ಲ... ಇದು ಸುಮಾರು ನಾಲ್ಕು ವರ್ಷಗಳ ಹಿಂದಿನ ಮಾತು. ಫೈನಲ್ ಬಿ.ಎ ಕಲಿಯುತ್ತಿದ್ದ ದಿನಗಳವು. ಎಲ್ಲಾ ಕಾರಣಗಳಿಗೂ ಧರ್ಮಸ್ಥಳದ ರಾಜಧಾನಿ ಎನಿಸಿದ್ದ ಉಜಿರೆಗೆ ನಾವೆಲ್ಲಾ ತಲುಪುತ್ತಿದ್ದುದೇ ಹೀಗೆ...

ನಂತರ ಉದ್ಯೋಗಕ್ಕಾಗಿ ಊರಿನಿಂದ ಹೊರಹೋದರೂ ಕೆಲವೇ ವರ್ಷಗಳಲ್ಲಿ ಮತ್ತೆ ಮರಳುವ ಅವಕಾಶ ಸಿಕ್ಕಾಗ ಬೇಡ ಎನ್ನುವ ಮಾತೂ ಮನದಲ್ಲಿ ಸುಳಿಯಲಿಲ್ಲ. ಬಡಗಿನ ಬೆಡಗಿಗೆ ಗುಡ್‌ಬೈ ಹೇಳಿ ಮತ್ತೆ ಊರಿಗೆ ಮರಳಿದ್ದಾಯ್ತು. ಕಾರ್ಯನಿಮಿತ್ತ ಉಜಿರೆಗೆ ಸಾಗಲು ಹಿಂದಿನಂತೆ ಬಸ್‌ಸ್ಟ್ಯಾಂಡ್‌ಗೆ ತಲುಪಿದ್ದೂ ಆಯ್ತು... ಮಾಮೂಲಿನಂತೆ ಲೇಟ್ ಆಗಿತ್ತು. ಆದ್ರೆ ಉಜಿರೆಯತ್ತ ಸಾಗಲು ಬೇಕಾದಷ್ಟು ಬಸ್ಸುಗಳಿದ್ದವು..!
***
ಧರ್ಮಣ್ಣನ ಅಂಗಡಿ. ನಮ್ಮ ಕಾಲೇಜು ಜೀವನದ ಅವಿಭಾಜ್ಯ ಅಂಗ. ಅಲ್ಲೇ ಪಕ್ಕದಲ್ಲಿದ್ದ ಕಾಯಿನ್‌ಫೋನ್. ಅದೆಷ್ಟೋ ಪಿಸುಮಾತುಗಳಿಗೆ, ನೋವು-ನಲಿವುಗಳಿಗೆ ಕಿವಿಯಾಗಿದ್ದ ಆ ಫೋನ್ ಇವತ್ತಿಗೂ ಅಲ್ಲೇ ಇದೆ. ಆದ್ರೆ ಇಂದಿನವರಿಗೆ ಅದು ಮೊದಲಿನಷ್ಟು ಆಪ್ತವಲ್ಲ. ಯಾಕೆ? ಎಂದು ಕೇಳಿದ್ರೆ ಹುಡುಗರ ಪ್ಯಾಂಟ್ ಜೇಬಲ್ಲಿ, ಹುಡುಗಿಯರ ಪರ್ಸ್‌ಗಳಲ್ಲಿ ತಣ್ಣನೆ ಅಡಗಿ ಕುಳಿತಿದ್ದ ಮೊಬೈಲ್‌ಗಳೂ ಉತ್ತರ ಹೇಳಲಿಲ್ಲ.
***
ಭಟ್ಟರ ಹೊಟೇಲ್ ಬೆಂಚು-ಗೋಡೆಗಳು ಮಾತನಾಡುವಂತಿದ್ದರೆ ಕನ್ನಡ ಸಿನಿಮಾ ನಿರ್ದೇಶಕರಿಗೆ ರಿಮೇಕ್ ಮಾಡೋ ಪ್ರಮೇಯವೇ ಬರುತ್ತಿರಲಿಲ್ಲವೇನೋ?! ಎಲ್ಲಾ ಸ್ಪೈಸೀ ಸ್ಟೋರಿಗಳಿಗೆ ಭಟ್ಟರ ಹೊಟೇಲ್ ಮಾಮೂಲು ಅಡ್ಡಾ ಆಗಿತ್ತು. ಇಂದು ಆ ಹೊಟೇಲ್ ಅಲ್ಲೇ ಇದ್ದರೂ ಅಲ್ಲಿನ ಹಾಫ್ ಟೀಗೆ ಹಳೆಯ ಸೊಗಡಿಲ್ಲ. ಮಧ್ಯಾಹ್ನದ ಊಟಕ್ಕೆ ಶೆಟ್ಟರ ಬೇಲ್ ಪುರಿ, ಪಲಾವ್ ತಿನ್ನಬೇಕು ಅನಿಸೋದಿಲ್ಲ. ಸಂಜೆ ದಿಶಾದತ್ತ ಹೆಜ್ಜೆ ಹಾಕೋಕು ಮನಸ್ಸಾಗಲ್ಲ... ಇದ್ಯಾಕೆ ಹೀಗೆ? ಎನ್ನೋದಕ್ಕೆ ಉಜಿರೆಯಲ್ಲಿ ಹೊಸದಾಗಿ ತಲೆಯೆತ್ತಿರುವ ಚಾಟ್ ಸೆಂಟರ್‌ಗಳು, ಕ್ರೀಂ ಪಾರ್ಲರ್‌ಗಳು, ಒಂದಷ್ಟು ಹೊಟೇಲ್‌ಗಳು ಉತ್ತರ ನೀಡಲು ಸಿದ್ಧವಾಗಿದ್ದರೂ ಕಾರಣ ಕೇಳುವ ಮನಸ್ಸಾಗೋದಿಲ್ಲ... ಅದರಲ್ಲೂ ಕೆಲವರ ಪಾಲಿಗೆ ಸ್ವರ್ಗವಾಗಿದ್ದ ಸ್ವಪ್ನಾ ಬದಲಾಗಿದ್ದನ್ನು ನಂಬಲೂ ಸಾಧ್ಯವಾಗಲಿಕ್ಕಿಲ್ಲ!!!
***
ಕಾಲೇಜು... ಬದುಕು ಕಲಿಸಿದ ತಾಣ. ಒಂದಷ್ಟು ನೆನಪುಗಳ ಬುತ್ತಿ. ಪಾಠ ಮಾಡಿದ ಟೀಚರ‍್ಸ್‌ಗಳು, ತರಲೆ ಫ್ರೆಂಡ್ಸ್‌ಗಳು, ಲಾಸ್ಟ್ ಬೆಂಚ್ ಲಾಫ್ಟರ್‌ಗಳು, ಕಾರಿಡಾರ್ ಸರ್ವೇಗಳು, ಕಂಬ ಕಪ್ಪಾಗಿಸಿದ ಮಸ್ತಿಗಳು, ಡೆಸ್ಕ್ ಮೇಲಿನ ಸ್ಕ್ರಿಬ್ಲಿಂಗ್‌ಗಳು, ಸೆನ್ಸಾರ್ ಇಲ್ಲದ ಪತ್ರಿಕೆ ಹೊರತರುವ ರಿಸ್ಕ್‌ಗಳು, ಹಾಗೇ ಸುಮ್ಮನೆ ಸಿಗುವ ನಗುಗಳು, ಸಂಘದ ಪದವಿಗಳು... ಊಫ್..!! ಆದರೆ ಈಗ..?
ಪಾರ್ಕ್‌ನಲ್ಲಿರೋ ಕಲ್ಲುಬೆಂಚುಗಳ ಮಹಿಮೆಯಿಂದಾಗಿ ಕಾರಿಡಾರ್‌ನಲ್ಲಿ ಹರಟೆ ಹೊಡೆಯೋ ಮಂದಿ ಸಿಗೋದಿಲ್ಲ. ಒಂದಷ್ಟು ಡಿಜಿಟಲ್ ಎಸ್.ಎಲ್.ಆರ್ ಕ್ಯಾಮರಾಗಳು, ಲ್ಯಾಪ್‌ಟಾಪ್‌ಗಳು, ವಿಡಿಯೋ ಕ್ಯಾಮರಾಗಳು ಕ್ಯಾಂಪಸ್ ಪ್ರವೇಶಿಸಿರೋದ್ರಿಂದ ವಿದ್ಯಾರ್ಥಿಗಳು ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾಗಿಲ್ಲ. ಸಮವಸ್ತ್ರ, ಆನ್‌ಲೈನ್ ಎಕ್ಸಾಂ, ಮಲ್ಟಿಮೀಡಿಯಾ ಸ್ಟುಡಿಯೋ, ವಿಡಿಯೋ ಕಾನ್ಫರೆನ್ಸ್ ಇವೆಲ್ಲಾ ಅಪರಿಚಿತ ಪದಗಳಾಗಿ ಉಳಿದಿಲ್ಲ.
***
ಉಜಿರೆ ಪೇಟೆ... ಸೊಂಪಾಗಿದ್ದ ಮರಗಳ ನೆರಳಿನ ಜಾಗದಲ್ಲೀಗ ಕಾಂಕ್ರೀಟ್ ಕಟ್ಟಡಗಳ ಛಾಯೆ. ಉಜಿರೆಯ ಹೆಗ್ಗುರುತಾಗಿದ್ದ ಸರ್ಕಲ್ ಬದಲಾಗಿ ಮಹಾದ್ವಾರ ತಲೆಯೆತ್ತಿ ನಿಂತಿದೆ. ಬಸ್‌ಸ್ಟ್ಯಾಂಡ್ ಸಮಸ್ಯೆ ದೂರಾಗಿದೆ. ಟ್ರಾಫಿಕ್ ಸಮಸ್ಯೆ ಜೋರಾಗಿದೆ. ಪೇಟೆ ಅಕ್ಷರಶಃ ಕಿಷ್ಕಿಂಧೆಯಾಗಿದೆ. ಊರು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಶೈಕ್ಷಣಿಕ-ಸಾಮಾಜಿಕ ರಂಗದಲ್ಲಿ ಹೆಸರು ಗಳಿಸುತ್ತಿದೆ.
ಇದೆಲ್ಲಾ ಗಮನಿಸಿದರೆ ಒಂದಂತೂ ಸ್ಪಷ್ಟ. ಉಜಿರೆ ಹಿಂದಿನಂತಿಲ್ಲ. ಪ್ರಾಯಶಃ ಬದಲಾಗಿದೆ...!

Wednesday, 6 May 2009

ಆಹಾ ಎಂಥಾ ಆ ಕ್ಷಣ...

"ಸ್ಸಾರಿ... ನಂಗೆ ನಿಜವಾಗ್ಲೂ ತುಂಬಾ ಕೆಲಸ ಇದೆ. ಇವತ್ತು ನಿಂಜೊತೆ ಡಿನ್ನರ್‌ಗೆ ಬರೋಕಾಗೊಲ್ಲ..." ಎಂದು ಹೇಳಿ ಅವಳ ಉತ್ತರಕ್ಕೂ ಕಾಯದೆ ಮೊಬೈಲ್ ಕೆಳಗಿಟ್ಟೆ. ಆಕೆಗೆ ಖಂಡಿತವಾಗಿಯೂ ಬೇಜಾರಾಗಿರುತ್ತೆ ಅನ್ನೋದು ನಂಗೂ ಗೊತ್ತಿತ್ತು. ಆ ಬಗ್ಗೆ ಹೆಚ್ಚು ಯೊಚಿಸಲಿಲ್ಲ. ಸುಮ್ಮನೆ ಕೀ ಬೋರ್ಡ್ ಕುಟ್ಟುತ್ತಾ ಕುಳಿತೆ. ದೃಷ್ಟಿ ಮಾನಿಟರ್‌ನತ್ತ ನೆಟ್ಟಿದ್ದರೂ, ಯೋಚನೆಗಳೆಲ್ಲಾ ಸೃಷ್ಟಿಯ ಸುತ್ತಲೇ ಸುತ್ತುತ್ತಿದ್ದವು. ಖಂಡಿತಾ ಆಕೆ ಮತ್ತೆ ಫೋನ್ ಮಾಡುತ್ತಾಳೆ... ಪುನಃ ನೆಪ ಹೇಳುವ ಮನಸ್ಸಿರಲಿಲ್ಲ...
+++
ಸೃಷ್ಟಿ ನನ್ನಲ್ಲಿ ಇಷ್ಟಲ್ಲಾ ಹೋಯ್ದಾಟಗಳನ್ನು ಸೃಷ್ಟಿಸುತ್ತಾಳೆಂದು ನಾನೆಸಿರಲಿಲ್ಲ. ಇದುವರೆಗೂ ನಾನು ಆಕೆಯಿಂದ ಒಂದೇ ಒಂದು ವಿಷಯವನ್ನು ಮರೆಮಾಚಿದವನಲ್ಲ. ನನ್ನ ಗುಣ-ಅವಗುಣಗಳೆರಡನ್ನೂ ಸಮಾನವಾಗಿ ಸ್ವೀಕರಿಸಿದ್ದ ಸ್ನೇಹಿತೆ ಆಕೆ. ಛೆ... ಮತ್ತೆ ಗೊಂದಲ. ಆಕೆ ನಿಜವಾಗಿಯೂ ನನ್ನ ಸ್ನೇಹಿತೆಯಷ್ಟೇ ಆಗಿದ್ದಳೆ. ಹೌದು... ನಮ್ಮಿಬ್ಬರ ನಡುವೆ ಬೇರೇನೂ ಇರಲಿಲ್ಲ ಎಂದರೆ ಯಾರೂ ನಂಬುವುದಿಲ್ಲ. ಪ್ರಾಯಶಃ ಈಗ ನಾನೂ ನಂಬುವುದಿಲ್ಲ.
ಮೊದಲಾದರೆ, "ಎಲ್ಲಿ... ನಿನ್ನ ಪ್ರೇಯಸಿ ಇನ್ನೂ ಬಂದೇ ಇಲ್ಲವಲ್ಲಾ..." ಎಂದು ಮದನ್ ಹೇಳಿದಾಗ, ಅಥವಾ "ಏನು ಹರಿ... ಬರೀ ಹುಡುಗಿ ಜೊತೆ ಸುತ್ತೋದು ಮಾತ್ರಾನೋ ಅಥವಾ ಮದುವೆ ಊಟಾನೂ ಹಾಕಿಸ್ತಿಯೋ..." ಎಂದು ಪ್ರಶಾಂತ್ ಕುಹಕವಾಡಿದಾಗ ನನಗೆ ಅಸಾಧ್ಯ ಸಿಟ್ಟು ಬರುತ್ತಿತ್ತು. ಆದರೆ ಸೃಷ್ಟಿಯೇ, ಅದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಸಮಾಧಾನ ಮಾಡುತ್ತಿದ್ದಳು. ಆದರೆ ಒಂದು ಬಾರಿಯಂತೂ ಮದನ್ ಮಿತಿಮೀರಿ ಕೀಟಲೆ ಮಾಡಿದಾಗ ಅವಳೇ, "ಹೌದು. ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಮದುವೆಯೂ ಮಾಡಿಕೊಳ್ಳುತ್ತೇವೆ. ಏನಿವಾಗ?" ಎಂದು ಅವನನ್ನು ದಬಾಯಿಸಿದ್ದಳು. ಯಾವಾಗಲೂ ಶಾಂತವಾಗಿರುತ್ತಿದ್ದ ಸೃಷ್ಟಿ ಅಂದು ಧನಿಯೇರಿಸಿ ಮದನ್‌ಗೆ ಬೈದು ಆತನ ಬಾಯಿ ಮುಚ್ಚಿಸಿದ್ದು ಕಂಡು ನನಗಂತೂ ಅಚ್ಚರಿಯಾಗಿತ್ತು. ಆದರೆ ಅಂದೇ ಸಲ್ಲದ ಯೋಚನೆಯೊಂದು ನನ್ನನ್ನು ಕಾಡಿತ್ತು. ಹಾಗಾದರೆ ಆ ಭಾವನೆ ಆಕೆಯಲ್ಲಿ ಇದ್ದಿದ್ದು ನಿಜವೇ?
ಈ ಅನುಮಾನವನ್ನು ಪರಿಹರಿಸಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. "ಸೃಷ್ಟಿ... ನಿನ್ನ ಮನಸ್ಸಲ್ಲಿ ನಿಜಕ್ಕೂ ಆ ರೀತಿಯ ಯೋಚನೆ ಇದೆಯೇ?" ಎಂದು ನೇರವಾಗಿ ಕೇಳಿಯೇ ಬಿಟ್ಟೆ.
ಆದರೆ ನಾನು ಊಹಿಸಿದಂತೆ ಸೃಷ್ಟಿ ತಬ್ಬಿಬ್ಬಾಗಲಿಲ್ಲ, ಕೋಪಗೊಳ್ಳಲಿಲ್ಲ ಅಥವಾ ಹೌದು ಎಂದು ಹೇಳಿ ನಾಚಿಕೆಯಿಂದ ನೆಲ ನೋಡುತ್ತಲೂ ನಿಲ್ಲಲಿಲ್ಲ.
"ಹರಿ... ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ" ಎಂದಷ್ಟೇ ಹೇಳಿ ಅಲ್ಲಿಂದ ಹೊರಟುಹೋದಳು.
ಅಂದಿನಿಂದ ನನಗರಿವಿಲ್ಲದಂತೆ ಸೃಷ್ಟಿಯೊಡನಿದ್ದ ಸಲುಗೆ ಕೊಂಚ ಮರೆಯಾಯ್ತು. ಆಕೆಯೊಡಗಿನ ಮಾತುಗಳಲ್ಲಿ ಕೊಂಚ ಬಿಗು ಕಾಣಿಸಿಕೊಳ್ಳತೊಡಗಿತು. ಇದನ್ನು ಯಾರು ಗಮನಿಸಿದರೋ, ಬಿಟ್ಟರೋ ಗೊತ್ತಿಲ್ಲ. ಆದರೆ ಸೃಷ್ಟಿ... ಇದು ಆಕೆಯ ಗಮನಕ್ಕೆ ಬಾರದಿರುತ್ತದೆಯೇ...
+++
ತ್ತೆ ಮೊಬೈಲ್ ಅರಚತೊಡಗಿತು. ಆಕೆಯೇ... ಬೇರೆ ದಾರಿ ಇರಲಿಲ್ಲ.
"ಹೇಳು ಸೃಷ್ಟಿ..." ಎಂದೆ.
"ಹರಿ... ದಯವಿಟ್ಟು ಅವಾಯ್ಡ್ ಮಾಡಬೇಡ. ನಾನು ನಿಂಜೊತೆ ಮಾತಾಡ್ಲೇಬೇಕು" ಎಂದ ಸೃಷ್ಟಿಗೆ ಇಲ್ಲ ಎನ್ನಲಾಗಲಿಲ್ಲ.
"ಸರಿ... ಸಂಜೆ ವೆಸ್ಟ್ ಎಂಡ್ ಬಳಿ ಸಿಗುತ್ತೇನೆ" ಎಂದಾಗ ಸೃಷ್ಟಿ ನಿಟ್ಟುಸಿರು ಬಿಟ್ಟಿದ್ದು ಕೇಳಿಸಿತು.
ಇಷ್ಟಾದ ಮೇಲೆ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗಲಿಲ್ಲ. ಸೃಷ್ಟಿ ಏನು ಹೇಳಲು ಪ್ರಯತ್ನಿಸುತ್ತಿದ್ದಾಳೆ ಎಂದು ಯೋಚಿಸತೊಡಗಿದೆ. ಅರ್ಥವಾಗಲಿಲ್ಲ... ಅಥವಾ ನಾನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲ.
+++
ಸಂಜೆ ವೆಸ್ಟ್ ಎಂಡ್‌ಗೆ ಕಾಲಿಟ್ಟಾಗ, ಆ ಬೀಚ್ ರೆಸಾರ್ಟ್ ತನ್ನ ಎಂದಿನ ಜೋಶ್‌ನಲ್ಲಿತ್ತು. ಈ ಮೊದಲು ಸೃಷ್ಟಿಯೊಂದಿಗೆ ಅನೇಕ ಬಾರಿ ಇಲ್ಲಿಗೆ ಬಂದಿದ್ದರೂ, ಇಂದೇಕೊ ಆ ವಾತಾವರಣ ವಿಚಿತ್ರವಾಗಿ ಕಂಡಿತು. ಅಲ್ಲೇ ಕೊಂಚ ದೂರದಲ್ಲಿ ಕುಳಿತಿದ್ದ ಸೃಷ್ಟಿ ನನ್ನತ್ತಲೇ ನೋಡುತ್ತಿದ್ದಳು... ಆಕೆಯ ಸನಿಹ ಹೋಗುತ್ತಿದ್ದಂತೆಯೇ ಎದ್ದು ನನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ ನಿಂತ ಸೃಷ್ಟಿ ನನ್ನೊಳಗೆ ಯಾವುದೋ ಆತಂಕ ಹುಟ್ಟುಹಾಕತೊಡಗಿದಳು.
"ಬಹಳ ದಿನಗಳಿಂದ ಗಮನಿಸುತ್ತಿದ್ದೇನೆ ಹರಿ... ನಿನ್ನ ಮಾತು, ವರ್ತನೆ ಎಲ್ಲವೂ ಬದಲಾಗುತ್ತಿದೆ..."
"ಹಾಗೇನೂ ಇಲ್ಲಾ. ಅದು...' ಎಂದು ಸಮರ್ಥಿಸಲು ಹೊರಟ ನನ್ನ ಮಾತುಗಳನ್ನು ಅರ್ಧದಲ್ಲೇ ತಡೆದು, "ಕಾರಣ ಬೇಕಿಲ್ಲ ಹರಿ. ಅದನ್ನೂ ಅರ್ಥಮಾಡಿಕೊಳ್ಳದಷ್ಟು ದಡ್ಡಿಯಲ್ಲ ನಾನು. ಆದರೆ ಒಂದು ತಿಳಿದುಕೋ... ನಮ್ಮಲ್ಲಿ ಹುಟ್ಟುವ ಎಲ್ಲಾ ಭಾವನೆಗಳಿಗೂ ಕಾರಣ ಹುಡುಕಲು ಸಾಧ್ಯವಿಲ್ಲ. ಹುಡುಕಲೂ ಬಾರದು... ನಿನಗೆ ಆತ್ಮೀಯವಾಗಿರುವ ವ್ಯಕ್ತಿಗಳೊಂದಿಗಿರುವಾಗ ನಿನಗೆ ಸಿಗುವ ಅನುಭೂತಿಗೆ ಕಾರಣ ಹುಡುಕುತ್ತಾ ಹೊರಟರೆ ನೀನು ನೆಮ್ಮದಿ ಕಳೆದುಕೊಳ್ಳುತ್ತೀಯೇ ಹೊರತು, ಕಾರಣ ಕಂಡುಕೊಳ್ಳುವುದಿಲ್ಲ" ಎಂದ ಸೃಷ್ಟಿಯ ಮಾತುಗಳು ನನಗ್ಯಾಕೋ ತೀರಾ ಅಪರಿಚಿತವೆನೆಸಿತು.
"ನಿನ್ನ ಜೊತೆ ಇರುವಾಗ ಯಾಕೋ ನಿರಾಳವಾಗಿರುತ್ತೇನೆ. ಏನೋ ಒಂದು ಅವ್ಯಕ್ತ ಖುಷಿ ಸಿಗುತ್ತದೆ. ಆದರೆ, ಅಂತಹ ಭಾವಗಳನ್ನು ಆ ಕ್ಷಣದಲ್ಲಷ್ಟೇ ಅನುಭವಿಸಿ ಸುಮ್ಮನಿದ್ದು ಬಿಡಬೇಕು ಹರಿ. ಆಗಷ್ಟೇ ಅವು ಮಧುರವಾಗುಳಿಯುತ್ತವೆ. ಒಂದು ಸಂಬಂಧವನ್ನು ತೀರಾ ಗೋಜಲಾಗಿಸಿದರೆ, ನಿನ್ನ ಗೊಂದಲಗಳಿಗೆ ಆ ಸಂಬಂಧವೇ ಬಲಿಯಾಗುತ್ತದೆ... ದಯವಿಟ್ಟು ಅದಕ್ಕೆ ಅವಕಾಶ ಮಾಡಿಕೊಡಬೇಡ..." ಎಂದು ಹೇಳಿ ನನ್ನ ತಲೆ ನೇವರಿಸಿ, ಹಣೆಯನ್ನು ಮೃದುವಾಗಿ ಚುಂಬಿಸಿದ ಸೃಷ್ಟಿ ತನ್ನ ಕಾರಿನತ್ತ ಹೆಜ್ಜೆ ಹಾಕಲಾರಂಭಿಸಿದಳು.
ಸ್ವಲ್ಪ ದೂರ ಸಾಗಿದ ನಂತರ ನನ್ನತ್ತ ತಿರುಗಿ, "ಹರಿ... ಈ ಮುತ್ತಿಗೂ ಕಾರಣ ಹುಡುಕುತ್ತಾ ಕೂರಬೇಡ" ಎಂದು ಕಣ್ಣಲ್ಲೇ ತುಂಟ ನಗು ಸೂಸಿ ಹೊರಟುಹೋದಳು. ಆಕೆ ಹೋದೆಡೆಗೆ ನೋಡುತ್ತಾ ನಿಂತೆ. ಆ ವೇಳೆ ಸೃಷ್ಟಿಯ ನಗು ತೀರಾ ಹಿತವೆನೆಸಿತು. ಆದರೆ ಯಾಕೋ ಆ ನಗುವಿಗೆ ಹಾಗೂ ಅದು ನನ್ನಲ್ಲಿ ಸೃಷ್ಟಿಸಿದ ಹಿತಕರ ಭಾವಕ್ಕೆ ಕಾರಣ ಹುಡುಕಬೇಕೆಂದು ಅನಿಸಲಿಲ್ಲ...

Wednesday, 29 April 2009

ಶ್ರೀನಿವಾಸ ಕಲ್ಯಾಣ ಮತ್ತು ಚಿಂತಾಮಣಿ ಪ್ರಸಂಗ

ಲವರಂತೆ ನನಗೂ ನನ್ನ ಹೈಸ್ಕೂಲ್ ಜೀವನ ಮರೆಯಲಾಗದ ನೆನಪುಗಳ ಬುತ್ತಿ. ಅತ್ತ ಸಂಪೂರ್ಣ ಪ್ರೌಢ ವಯಸ್ಸೂ ಅಲ್ಲ, ಇತ್ತ ಮರ್ಕಟ ಬುದ್ಧಿಗೇನೂ ಕಮ್ಮಿ ಇಲ್ಲ ಎಂಬಂತಿದ್ದ ಕಾಲಘಟ್ಟವದು. ಆಗಷ್ಟೇ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್‌ಗೆ ಭಡ್ತಿ ಪಡೆದು ಒಂದು ವರ್ಷ ಸರಿದುಹೋಗಿತ್ತು. ನಮ್ಮೊಂದಿಗೆ ಹೈಸ್ಕೂಲ್‌ನಲ್ಲಿ ಕೈಗೊಂಡಿದ್ದ ಬಹುವಿಧದ ಕಿತಾಪತಿ ಕಾರ್ಯಗಳ ಕಾರಣ ಶಿಕ್ಷಕರು ಸಹಸ್ರ ನಾಮಾರ್ಚನೆ ಸಹಿತವಾಗಿದ ನೀಡಿದ್ದ ಹಲವು 'ಬಿರುದು'ಗಳನ್ನು ಹೊಂದಿದ್ದ ತರ್ಲೆ ಬಳಗವೂ ಇತ್ತು. ಚಿಂತಾಮಣಿ (ಗಣಿತದ ಕಾಗುಣಿತಗಳನ್ನು ತನ್ನದೇ ವಿಧಾನದಲ್ಲಿ ಬಿಡಿಸುತ್ತಿದ್ದ ಮೇಧಾವಿ ನಿತ್ಯಾನಂದನಿಗೆ ನಾವಿಟ್ಟಿದ್ದ ಅಡ್ಡ ಹೆಸರಿದು), ನಾರಾಯಣ, ಶಿವು, ರಾಜೇಶ್, ಸತೀಶ್... ಹೀಗೆ ಹಲವು ಶಾಶ್ವತ ಸದಸ್ಯರನ್ನು ಹೊಂದಿದ್ದ ಆ ತರ್ಲೆ ಬಳಗದಲ್ಲಿ ನಾನೂ ಕೆಲವೊಮ್ಮೆ ಅತಿಥಿ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೆ.

ಇಂತಿಪ್ಪ ಈ ಗುಂಪಿಗೆ ನಮ್ಮದೇ ತರಗತಿಯಲ್ಲಿದ್ದ ಒಂದು ಹುಡುಗಿಯನ್ನ ಕಂಡರಾಗುತ್ತಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಈ ತರ್ಲೆ ಬಳಗ ಮಾಡುವ ಎಲ್ಲಾ ಆವಾಂತರಗಳನ್ನು ವರದಿಯನ್ನು ಚಾಚೂ ತಪ್ಪದೆ ಕ್ಲಾಸ್ ಟೀಚರ್‌ಗೆ ಸಲ್ಲಿಸಿ, ಅವರಿಂದ ಪ್ರತಿದಿನ ಮಹಾಪೂಜೆ ಮಾಡಿಸುತ್ತಿದ್ದ ಆಕೆಯ ಮೇಲೆ ಇವರಿಗೆ ಸಿಟ್ಟು ಬರುವುದು ಸಹಜ ತಾನೇ... ಪಾಪ! ಇಷ್ಟಕ್ಕೂ ಅವಳದೇನೂ ತಪ್ಪಿರಲಿಲ್ಲ ಬಿಡಿ. ತರಗತಿಯ ಮಾನಿಟರ್ ಆಗಿ, ಶಿಸ್ತು ಕಾಪಾಡಿಕೊಳ್ಳುವುದಕ್ಕೆ ಆಕೆ ಅಷ್ಟಾದರೂ ಮಾಡದಿದ್ದರೆ ಹೇಗೆ? ಆದರೆ ಈ ಮಾತು ನಮ್ಮ ಮೊಂಡು ಬುದ್ಧಿಗೆ ಎಲ್ಲಿ ತಿಳಿಯಬೇಕು. ಹೇಗಾದರೂ ಮಾಡಿ ಒಂದು ದಿನ ಆಕೆಗೆ ನಮ್ಮ ಕ್ಲಾಸ್ ಟೀಚರ್ ಕೈಯಿಂದ ಮಹಾಮಂಗಳಾರತಿ ಮಾಡಿಸಬೇಕು ಎಂಬ ಭೀಷ್ಮ ಪ್ರತಿಜ್ಞೆಯನ್ನು ತರ್ಲೆ ಬಳಗ ಮಾಡಿಯೇಬಿಟ್ಟಿತ್ತು. ಅಂತಹ ಒಂದು ಸಂದರ್ಭಕ್ಕಾಗಿ ಹೊಂಚು ಹಾಕಿ ಕಾಯುತ್ತಿತ್ತು. ಆದರೆ ಇದ್ಯಾವುದರ ಪರಿವೇ ಇಲ್ಲದ ಆಕೆ ಮಾತ್ರ ತನ್ನ ಮಾನಿಟರಿಂಗ್ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದಳು. ಈ ನಡುವೆ ನಮ್ಮ ತರ್ಲೆ ಬಳಗದ ಪ್ರತಿಜ್ಞೆ ನೆರವೇರುವ ದಿನ ಬಂದೇ ಬಿಟ್ಟಿತು...

"ಇಲ್ಲ... ಇನ್ನು ನನ್ನಿಂದ ಸಾಧ್ಯವಿಲ್ಲ. ಇವತ್ತು ಒಂದು ಕೈ ನೋಡೇ ಬಿಡ್ತೀನಿ..." ಎನ್ನುತ್ತಾ ಅವಸವರಸವಾಗಿ ನಾರಾಯಣ ಕ್ಲಾಸ್ ರೂಮ್‌ಗೆ ನುಗ್ಗಿದಾಗಲೇ ಏನೋ ಎಡವಟ್ಟಾಗಿದೆ ಅಂತ ನಮಗೆಲ್ಲಾ ಗೊತ್ತಾಯ್ತು. ಕೊನೆ ಬೆಂಚ್‌ನಲ್ಲಿ ಕುಳಿತು ಚಿಂತಾಮಣಿ ಮನೆಯಿಂದ ತಂದಿದ್ದ ನೆಲಗಡಲೆ ಸವಿಯುತ್ತಿದ್ದ ನಾವು ಒಂದು ಕ್ಷಣ ನಮ್ಮ ಕೈ-ಬಾಯಿಗಳಿಗೆ ವಿರಾಮ ನೀಡಬೇಕಾಯ್ತು. ಕೆಂಪಿಟ್ಟಿದ್ದ ನಾರಾಯಣನ ಮುಖ ನೋಡಿ, ಚಿಂತಾಮಣಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ಅರ್ಥವಾಯ್ತು. ವಿಚಾರಿಸಿದಾಗ, ಬೆಳಿಗ್ಗೆ ನಮ್ಮ ಮಾನಿಟರ್ ಆ ವಾರದಲ್ಲಿ ತರ್ಲೆ ಬಳಗ ಮಾಡಿದ ಕಿತಾಪತಿಗಳ ಪಟ್ಟಿಯನ್ನು ಕ್ಲಾಸ್ ಟೀಚರ್‌ಗೆ ಕೊಟ್ಟಿರುವುದ್ದಾಗಿಯೂ, ಅವುಗಳಲ್ಲಿ ಶ್ರೀನಿವಾಸ ಮಾಡಿದ ಕಲ್ಯಾಣ ಕಾರ್ಯಗಳ ಸಂಖ್ಯೆ ಆಗಷ್ಟೇ ಮುಗಿದಿದ್ದ ಕ್ಲಾಸ್ ಟೆಸ್ಟ್‌ನಲ್ಲಿ ಆತ ಪಡೆದ ಅಂಕಗಳಿಗಿಂತ ಹೆಚ್ಚಾಗಿದ್ದುದಾಗಿಯೂ ಹಾಗೂ ಆ ಕಾರಣದಿಂದ ಮೇಡಂ ಸಿಟ್ಟಾಗಿ, ಮಧ್ಯಾಹ್ನದ ಲಂಚ್ ಅವರ್‌ನಲ್ಲಿ ಆತನನ್ನು ಸ್ಟಾಫ್ ರೂಮ್‌ಗೆ ಕರೆದು ಅರ್ಧ ಗಂಟೆ 'ಸ್ಷೆಷಲ್ ಕ್ಲಾಸ್' ತೆಗೆದುಕೊಂಡಿರುವುದಾಗಿಯೂ ತಿಳಿದು ಬಂತು. ಇಷ್ಟು ಹೇಳುವಷ್ಟರಲ್ಲಿ ಮಧ್ಯಾಹ್ನ ನಮ್ಮೊಂದಿಗೆ ಊಟಕ್ಕೆ ಬರದ ಶ್ರೀನಿ ಎಲ್ಲಿ ಹೋಗಿದ್ದ ಎಂಬ ವಿಚಾರ ನಮಗೆಲ್ಲಾ ಸ್ಪಷ್ಟವಾಯಿತು.

"ಸರಿ, ಆದದ್ದು ಆಗಿ ಹೋಯ್ತು. ಇದೆಲ್ಲಾ ನಮಗೇನೂ ಹೊಸದೇ? ತಗೋ ಕಡ್ಲೆ ತಿನ್ನು..." ಎಂದು ಚಿಂತಾಮಣಿ ತನ್ನ ಎಂದಿನ ಕೂಲ್ ಸ್ಟೈಲ್‌ನಲ್ಲಿ ಹೇಳಿದರೂ ಶ್ರೀನಿ ಕೇಳಲಿಲ್ಲ. ಪ್ರಾಯಶಃ 'ಸ್ಷೆಷಲ್ ಕ್ಲಾಸ್' ಸಖತ್ ಸ್ಟ್ರಾಂಗ್ ಆಗಿತ್ತು ಎಂದು ಕಾಣುತ್ತದೆ. "ಹೇಗಾದರೂ ಅವಳಿಗಿಂದು 'ಸ್ಪೆಷಲ್ ಕ್ಲಾಸ್' ಅಟೆಂಡ್ ಮಾಡೋದು ಎಷ್ಟು ಕಷ್ಟ ಎಂದು ತಿಳಿಯಲೇ ಬೇಕು. ಏನಾದ್ರೂ ಮಾಡು. ಇಲ್ಲಾಂದ್ರೆ ನನ್ನ ಮನಸ್ಸಿಗೆ ಸಮಾಧಾನ ಇರೋಲ್ಲ..." ಎಂದು ಮನನೊಂದು ನುಡಿದ ಶ್ರೀನಿಯ ದುಃಖ ಕಡಿಮೆ ಮಾಡಲೇಬೇಕು ಎಂಬ ಆಲೋಚನೆ ಚಿಂತಾಮಣಿಯ ತಲೆಯಲ್ಲಿ ಭದ್ರವಾಗಿ ತನ್ನ ಅಧಿಪತ್ಯ ಸ್ಥಾಪಿಸಿಬಿಟ್ಟಿತು. ಏನು ಮಾಡುವುದು ಎಂದು ಯೋಚಿಸುತ್ತಾ, ಕೈಯಲ್ಲಿದ್ದ ನೆಲಗಡಲೆಯಿಂದಲೇ ತನ್ನ ತಲೆ ಕೆರೆದುಕೊಂಡ ಚಿಂತಾಮಣಿ ತಕ್ಷಣವೇ ಯುರೇಕಾ! ಎನ್ನುತ್ತಾ ಮೇಲೆಳುವುದಕ್ಕೂ, ಲಂಚ್ ಅವರ್ ಮುಗಿದು ಮಧ್ಯಾಹ್ನದ ಪ್ರಥಮ ಕ್ಲಾಸ್‌ನ ಬೆಲ್ ಬಾರಿಸುವುದಕ್ಕೂ ಸರಿಹೋಯ್ತು. ಅಷ್ಟರಲ್ಲಿ ಲೈಬ್ರರಿಯಿಂದ ಹುಡುಗಿಯರ ದಂಡು ಕ್ಲಾಸ್‌ಗೆ ನುಗ್ಗಿತು. ಜೊತೆಯಲ್ಲೇ ನಮ್ಮ ಮಾನಿಟರ್ ಬಂದು, ಚಿಂತಾಮಣಿಯ ಕುಳಿತಿದ್ದ ಪಕ್ಕದ ಸಾಲಿನ, ಎರಡನೆಯ ಬೆಂಚ್‌ನಲ್ಲಿ ಕುಳಿತು ತಾನು ಮಾಡಿಕೊಂಡಿದ್ದ ನೋಟ್ಸ್‌ಗಳನ್ನು ಮತ್ತೊಮ್ಮೆ ಪರೀಕ್ಷಿಸಿ ತನ್ನ ಬ್ಯಾಗ್‌ಗೆ ಸೇರಿಸಿದಳು. ಅದಾದ ಐದು ನಿಮಿಷಕ್ಕೇ ಕ್ಲಾಸ್‌ಗೆ ಬಂದ ಮೇಡಂ ಮುಖದಲ್ಲಿ ಇನ್ನೂ ಸಿಟ್ಟಿನ ಛಾಯೆಯಿತ್ತು. ನಮಗೆಲ್ಲಾ ಹಿಂದಿನ ದಿನ ಜಿಯಾಗ್ರಫಿ ಸರ್ ಪಾಠ ಮಾಡುವಾಗ ವಿವರಿಸಿದ್ದ, ಸ್ಫೋಟಿಸಲು ಸಿದ್ಧವಾಗಿರುವ ಜ್ವಾಲಾಮುಖಿಯ ನೆನಪಾಯ್ತು. ಇವತ್ತೇನಾದರೂ ತರ್ಲೆ ಮಾಡಿದ್ರೆ ಘೋರ ಶಿಕ್ಷೆ ಖಂಡಿತಾ ಎಂದರಿತ ನಾವು, ಮೇಡಂ ಮುಖ ನೋಡುವ ಧೈರ್ಯ ಸಾಲದೆ ಪುಸ್ತಕದೊಳಗೆ ಮಸ್ತಕವನ್ನು ಹುದುಗಿಸಿ ಪಾಠ ಕೇಳುವ ಸೋಗು ಹಾಕಲಾರಂಭಿಸಿದೆವು.

ಹೀ
ಗೆ 15 ನಿಮಿಷ ಸರಿದು ಹೋಯ್ತು. ತರಗತಿಯಲ್ಲೆಲ್ಲಾ ಓಡಾಡುತ್ತಾ ಪಾಠ ಮಾಡುವುದನ್ನು ರೂಢಿಸಿಕೊಂಡಿದ್ದ ಮೇಡಂ, ಮಾನಿಟರ್ ಕುಳಿತಿದ್ದ ಸ್ಥಳದ ಮುಂದೆ ನಿಂತು ಏಕೋ ಒಂದೆರಡು ಬಾರಿ ಕೆಮ್ಮಿದರು. ಮತ್ತೆ ಐದು ನಿಮಿಷ ಕಳೆಯಿತು. ಇದ್ದಕ್ಕಿದ್ದಂತೆ ಮೇಡಂ ಧ್ವನಿಯಲ್ಲಾದ ಬದಲಾವಣೆ ಅವರ ಸಿಟ್ಟು ಈಗಾಗಲೇ ತನ್ನ ಮಿತಿಯನ್ನು ಮೀರಿದ್ದನ್ನು ಸ್ಪಷ್ಟಪಡಿಸಿತು. ಇನ್ನೇನು... ಅವರ ಸಿಟ್ಟಿನ ಲಾವಾ ಯಾರದೋ ತಲೆಯ ಮೇಲೆ ಅಪ್ಪಳಿಸಲಿದೆ, ಬಹುಶಃ ಶ್ರೀನಿವಾಸ ಮತ್ತೇನಾದರೂ ಆವಾಂತರ ಮಾಡಿರಬೇಕು ಎಂದು ಅವನ ಕಡೆ ತಿರುಗಿದ್ದೇ ತಡ... "ವಾಣಿ..." ಎಂದು ಅಬ್ಬರಿಸಿದ ಮೇಡಂ ಆಕೆಯತ್ತ ಅಸಹನೀಯವಾಗಿ ದಿಟ್ಟಿಸುತ್ತಿರುವುದು ಕಂಡುಬಂತು. ಅರೆ... ವಾಣಿ ಅಂದರೆ ನಮ್ಮ ಮಾನಿಟರ್ ಹೆಸರು.
"ಮಾನಿಟರ್ ಆಗಿ ನೀನೇ ಡಿಸಿಪ್ಲೀನ್ ಮೈಂಟೇನ್ ಮಾಡದಿದ್ರೆ ಹೇಗೆ? ಇದೇನಾ ನೀನು ಕಲಿತಿರೋದು? ಎಂದು ಆಕೆ ಕುಳಿತಿದ್ದ ಜಾಗದತ್ತ ಬೆಟ್ಟು ಮಾಡಿ ತೋರಿಸಿ ಗುಡುಗಲು ಆರಂಭಿಸಿದರು. "ವಾಣಿ, ಇದು ಹೇಗಾಯ್ತೋ ಗೊತ್ತಿಲ್ಲ ಮೇಡಂ..." ಎಂದು ಪರಿಪರಿಯಾಗಿ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದರೂ ಅವರು ಶಾಂತರಾಗಲಿಲ್ಲ. ಇಷ್ಟಕ್ಕೂ ಮೇಡಂ ಸ್ವಭಾವವೇ ಹಾಗಿತ್ತು. ಅವರಿಗೆ ಸಿಟ್ಟು ಬಂದರೆ ದೂರ್ವಾಸ, ವಿಶ್ವಾಮಿತ್ರರೂ ನಾಚಬೇಕು.

ಷ್ಟಕ್ಕೂ ಆಕೆ ಮಾಡಿದ್ದಾದರೂ ಏನು? ಎಂದು ತಲೆಕೆರೆದುಕೊಳ್ಳುತ್ತಿರುವಾಗಲೇ ನನ್ನ ದೃಷ್ಟಿ ವಾಣಿ ನಿಂತಿದ್ದ ಜಾಗದತ್ತ ಬಿತ್ತು... ಅಲ್ಲೆಲ್ಲಾ ನೆಲಗಡಲೆ ಸಿಪ್ಪೆ ಹರಡಿತ್ತು...!! ಈಚೆ ಏನೂ ಗೊತ್ತಿಲ್ಲದಂತೆ ಕುಳಿತಿದ್ದ ಚಿಂತಾಮಣಿಯ ತುಟಿಯಂಚಿನಲ್ಲಿ ಕಂಡೂ ಕಾಣದ ನಗು... ಸಿಟ್ಟಿನಿಂದ ಕೆಂಪಾಗಿದ್ದ ಶ್ರೀನಿಯ ಮೊಗದಲ್ಲಿ ಅಚ್ಚರಿ... ಇದನ್ನೆಲ್ಲಾ ನೋಡಿದ ಮೇಲೆ ಏನು ನಡೆಯಿತು ಎಂಬುದು ಸ್ಪಷ್ಟವಾಯಿತು. ಆದರೆ ಸಿಟ್ಟಿನ ಭರದಲ್ಲಿದ್ದ ಮೇಡಂ, ತಮ್ಮ ಪ್ರಿಯ ಶಿಷ್ಯೆ ಹೀಗೆ ಕ್ಲಾಸ್‌ನಲ್ಲಿ ನೆಲಗಡಲೆ ತಿಂದು ಸಿಪ್ಪೆ ಎಸೆಯುತ್ತಾಳೆಯೇ? ಎಂದು ಆಲೋಚಿಸಲಿಲ್ಲ. ವಾಣಿಯ ಮಾನಿಟರಿಂಗ್ ನ ಬಿಸಿ ಅನುಭವಿಸಿದ್ದ ಯಾರೊಬ್ಬರೂ ನಿಜ ಹೇಳುವ ಮನಸ್ಸು ಮಾಡಲಿಲ್ಲ... ಅಂದೇ ಕೊನೆ... ವಾಣಿ ಮತ್ಯಾವತ್ತೂ ಯಾರ ಕಲ್ಯಾಣ ಕಾರ್ಯಗಳ ಕುರಿತೂ ವರದಿ ತಯಾರಿಸಲಿಲ್ಲ... ಅಷ್ಟೇ ಅಲ್ಲಾ, ಯಾರು, ಎಷ್ಟೇ ಪ್ರೀತಿಯಿಂದ ಕೊಟ್ಟರೂ ನೆಲಗಡಲೆ ಮಾತ್ರ ತಿನ್ನುತ್ತಿರಲಿಲ್ಲ.

Thursday, 12 February 2009

ಪ್ರೇಮ ಲಹರಿ

''ಲಹರಿ... ಮೋಹ ಲಹರಿ...
ನನ್ನಾ... ಮನವ ಸವರಿ...

ಮೌನ
ಮುರಿದಾಗಿದೆ..
ಮಾತು ಬರದಾಗಿದೆ...

ಹೇಳು ಬರಲೇನು ನಿನ್ನೊಂದಿಗೆ...
''

ದ್ದಾಗಿನಿಂದ ಕಾಡುತ್ತಿದ್ದ ಹಾಡನ್ನು ಗುನುಗುನಿಸುತ್ತ ಹೊರ ಬಂದ ನಾನು ಯಾವುದೋ ಲಹರಿಯಲ್ಲಿ ಕಳೆದು ಹೋಗಿದ್ದೆ. ಅದೇ ಗುಂಗಿನಲ್ಲಿ ಸ್ನಾನ ಮುಗಿಸಿ, ಹೊರಗೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ, ನಿತ್ಯದಂತೆ ಕಣ್ಣು ಫ್ರಿಜ್ ಮೇಲೆ ತಣ್ಣಗೆ ಕುಳಿತಿದ್ದ ಪುಟ್ಟ ಕ್ಯಾಲೆಂಡರ್'ನತ್ತ ಸರಿಯಿತು. ಕೆಂಪು ಇಂಕ್‌ನಲ್ಲಿ ಗುರುತುಮಾಡಿದ್ದ ದಿನಾಂಕವನ್ನು ನೋಡುತ್ತಿದ್ದಂತೆಯೇ ಮೈಮನಗಳಲ್ಲಿ ಪುಳಕ. ಅದು ಫೆಬ್ರುವರಿ 14. ಪ್ರೇಮಿಗಳ ದಿನ... ಅಂದರೆ ಮೂರು ವರ್ಷದ ಹಿಂದೆ ಇದೇ ದಿನದಂದು ನಾನವಳನ್ನು ನೋಡಿದ್ದು. ಸ್ವಪ್ನಾ... ಹೆಸರನ್ನು ನೆನೆದೊಡನೇ ಮೈಮನಸ್ಸುಗಳಲ್ಲಿ ರೋಮಾಂಚನ ಹೊಯ್ದಾಡತೊಡಗಿತು. ಸ್ವಪ್ನಾಳನ್ನು ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಿದ್ದಂತೆಯೇ ತುಟಿಯಂಚಿನಲ್ಲಿ ಕಿರುನಗೆಯೊಂದು ಅರಳಿತು. ಅದೊಂದು ಆಕಸ್ಮಿಕ ಭೇಟಿ. ಅಥವಾ ಒಂದು ಸಣ್ಣ ಅಪಘಾತ.
***
ಕಾಫೀ ಡೇ ಎದುರು ಕಾರು ನಿಲ್ಲಿಸಿ, ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಮುಂದೆ ಸ್ಕೂಟಿಯಲ್ಲಿ ಅಡ್ಡಾದಿಡ್ಡಿಯಾಗಿ ಬರುತ್ತಿದ್ದ ಹುಡುಗಿ ಕಣ್ಣಿಗೆ ಬಿದ್ದಳು. ಅರೆ! ಇದೇನು... ಆಕೆ ನನ್ನ ಕಾರಿನತ್ತಲೇ ಬರುತ್ತಿದ್ದಾಳೆ. ಬರೋ ರೀತಿ ನೋಡಿದರೆ ಪಕ್ಕಾ ’ಎಲ್ ಬೋರ್ಡ್’ ಥರಾ ಇದೆ.
"ಹೇಯ್! ಸ್ಟಾಪ್..." ಎಂದು
ನಾನು ಕೂಗುಷ್ಟರಲ್ಲಿ, 'ದಢ್!!!!!!!!!!!' ಎಂಬ ಸದ್ದು ಕೇಳಿಸಿತು.
ಕಣ್ಣು ಮುಚ್ಚಿ ಕಣ್ಣು ತೆರೆ
ಯುವಷ್ಟರಲ್ಲಿ ಎದುರಿಗಿದ್ದ ಸ್ಕೂಟಿ ಮಾಯ. ಏನಾಯ್ತು ಎಂದು ಇಳಿದು ನೋಡಿದರೆ ಮುಂದೆ ಬಿದ್ದಿದ್ದ ಸ್ಕೂಟಿ ಕಾರಿಗೆ ಮುತ್ತಿಕ್ಕುತ್ತಿತ್ತು. ಕಾರಿಗೆ ಡ್ಯಾಮೇಜ್ ಆಗಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವಷ್ಟೇ ನಾನು ಅದರ ಒಡತಿಯತ್ತ ನೋಡಿದ್ದು. ಸ್ಕೂಟಿಯ ಭಾರ ತಾಳಲಾರದೆ, ಕೊಸರಾಡುತ್ತಿದ್ದ ಆಕೆಯನ್ನು ನೋಡುವಾಗ ನಗು ಬಂದರೂ ತಡೆದುಕೊಂಡೆ. ಸ್ಕೂಟಿಯನ್ನು ಮೇಲೆತ್ತಿ ಅವಳತ್ತ ಕೈಚಾಚಿದೆ. ನನ್ನ ಕೈಹಿಡಿದುಕೊಂಡು, ಕಷ್ಟಪಟ್ಟು ಎದ್ದು ನಿಂತ ಆಕೆಯ ಮೊಗದಲ್ಲಿ ಒಂದು ಸಣ್ಣ ಭಯ ಮಿಶ್ರಿತ ಗೊಂದಲ.
"ಐ ಯಾಮ್... ಸೋ... ಸ್ಸಾರಿ. ಬ್ರೇಕ್ ಸರಿಯಾಗಿ ಹಿಡಿಯಲಿಲ್ಲ..." ಎಂಬ ವಾಕ್ಯಗಳನ್ನು ಪ್ರಯಾಸದಿಂದ ಉಸುರಿದ ಆಕೆಯ ಮೊಗ ಭಯದಿಂದ ಕೆಂಪಾಗಿತ್ತೋ ಅಥವಾ ನಾಚಿಕೆಯಿಂದ ರಂಗೇರಿತ್ತೋ ನನಗೆ ತಿಳಿಯಲಿಲ್ಲ. ಆದರೆ ತುಂಟಾಟವಾಡಿ ಅಮ್ಮನ ಕೈಯಲ್ಲಿ ಸಿಕ್ಕಿಹಾಕಿಕೊಂಡ ಪುಟ್ಟ ಹುಡುಗಿಯಂತೆ ನಿಂತಿದ್ದ ಆಕೆಯನ್ನು ಬೈಯ್ಯುವ ಉದ್ದೇಶ ಮಾತ್ರ ಮಾಯವಾಗಿತ್ತು.
"ಇಟ್ಸ್ ಓಕೆ. ನೀವು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ್ರಿ ಸರಿ. ಆದ್ರೆ ರಸ್ತೆಯಲ್ಲಿ ಓಡಾಡ್ತೀರೋ ಇನ್ಯಾವುದಾದ್ರೂ ವಾಹನಕ್ಕೆ ಡಿಕ್ಕಿ ಹೊಡೆದಿದ್ರೆ, ಇಷ್ಟು ಹೊತ್ತಿಗೆ ಸ್ಸಾರಿ ಕೇಳೋ ಸ್ಥಿತಿಯಲ್ಲಿ ನೀವು ಇರುತ್ತಿರಲಿಲ್ಲ. ಸ್ಕೂಟಿಯಲ್ಲಿ ಓಡಾಡುವಾಗ ಕೊಂಚ ಎಚ್ಚರಿಕೆಯಿಂದಿದ್ದರೆ ಒಳ್ಳೇದು. ಮನೆಯಿಂದ ಹೊರಡೋ ಮುಂಚೆ ಗಾಡಿ ಚೆಕ್ ಮಾಡಿಕೊಳ್ಳಬಾರದೆ...?" ಎಂದು ಸೌಮ್ಯವಾಗಿ ಹೇಳಿದಾಗ ಆಕೆಯ ಮುಖ ಮತ್ತಷ್ಟು ಕೆಂಪಾಯಿತು. ಈ ಬಾರಿ ಅದು ನಾಚಿಕೆಯಿಂದಲೇ ಇರಬೇಕು.
ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ, "ಅಯ್ಯಯ್ಯೋ! ಏನ್ರೀ ಇದು. ಡಿಕ್ಕಿ ಹೊಡೆದು ಏನಾದ್ರೂ ಡ್ಯಾಮೇಜ್ ಮಾಡ್ತೀರಾ. ಗಲಾಟೆ ಮಾಡಿ, ಸ್ವಲ್ಪ ಹೆಚ್ಚೇ ಕಾಸು ಕಿತ್ಕೊಂಡು ಸಾಯಂಕಾಲ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡೋಣಾ ಅಂತ ಪ್ಲಾನ್ ಹಾಕ್ಕೊಂಡಿದ್ರೆ ಕಾರಿಗೇನೂ ಆಗಿಲ್ವಲ್ರೀ. ನನ್ನ ಪಾರ್ಟಿ ಪ್ಲಾನ್ ಎಲ್ಲಾ ಹಾಳಾಗೋಯ್ತು..." ಎಂದು ಹುಸಿಗೋಪದಿಂದ ಹೇಳಿದರೆ, ನಗುವ ಸರದಿ ಅವಳದಾಯ್ತು.
"ಐಯಾಮ್... ರಿಯಲಿ... ಸ್ಸಾರಿ. ಬ್ರೇಕ್..." ಎಂದು ಮತ್ತೊಮ್ಮೆ ಉಲಿಯುತ್ತಿದ್ದ ಆಕೆಯ ಮಾತುಗಳಿಗೆ ಅರ್ಧದಲ್ಲೇ ಬ್ರೇಕ್ ಹಾಕಿ, "ನಿಮಗೆ ಏನೂ ಆಗಿಲ್ಲ ತಾನೆ?" ಎಂದೆ.
"ಇಲ್ಲಾ. ನನಗೇನೂ ಆಗಿಲ್ಲ. ನಿಮಗೆ?" ಎಂದು ಮರುಪ್ರಶ್ನೆ ಎಸೆದ ಆಕೆಯ ಮುಖದಲ್ಲಿ ಶುದ್ಧ ಮಗುವಿನ ಮುಗ್ಧತೆ.
ಈಗಂತೂ ನನಗೆ ನಗು ತಡೆಯಲಾಗಲಿಲ್ಲ. "ಅಲ್ಲಾ ಕಣ್ರೀ. ಸ್ಕೂಟಿಯಲ್ಲಿ ಬಂದು ಡಿಕ್ಕಿ ಹೊಡೆದಿದ್ದು ನೀವು. ನಿಮಗೇ ಏನೂ ಆಗಿಲ್ಲ ಅಂದ ಮೇಲೆ ಕಾರಿನೊಳಗಿದ್ದ ನನಗೇನಾಗುತ್ತೆ" ಎಂದು ನಗುವನ್ನು ತಡೆದುಕೊಳ್ಳುವ ವಿಫಲ ಯತ್ನ ಮಾಡಿದೆ. ಪಾಪ! ಆ ಹುಡುಗಿಯ ಕೆನ್ನೆ ಮತ್ತಷ್ಟು ರಂಗೇರಿತು. ಆಗಷ್ಟೆ ಆಕೆಯನ್ನು ನಾನು ಸರಿಯಾಗಿ ಗಮನಿಸಿದ್ದು. ತಿಳಿ ಹಸಿರು, ಕಡುನೀಲಿ ಮಿಶ್ರಿತ ಚೂಡಿದಾರ್‌ನಲ್ಲಿ ಆಕೆಯ ಗೌರವರ್ಣ ಮಿಂಚುತ್ತಿತ್ತು. ಗಾಳಿಯಲ್ಲಿ ಲಾಸ್ಯವಾಡುತ್ತಿದ್ದ ಮುಂಗುರುಳು. ನೀಳ ಮೂಗು. ಓಹ್! ಗಿಣಿ ಮೂಗು ಎಂದರೆ ಇದೇ ಇರಬೇಕು. ಗೊಂದಲ, ನಾಚಿಕೆ ಹಾಗೂ ಮುಗ್ಧತೆ ಇವೆಲ್ಲವೂ ಮೇಳೈಸಿದಂತಿದ್ದ ಆ ಕಣ್ಣುಗಳಂತೂ ಸ್ನಿಗ್ಧ ಸೌಂದರ್ಯದ ಚಿಹ್ನೆಗಳಂತಿದ್ದವು. ಅರೆ ಇದೇನಿದು... ಮತ್ತದೇ ಹಳೆಯ ಪದಗಳನ್ನೇ ಬಳಸಿ ಈಕೆಯನ್ನು ವರ್ಣಿಸುತ್ತಿದ್ದೇನಲ್ಲಾ ಎಂದು ಒಂದು ಕ್ಷಣ ಅನಿಸಿದರೂ, ಯಾಕೋ ಹೊಸ ಶಬ್ಧಗಳನ್ನು ಕಟ್ಟಿ ಆಕೆಯನ್ನು ಬಣ್ಣಿಸಲು ಸಾಧ್ಯವಾಗಲಿಲ್ಲ... ನನ್ನಲ್ಲಿದ್ದ ಪದಗಳೆಲ್ಲಾ ಮುಗಿದುಹೋದವೇ?! ಎಂಬ ಅಳುಕು ಕಾಡತೊಡಗಿತು. ಏನೋ ಗೊಂದಲ...
'ಆ ಕಣ್ಣುಗಳು...' ಇನ್ನೇನು ಆಕೆಯ ಸೌಂದರ್ಯೋಪಾಸನೆಯಲ್ಲಿ ಕಳೆದುಹೋಗಬೇಕು ಎನ್ನುವಷ್ಟರಲ್ಲಿ ಆಕೆ ನಿಧಾನಕ್ಕೆ ಸ್ಕೂಟಿಯನ್ನು ಹತ್ತಿದಳು. ಇನ್ನು ರಸ್ತೆಯಲ್ಲಿ ನಿಂತು ಇತರರಿಗೆ ಪುಕ್ಕಟೆ ಮನೋರಂಜನೆ ಒದಗಿಸುವುದು ಬೇಡ ಎಂದು ನಾನೂ ಕಾರಿನತ್ತ ನಡೆದೆ.
ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ, "ನಿಮ್ಮ ಪಾರ್ಟಿ ಪ್ಲಾನ್ ಹಾಳು ಮಾಡೋಕೆ ನಂಗ್ಯಾಕೋ ಇಷ್ಟ ಆಗ್ತಿಲ್ಲಾ. ನಿಮಗೆ ಅಭ್ಯಂತರ ಇಲ್ಲಾಂದ್ರೆ ಇಲ್ಲೇ ಒಂದು ಕಫ್ ಕಾಫಿ ಕುಡಿಯೋಣ್ವಾ" ಎಂದ ಆಕೆಯ ಕಣ್ಣುಗಳಲ್ಲಿ ತುಂಟ ನಗು. ಬೇಡವೆಂದು ನಿರಾಕರಿಸಲು ನನ್ನ ಬಳಿ ಕಾರಣಗಳಿರಲಿಲ್ಲ.
ಮುಂದಿನ 5 ನಿಮಿಷದಲ್ಲಿ ಕಾಫಿ ಡೇಯ ಸೌತ್ ಕಾರ್ನರ್ ಟೇಬಲ್ ಮೇಲೆ ನಮ್ಮಿಬ್ಬರ ಕಾಫಿ ಕಪ್‌ನಿಂದ ಹಬೆಯಾಡುತ್ತಿತ್ತು.
***
"ಆದಿ... ಇನ್ನೂ ರೆಡಿಯಾಗಿಲ್ವಾ?" ಎಂದು ನನ್ನ ಪತ್ನಿ ಕರೆದಾಗಲೇ ನಾನು ಮೂರು ವರ್ಷದ ಹಿಂದಿನ ನೆನಪಿನಿಂದ ವಾಸ್ತವ ಪ್ರಪಂಚಕ್ಕೆ ಮರಳಿದ್ದು. ಮಹಡಿಯಿಂದ ನಿಧಾನವಾಗಿ ಇಳಿದು ಬರುತ್ತಿದ್ದ ನನ್ನಾಕೆಯನ್ನು ನೋಡಿದೆ. ಆಗಷ್ಟೇ ಸ್ನಾನ ಮುಗಿಸಿದ್ದರಿಂದ ಆಕೆಯ ನೀಳ ಕೇಶರಾಶಿಯಿಂದ ನೀರು ತೊಟ್ಟಿಕ್ಕುತ್ತಿತ್ತು. ಕಡುಗೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ದಂತದ ಗೊಂಬೆ. ಸ್ನಿಗ್ಧ ಸೌಂದರ್ಯ ತುಂಬಿ ತುಳುಕುತ್ತಿದ್ದ ಆ ಕಣ್ಣುಗಳು. ಹೌದು ಅವೇ ಕಣ್ಣುಗಳು. ಅವೇ ಅಲ್ಲವೆ, ಪ್ರಥಮ ಭೇಟಿಯಲ್ಲೇ ನನ್ನನ್ನು ಸಂಪೂರ್ಣ ಶರಣಾಗತನಾಗುವಂತೆ ಮಾಡಿದ್ದು. ‘ಕಾಫಿ ಡೇ’ಯಲ್ಲಿ ನನ್ನಲ್ಲಿದ್ದ ಎಲ್ಲಾ ಧೈರ್ಯವನ್ನು ಒಗ್ಗೂಡಿಸಿ ಸ್ವಪ್ನಾಳಿಗೆ ಪ್ರಪೋಸ್ ಮಾಡುವಂತೆ ಪ್ರೇರೆಪಿಸಿದ್ದು. ಅಲ್ಲಿಂದ ಏನೂ ಹೇಳದೆ ಗಾಬರಿಯಿಂದ ಎದ್ದುಹೋದ ಸ್ವಪ್ನಾಳನ್ನು ಬಿಡದೇ ಬೆನ್ನುಹತ್ತಿ, ಕಾಡಿಸಿದ ನನ್ನ ಪ್ರೀತಿಗೆ ಒಪ್ಪಿಗೆಯ ಮುದ್ರೆ ಒತ್ತಿದ್ದು ಸಹ ಅವೇ ಕಣ್ಣುಗಳಲ್ಲವೆ... ಅಬ್ಬಾ! ನೆನೆಸಿಕೊಂಡರೆ ಎಲ್ಲಾ ಕನಸಿನಲ್ಲಿ ನಡೆದಂತಿದೆ. ಆದರೆ ಅದೇ ಕನಸು ಇಂದಿನ ವಾಸ್ತವ. ಈಗ ಸ್ವಪ್ನಾ ನನ್ನ ಅರ್ಧಾಂಗಿ. ಎರಡು ವರ್ಷಗಳ ಸುಧೀರ್ಘ ಪ್ರಯತ್ನದ ಬಳಿಕ ಅವಳ ಪ್ರೀತಿಯನ್ನು ಗೆದ್ದುದರ ಫಲವಾಗಿ ನನಗೆ ಸಿಕ್ಕ ಉಡುಗೊರೆ ನನ್ನ ಸ್ವಪ್ನಾ...
"ಹ್ಞೂಂ! ಮತ್ತೆ ಕನಸಲ್ಲಿ ಕಳೆದುಹೋದ್ಯಾ" ಎಂದು ನಗುತ್ತಾ ನನ್ನ ಬಳಿ ಬಂದ ಸ್ವಪ್ನಾ ಮೃದುವಾಗಿ ತಲೆ ನೇವರಿಸಿದಳು.
"ಹಾಗೇನಿಲ್ಲಾ... ಮತ್ತೆ ‘ಕಾಫಿ ಡೇ’ ಪ್ರಪೋಸಲ್ ನೆನಪಿಸಿಕೊಳ್ತಿದ್ದೆ ಅಷ್ಟೇ" ಎಂದು ಸ್ವಪ್ನಾಳನ್ನು ನನ್ನತ್ತ ಸೆಳೆದುಕೊಂಡೆ. ನನ್ನ ಹಿಡಿತದಿಂದ ಬಿಡಿಸಿಕೊಂಡು, ಮೆತ್ತಗೆ ಕಿವಿಹಿಂಡಿದ ಆಕೆ, "ಇವತ್ತು ನಮ್ಮ ಮದುವೆ ಆನಿವರ್ಸರಿ ಅನ್ನೋದು ನೆನಪಿದೆ ತಾನೆ. ಮೊದಲು ಮರ್ಯಾದೆಯಿಂದ ದೇವಸ್ಥಾನಕ್ಕೆ ನಡಿ. ಉಳಿದಿದ್ದೆಲ್ಲಾ ಆಮೇಲೆ..." ಎಂದು ನಗುತ್ತಾ ಕಾರಿನತ್ತ ಓಡಿದಳು. ಅವಳನ್ನು ಹಿಂಬಾಲಿಸಿದ ನಾನು, "ಅಲ್ಲಿಂದ ನೇರವಾಗಿ ‘ಕಾಫಿ ಡೇ’ಗೆ ಹೋಗೋಣ. ಅಲ್ಲಿ ಸೌತ್ ಕಾರ್ನರ್ ಟೇಬಲ್ ಇಂದು ನಮಗಾಗಿ ರಿಸರ್ವ್ ಆಗಿದೆ" ಎಂದು ಮೆತ್ತಗೆ ಅವಳತ್ತ ಬಾಗಿದೆ. ಸ್ವಪ್ನಾಳ ಕೆನ್ನೆ ಕೆಂಪಾಯ್ತು. ಆದರೆ ಈ ಬಾರಿ ಅದು ನಾಚಿಕೆಯಿಂದಲೋ ಅಥವಾ ನಾನಿತ್ತ ಸಿಹಿ ಮುತ್ತಿನಿಂದಲೋ ಎಂಬುದು ತಿಳಿಯಲಿಲ್ಲ...

ಕಲೆ : ಪ್ರಕಾಶ್ ಶೆಟ್ಟಿ ಉಳೆಪಾಡಿ

Thursday, 18 December 2008

ಒದ್ದೆ ಮರಳಿನ ಮೇಲೆ...


ನುರ್ಮಾಸದ ಚಳಿ ತಣ್ಣಗೆ ಮೈಕೊರೆಯುತ್ತಿತ್ತು. ಮೈಮೇಲೆ ಹೊದ್ದಿದ್ದ ಬ್ಲಾಂಕೆಟ್ ಚಳಿಗೆ ಶರಣಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದವು. ಆದರೆ ದೇಹವನ್ನು ಕೊರೆಯುತ್ತಿದ್ದ ಚಳಿಯಿಂದ ತಪ್ಪಿಸಿಕೊಳ್ಳಲು ಮೈಬೆಚ್ಚಗಿರಿಸಿಕೊಳ್ಳುವ ಗೊಡವೆ ಬೇಡವೆನಿಸಿತ್ತು. ಅಲ್ಲೇ... ಹಾಸಿಗೆಯ ಸನಿಹವೇ ಬಿದ್ದಿದ್ದ ಮೊಬೈಲ್‌ನಿಂದ ಹೊರಡುವ ಒಂದು ಸಣ್ಣ ಸದ್ದಿಗಾಗಿ ಮೈಯನ್ನೆಲ್ಲಾ ಕಿವಿಯಾಗಿಸಿಕೊಂಡು ಕಾಯುತ್ತಿದ್ದೆ. ಆದರೆ ಅದೂ ನನ್ನಂತೆಯೆ ನೀರವ ಮೌನದ ರಾತ್ರಿಯಲ್ಲಿ ಕಳೆದುಹೋಗಿತ್ತು.
***
ನೋ ಅಸ್ಪಷ್ಟ ಸದ್ದು... ಆಗಷ್ಟೆ ನಿದ್ರಾದೇವಿಯ ಅದರಾಮೃತವನ್ನು ಸವಿಯುತ್ತಿದ್ದ ರೆಪ್ಪೆಗಳನ್ನು ಒಲ್ಲದ ಮನಸ್ಸಿನಿಂದ ತೆರೆದಾಗ ಮೊಬೈಲ್ ಕಣ್ಣಿಗೆ ಬಿತ್ತು. ಅದರ ಪರದೆಯ ಮೇಲೆ ಮಿಂಚುತ್ತಿದ್ದ ಹೆಸರನ್ನು ನೋಡಿದೊಡನೆಯೇ ನಿದ್ರಾ ನಶೆ ಇಳಿದುಹೋಗಿತ್ತು. 'ಸಾಕ್ಷಿ...' ರಿಸೀವ್ ಬಟನ್ ಅದುಮುವ ಮುನ್ನ ಆ ಹೆಸರನ್ನೊಮ್ಮೆ ಮೆಲುವಾಗಿ ಮುದ್ದಿಸಿದೆ. ಹಲೋ ಎಂದೊಡನೆಯೇ, "ನಿನ್ನ ಜೊತೆ ಮಾತನಾಡಬೇಕಿದೆ. ಸಾಯಂಕಾಲ ಬೀಚ್ ಬಳಿ ಸಿಕ್ತಿಯಾ?" ಎಂದವಳಿಗೆ ಸರಿ ಎಂದೆ. ಇನ್ನೇನೋ ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಫೋನ್ ಕಟ್ ಆಗಿತ್ತು.
ನಿನ್ನೆ, "ಸಾಕ್ಷಿ... ಯಾಕೋ ಗೊತ್ತಿಲ್ಲಾ? ಇತ್ತೀಚೆಗೆ ಪ್ರತಿ ಕ್ಷಣವೂ ನಿನ್ನೊಂದಿಗಿರಬೇಕೆಂದು ಅನ್ನಿಸುತ್ತಿದೆ. ಕಳೆದ ಆರು ವರ್ಷಗಳಿಂದ ನೀನು ನನ್ನ ಸ್ನೇಹಿತೆಯಾಗಿದ್ದೆ. ಆದರೆ ಕೆಲವು ದಿನಗಳಿಂದ ನಮ್ಮಿಬ್ಬರ ಸಂಬಂಧ ಸ್ನೇಹವನ್ನು ಮೀರಿದ್ದು ಎಂದು ನನಗನ್ನಿಸುತ್ತಿದೆ. ನೀನು ನನ್ನನ್ನು ಮದುವೆಯಾಗುತ್ತೀಯಾ?" ಎಂದು ನೇರವಾಗಿ ಕೇಳಿದಾಗ ಅರೆಕ್ಷಣ ನನ್ನ ಮುಖವನ್ನೇ ದಿಟ್ಟಿಸಿ ನೋಡಿ ಏನೂ ಹೇಳದೆ ಹೊರಟು ಹೋದವಳು, ಈಗ ಮಾತನಾಡಬೇಕಿದೆ ಎನ್ನುತ್ತಿದ್ದಾಳೆಂದರೆ... ಪ್ರಾಯಶಃ ಆ ಕುರಿತೇ ಇರಬೇಕು.
***
ಸಾಗರದ ಅಲೆಗಳ ಹೊಯ್ದಾಟಕ್ಕೂ ನನ್ನ ಮನಸ್ಥಿತಿಗೂ ತಾಳೆ ಹಾಕುತ್ತಾ ಕುಳಿತಿದ್ದೆ. ಚಳಿಗಾಲದ ರಾತ್ರಿ ಬೇಗ ಮನೆಸೇರಿ, ಬೆಚ್ಚಗೆ ಹೊದ್ದುಕೊಂಡು ಮಲಗುವ ತವಕದಲ್ಲಿರುವಂತೆ ಸೂರ್ಯ ಅವಸರದಿಂದ ದಿಗಂತದತ್ತ ಓಡುತ್ತಿದ್ದ.. ಸೂರ್ಯನಿಗೂ ಚಳಿಯೇ? ನನ್ನ ಹುಚ್ಚು ಕಲ್ಪನೆ ನನಗೇ ನಗು ತರಿಸಿತು. ಆದರೆ ತುಟಿಯಂಚಿನವರೆಗೆ ಬಂದ ನಗು ಅಲ್ಲೇ ಮರೆಯಾಗಿ "ಸಾಕ್ಷಿ..." ಎನ್ನುವ ಉದ್ಗಾರವಾಗಿ ಬದಲಾಯ್ತು. ಹೌದು... ಆಕೆ ನಿಧಾನವಾಗಿ ನನ್ನತ್ತಲೇ ನಡೆದು ಬರುತ್ತಿದ್ದಾಳೆ. ಉಸಿರಾಡುವುದನ್ನು ಹೊರತುಪಡಿಸಿ ಮತ್ತೆಲ್ಲವನ್ನೂ ಮರೆತ ಸ್ಥಿತಿ. ಪ್ರಾಯಶಃ ಸಮಾಧಿ ಸ್ಥಿತಿ ಎನ್ನುವುದು ಇದಕ್ಕೇ ಏನೋ? ಗಾಳಿಗೆ ಹಾರುತ್ತಿದ್ದ ಮುಂಗುರುಳನ್ನು ಒಂಥರಾ ಅಸಡ್ಡೆಯಿಂದ ಅದರ ಪಾಡಿಗೆ ಬಿಟ್ಟು ನಡೆದು ಬಂದ ಸಾಕ್ಷಿ ನನ್ನ ಮುಂದೆ ನಿಂತು, "ಬಂದು ತುಂಬಾ ಹೊತ್ತಾಯ್ತ?" ಎಂದು ಕೇಳಿದಾಗಲಷ್ಟೆ ವಾಸ್ತವ ಪ್ರಪಂಚಕ್ಕೆ ಮರಳಿದ್ದು. "ಇಲ್ಲಾ... ಸ್ವಲ್ಪ ಹೊತ್ತಾಯಿತಷ್ಟೇ? ಹೇಳು. ಯಾಕೆ ಬರೋಕೆ ಹೇಳ್ದೆ?" ಎಂಬ ವಾಕ್ಯವನ್ನು ಗಂಟಲು ದಾಟಿಸುವಷ್ಟರಲ್ಲಿ ನಾಲಗೆ ಒಣಗಿತ್ತು. ಎದೆಯಾಳದಲ್ಲೆಲ್ಲೋ ವಿಲಕ್ಷಣ ಚಡಪಡಿಕೆ... ಅರೆ! ದಿನವೂ ಇಷ್ಟವಾಗುತ್ತಿದ್ದ ಅವಳ ಸಾನ್ನಿಧ್ಯ ಇಂದೇಕೋ ತಳಮಳ ಉಂಟುಮಾಡುತ್ತಿದೆಯಲ್ಲಾ...
"ನಾವಿಬ್ಬರೂ ಸ್ನೇಹಿತರಾಗಿದ್ದಾಗ ನಾನು ಯಾವಾಗ, ಯಾಕೆ ಬರೋಕೆ ಹೇಳ್ತೀನಿ ಅಂತಾ ನಾನು ಹೇಳದೆ ನಿನಗೆ ಗೊತ್ತಾಗುತ್ತಿತ್ತು. ಆದರೆ ಇಂದು ನೀನು ನನ್ನನ್ನೇ ಪ್ರಶ್ನೆ ಮಾಡ್ತಿರೋದು ನೋಡಿದ್ರೆ ಪ್ರಾಯಶಃ ನಾನು ಒಬ್ಬ ಒಳ್ಳೆ ಸ್ನೇಹಿತನನ್ನು ಕಳೆದುಕೊಂಡೆ ಅಂತಾ ಅನ್ನಿಸ್ತಿದೆ." ಆಕೆಯ ಮಾತಿನಲ್ಲಿ ಎದೆ ಬಡಿತವನ್ನೇ ಸ್ತಬ್ಧಗೊಳಿಸುವಂಥ ತೀಕ್ಷ್ಣತೆ. ಈವರೆಗೆ ನನ್ನ ಸಾಕ್ಷಿ ಇಷ್ಟು ಕಠಿಣವಾಗಿ ಮಾತನಾಡಿರಲಿಲ್ಲ. ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ನನ್ನ ಬಾಯಿಂದ ಮಾತೇ ಹೊರಡುತ್ತಿಲ್ಲ!
ಏನಾಗುತ್ತಿದೆ ನನಗೆ. ಭೇಟಿಯಾದೊಡನೆ ಆಕೆಯನ್ನು ಕೆಣಕಿ ಸಿಟ್ಟು ತರಿಸುತ್ತಿದ್ದ, ಹುಸಿಕೋಪದಿಂದ ಸಾಕ್ಷಿ ಜಗಳಕ್ಕಿಳಿದಾಗ ತಲೆ ನೇವರಿಸಿ ಸಂತೈಸುತ್ತಿದ್ದ ನನಗೆ ಇಂದೇನಾಗಿದೆ? ಇಂದು ಅವಳನ್ನು ಸ್ಪರ್ಶಿಸುವುದಿರಲಿ, ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವೂ ನನ್ನಲ್ಲಿ ಉಳಿದಿಲ್ಲ. ತಲೆ ಹೋಳಾಗುವಂತಾಗುತ್ತಿದೆ. ಆ ಬಟ್ಟಲು ಕಂಗಳು ಮೊನಚಾದ ನೋಟವನ್ನು ಎದುರಿಸಲಾಗದೆ ತಲೆ ಬಾಗಿಸಿದೆ. ಚಳಿಯಲ್ಲೂ ಮೈ ಬೆವರಲಾರಂಭಿಸಿತು.
"ನಿತಿನ್... ನಿನ್ನನ್ನು ಈ ರೀತಿ ನೋಡಲಾಗುತ್ತಿಲ್ಲ. ನನ್ನನ್ನು ಕೇವಲ ಗೆಳತಿಯಾಗಲ್ಲದೆ ನಿನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆನ್ನುವ ವಾಂಛೆ ನಿನ್ನಲ್ಲಿ ಹುಟ್ಟಿದ್ದಾದರೂ ಹೇಗೆ? ನಮ್ಮಿಬ್ಬರ ಒಡನಾಟ, ಸ್ನೇಹವನ್ನು ನೋಡಿದವರು ಏನೆಲ್ಲಾ ಅನ್ನುತ್ತಿದ್ದರು ಎಂದು ನಿನಗೂ ಗೊತ್ತು. ಆದರೆ ನಾನು ಅವ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಯಾಕೆ ಗೊತ್ತಾ? ನನಗೆ ನಮ್ಮ ಸ್ನೇಹದ ಮೇಲೆ ನಂಬಿಕೆ ಇತ್ತು. ಆದರೆ ನಿನ್ನ ಮನಸ್ಸಲ್ಲಿ ಇಂತಹ ಭಾವನೆ ಇದೆ ಎಂಬುದು ನನಗೆ ತಿಳಿದಿರಲಿಲ್ಲ." ಸಾಕ್ಷಿ ಅದು ಹಾಗಲ್ಲ ಎಂದು ಹೇಳಬೇಕೆಂದುಕೊಂಡೆ. ಪದ ಹುಟ್ಟಲೇ ಇಲ್ಲಾ.
ಕಾಲುಗಳು ಕಸುವು ಕಳೆದುಕೊಳ್ಳಲಾರಂಭಿಸಿದವು. ನಿಂತಲ್ಲೇ ಸಣ್ಣಗೆ ನಡುಗಲಾರಂಭಿಸಿದೆ. ಇದ್ದಬದ್ದ ಶಕ್ತಿ, ಧೈರ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು ನಿಧಾನಕ್ಕೆ ತಲೆಯೆತ್ತಿದೆ. ಎದುರಿಗೆ ಸಾಕ್ಷಿ... ಆಕೆಯ ಮೊಗದಲ್ಲಿದ್ದ ಬೇಸರದ ಛಾಯೆ... ನನ್ನ ಬಗ್ಗೆಯೇ ನನಗೆ ರೇಜಿಗೆ ಹುಟ್ಟಿತು. ಆಕೆಯ ಬದುಕಿನ ಸಂತಸದ ಮುನ್ನುಡಿಯಾಗಬೇಕೆಂದಿದ್ದ ನಾನು ಆಕೆಯ ಜೀವನದ ಕಹಿನೆನಪಿನ ಪುಟಗಳಲ್ಲಿ ಸೇರಿಹೋದೆನೆ? ನಿಂತಲ್ಲೇ ಕುಸಿದು ಹೋದೆ.
"ನಿತಿನ್... ಆರ್ ಯೂ ಆಲ್‌ರೈಟ್... ಏನಾಯ್ತೋ..?"
***
ಸಂಜೆಯ ವಾತಾವರಣ ಕೆಂಪೇರಿತ್ತು. ಕುಸಿದಿದ್ದ ನನ್ನನ್ನು ಸಾಕ್ಷಿ ಆಧರಿಸಿದ್ದಳು. ಅವಳ ಕಣ್ಣುಗಳಲ್ಲಿದ್ದ ಗಾಬರಿ ಆಕೆಯ ನೋಟದ ತೀಕ್ಷ್ಣತೆಯನ್ನು ಕಡಿಮೆ ಮಾಡಿತ್ತು. ಆಶ್ಚರ್ಯ! ಅವಳ ತೋಳಿನ ಆಸರೆಯಲ್ಲಿದ್ದರೂ ಆ ಸ್ಪಶ ನನ್ನ ಯಾವ ವಿಕಾರಗಳನ್ನೂ ಕೆರಳಲಿಸಲಿಲ್ಲ! ಹಾಗಾದರೆ ಒಂದು ವಾರದ ಹಿಂದಷ್ಟೇ ಸಾಕ್ಷಿಯ ಕುರಿತಾಗಿ ಉದಿಸಿದ್ದ ನನ್ನ ವಾಂಛೆಗಳೆಲ್ಲಾ ಸತ್ತುಹೋದವೆ? "ನನ್ನನ್ನು ಕ್ಷಮಿಸು" ಎಂದು ಕೇಳಬೇಕೆಂದುಕೊಂಡು ಬಾಯಿ ತೆರೆದೆ. ಏನೂ ಮಾತನಾಡಬೇಡ ಎಂಬಂತೆ ಸಾಕ್ಷಿ ಸಂಜ್ಞೆ ಮಾಡಿದಳು. ಪ್ರಾಯಶಃ ನನ್ನ ತಳಮಳಗಳು ಅವಳಿಗೆ ಅರ್ಥವಾಗಿರಬೇಕು.
"ನಿನ್ನನ್ನು ಹರ್ಟ್ ಮಾಡಬೇಕು ಎಂಬ ಉದ್ಧೇಶ ನನಗಿರಲಿಲ್ಲ. Sorry ಕಣೋ. ನೀನೂ ಎಲ್ಲಾ ಹುಡುಗರ ಥರ ಸ್ನೇಹಕ್ಕೆ ಪ್ರೀತಿಯ ಹಣೆಪಟ್ಟಿ ಹಚ್ಚಲು ಹೊರಟದ್ದು ಕಂಡು ಸ್ವಲ್ಪ ಬೇಜಾರಾಯ್ತು. ನನ್ನ ಮಾತುಗಳಿಂದ ನಿನಗೆ ನೋವಾಗಿದ್ದರೆ Sorry." ಎಂದ ಸಾಕ್ಷಿಯ ಮೊಗದಲ್ಲಿ ಕಂಡಿದ್ದು ಮತ್ತದೇ ಭರವಸೆಯ ಬೆಳಕು.
"ನೀನ್ಯಾಕೆ... Sorry ಕೇಳ್ತಿಯಾ. ಇಷ್ಟೆಲ್ಲಾ ಆದದ್ದು ನನ್ನಿಂದಾಗಿ. ನನ್ನ ಬಗ್ಗೆ ನನಗೇ ನಾಚಿಕೆಯಾಗುತ್ತಿದೆ" ಎಂದೆ. ಈ ಬಾರಿ ನನ್ನ ಮಾತು ಕೊರಳಲ್ಲಿ ಧ್ವನಿ ಪಡೆದು, ನಾಲಗೆಯ ಮೇಲಿಂದ ಜಾರಿ, ತುಟಿಯನ್ನು ದಾಟಿ ಸಾಕ್ಷಿಯ ಕಿವಿಯನ್ನು ತಲುಪಿತು.
"ಸಾಕು. ಇನ್ನೇನೂ ಹೇಳಬೇಡ. ಇದೆಲ್ಲಾ ಆಗಿದ್ದು ನಿನ್ನಿಂದಾಗಿ ಅಲ್ಲ, ಅರೆಕ್ಷಣದ ವಾಂಛೆಯಿಂದ ಅನ್ನುವುದು ನನಗೆ ಗೊತ್ತು. ನಡೆದಿದ್ದಕ್ಕೆಲ್ಲಾ ಕಾರಣಗಳು, ವಿವರಣೆಗಳು ನನಗೆ ಬೇಕಾಗಿಲ್ಲ. ಅದೆಲ್ಲಾ ಮರೆತುಬಿಡು. ನನಗೆ ನನ್ನ ಹಳೆಯ ನಿತಿನ್ ಪುನಃ ಸಿಕ್ಕಿದ. ಅಷ್ಟು ಸಾಕು." ಎಂದು ತುಂಟ ನಗೆ ನಕ್ಕಳು. ನನ್ನ ದೇಹಕ್ಕೆ ಕಳೆದು ಹೋದ ಚೈತನ್ಯ ಮತ್ತೆ ಸಿಕ್ಕಿತು. ಸೂರ್ಯ ಪೂರ್ಣವಾಗಿ ಮುಳುಗಲು ಸಿದ್ಧನಾದ.
"ಸರಿ... ಕತ್ತಲಾಗುತ್ತಾ ಬಂತು. ಮನೆಯಲ್ಲಿ ಅಮ್ಮ ಕಾಯ್ತಿರ್ತಾರೆ. ನೀನು ಹೊರಡು" ಎಂದೆ.
"ಯಾವಾಗ್ಲೂ ಮನೆಯವರೆಗೂ ಬಿಡ್ತಾ ಇದ್ಯಲ್ಲಾ. ಇವತ್ತೇನಾಯ್ತು?" ಎಂದ ಸಾಕ್ಷಿಯ ಮಾತಿನಲ್ಲಿ ಮತ್ತೆದೇ ಮುಗ್ಧತೆಯಿತ್ತು.
"ಇನ್ನು ಸ್ವಲ್ಪ ಹೊತ್ತು ಇದ್ದು ಬರ್ತೀನಿ. ಚಳಿ ಜಾಸ್ತಿಯಾಗ್ತಾ ಇದೆ. ನೀನು ಹೊರಡು" ಎಂದರೂ ಆಕೆಯ ಮೊಗದಲ್ಲಿದ್ದ ಪುಟ್ಟ ಮಗುವಿನ ಹಠ ನಾನು ಬರದೆ ಆಕೆ ಹೊರಡುವುದಿಲ್ಲವೆಂಬುದನ್ನು ಸಾರಿ ಹೇಳಿತು.
"ಸರಿ. ಸ್ವಲ್ಪ ಹೊತ್ತು ಒಂಟಿಯಾಗಿರಬೇಕೆಂದರೆ ಇಲ್ಲೇ ಇರು. ನಾನು ಅತ್ತ ಕಡೆ ಕಾಯುತ್ತಿರುತ್ತೇನೆ" ಎಂದ ಸಾಕ್ಷಿ ಮೃದುವಾಗಿ ನನ್ನ ತಲೆ ನೇವರಿಸಿ ಏನೂ ಆಗಿಲ್ಲವೆಂಬಂತೆ ಅತ್ತ ಕಡೆ ಹೆಜ್ಜೆ ಹಾಕಲಾರಂಭಿದಳು.
ಸ್ವಲ್ಪ ಹೊತ್ತು ಆಕೆ ನಡೆದು ಹೋದ ಹಾದಿಯನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ. ಈಗ ಮನಸ್ಸಲ್ಲಿ ಯಾವ ಗೊಂದಲಗಳೂ ಇರಲಿಲ್ಲ. ಶೂನ್ಯ ಭಾವ. ಸ್ವಲ್ಪ ಹೊತ್ತು ನಿಧಾನವಾಗಿ ನಡೆದು ಹೋಗುತ್ತಿದ್ದ ಸಾಕ್ಷಿಯನ್ನು ನೋಡುತ್ತಾ ನಿಂತೆ. ಒಂದೊಂದಾಗಿ ದಡಕ್ಕಪ್ಪಳಿಸುತ್ತಿದ್ದ ಅಲೆಗಳು ಒದ್ದೆ ಮರಳಿನಲ್ಲಿ ಆಕೆ ಮೂಡಿಸಿದ್ದ ಹೆಜ್ಜೆ ಗುರುತುಗಳನ್ನು ಅಳಿಸಿ ಹಿಂದೆ ಹೊಗುತ್ತಿದ್ದವು. ಮುಂದಿನ ದಾರಿ ಸ್ಪಷ್ಟವಾಯಿತು.
"ಸಾಕ್ಷಿ... ನಡಿ ಮನೆಗೆ ಹೋಗೋಣ" ಎಂದು ಜೋರಾಗಿ ಕೂಗಿ ಆಕೆಯತ್ತ ಹೆಜ್ಜೆ ಹಾಕಲಾರಂಭಿಸದೆ.

Friday, 7 November 2008

ಮಾತು ಮರೆತವನ ಸ್ವ'ಗತ'

"ಹ್ಞೂಂ... ಮತ್ತೆ ಕನ್‌ಫ್ಯೂಸ್ ಆದ್ಯಾ?" ಎಂದು ಕೇಳಿ ಆಕೆ ನಗತೊಡಗಿದಳು.
"ಹೌದು" ಎಂದಷ್ಟೇ ಹೇಳಿ, ಮತ್ತೇನು ಹೇಳಬೇಕು ಎಂದು ತಿಳಿಯದೆ, ಒಂದು ಕ್ಷಣ ಪದಗಳಿಗಾಗಿ ತಡಕಾಡಿದೆ. ಉಹ್ಞೂಂ... ಮಾತುಗಳೆಲ್ಲಾ ಬರಿದಾಗಿ ಹೋಗಿತ್ತು. ಬೇರೆನು ಹೇಳಲು ಹೋದರು ಏನಾದರೂ ಎಡವಟ್ಟಾಗುವುದು ಖಚಿತ ಎಂದು 'ಬುದ್ಧಿ' ಎಚ್ಚರಿಕೆಯ ಸಂದೇಶ ನೀಡತೊಡಗಿತು. ಇನ್ನಷ್ಟು ಹೊತ್ತು ಆಕೆಯ ದನಿ ಕೇಳುವ ವಾಂಛೆಯ
ನ್ನು ಬಲವಂತವಾಗಿ ಹತ್ತಿಕ್ಕಿಕೊಂಡು, 'ಬುದ್ಧಿ'ಯ ಮಾತಿಗೆ ಓಗೊಟ್ಟು "ನಂಗೆ ಸ್ವಲ್ಪ ಕೆಲಸ ಇದೆ. ಮತ್ತೆ ನಾನೇ ಕಾಲ್ ಮಾಡ್ತೀನಿ" ಎಂದು ಹೇಳಿ ಕಾಲ್ ಕಟ್ ಮಾಡಿದೆ. ಆಕೆಯ ನಗುವಿನ್ನೂ ಕಿವಿಯಲ್ಲಿ ಮಾರ್ದನಿಸುತ್ತಿತ್ತು...
***
ಕೆ ಹೇಳಿದ್ದು ನಿಜವೆಂದು ಒಪ್ಪಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಈ ಮೊದಲೂ ಸಾಕಷ್ಟು ಬಾರಿ ನನ್ನನ್ನು ಫೂಲ್ ಮಾಡಲು ಆಕೆ ಇದೇ ಮಾತನ್ನು ಹೇಳಿದ್ದಳು. ಪ್ರಾಯಶಃ ಈ ಬಾರಿಯೂ ನನ್ನನ್ನು ಮೂರ್ಖನನ್ನಾಗಿಸಲು ಹಾಗೆ ಹೇಳಿರಬೇಕು ಎಂದು ನನಗೆ ನಾನೇ ಹೇಳಿಕೊಂಡೆ. ಆದರೂ ಮನದ ಮೂಲೆಯಲ್ಲೆಲ್ಲೋ ಕಳವಳ. ಒಂದು ವೇಳೆ ಆಕೆ ಹೇಳಿದ್ದು ನಿಜವಾಗಿದ್ದರೆ ಎಂಬ ಆತಂಕ ಸಣ್ಣಗೆ ಕಾಡತೊಡಗಿತು. ಆರು ವರ್ಷಗಳಿಂದ ನನ್ನ ಸ್ನೇಹಿತೆಯಾಗಿದ್ದರೂ ಅವಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾಗಿದ್ದಕ್ಕಾಗಿ ಇಂದಿನದ್ದೂ ಸೇರಿ ಅದೆಷ್ಟು ಬಾರಿ ಪಶ್ಚಾತ್ತಾಪ ಪಟ್ಟುಕೊಂಡಿದ್ದೇನೋ, ನನಗೆ ನೆನಪಿಲ್ಲ.
"ಅಬ್ಬಾ ಮಾರಾಯ... ನಿನಗೆ ಈ ಜನ್ಮದಲ್ಲಿ ಬುದ್ಧಿ ಬರೋದಿಲ್ಲ. ನೀನು ಹೀಗೇ ಕಾಯುತ್ತಿರು. ಆಮೇಲೆ ಒಂದು ದಿನ ಆಕೆ ತನ್ನ ಗಂಡನ ಜೊತೆ ಬಂದು ನಿನ್ನ ಮುಂದೆ ನಿಂತಾಗ, ಅವನೆದುರೇ ನೀನು ಆಕೆಯನ್ನು ಇಷ್ಟಪಡುತ್ತಿರುವ ವಿಷಯವನ್ನು ಹೇಳುವೆಯಂತೆ... ಆಲ್ ದ ಬೆಸ್ಟ್'' ಎಂದು ಕೋಪದಿಂದ ಬೈಯ್ದು ಹೋಗಿದ್ದ ಗೆಳೆಯನ ಚಿತ್ರ ಕಣ್ಮುಂದೆ ಬಂತು. ಅಲ್ಲಾ... ಎಷ್ಟು ಬಾರಿ ನಾನಾಕೆಯನ್ನು ಇಷ್ಟಪಡುತ್ತಿರುವ ವಿಚಾರವನ್ನು ಆಕೆಯಲ್ಲಿ ಹೇಳಲು ಪ್ರಯತ್ನ ಪಟ್ಟಿಲ್ಲಾ? ಆದರೆ ಮಗುವಿನಂತೆ ತನ್ನೆಲ್ಲಾ ಖುಷಿಗಳನ್ನು, ಅಪರೂಪಕ್ಕೆ ಮನದಾಳದ ನೋವುಗಳನ್ನು ನನ್ನೊಂದಿಗೆ ಹಂಚಿಕೊಳ್ಳುವ ಆಕೆಯ ಮಾತುಗಳಿಗೆ ನಾನು ಕಿವಿಯಾದೆನೇ ಹೊರತು, ನನ್ನ ಮಾತುಗಳನ್ನು ಅವಳ ಹೃದಯ ತಲುಪಿಸು ಧೈರ್ಯ ನನ್ನಲ್ಲಿ ಮೂಡಲೇ ಇಲ್ಲ.
"ನೇರವಾಗಿ ಹೇಳಲಾಗದಿದ್ದರೆ ಪರವಾಗಿಲ್ಲ. ಅಟ್‌ಲೀಸ್ಟ್ ಫೋನ್‌ನಲ್ಲಾದರೂ ಹೇಳಬಹುದಲ್ಲಾ" ಎಂಬ ಸಲಹೆ ನೀಡಿದ್ದ ಸ್ನೇಹಿತರೆಷ್ಟೋ ಮಂದಿ. ಆದರೆ ಅವಳು "ಸ್ನೇಹವನ್ನು ದುರುಪಯೋಗ ಪಡಿಸಿಕೊಂಡೆ" ಎಂದು ಹೇಳಿ ನನ್ನಿಂದ ದೂರವಾದರೆ ಎಂಬ ಭಯ ನನ್ನೆಲ್ಲಾ ಮಾತುಗಳನ್ನು ಮರೆಸುತ್ತಿತ್ತು. ಅಲ್ಲದೆ ಆಗ ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳಲು ಹೆಣಗುತ್ತಿದ್ದ ನಾನು ಯಾರದೇ ಪ್ರೀತಿಯನ್ನು ನಿರೀಕ್ಷಿಸುವ ಸ್ಥಾನದಲ್ಲಿಲ್ಲ ಎಂಬ ಕೀಳರಿಮೆ ಕಾಡುತ್ತಿದ್ದುದೂ ಅದಕ್ಕೊಂದು ಕಾರಣವಾಗಿರಬಹುದು.
ಈಗ ಬದುಕು ಒಂದು ಹಂತಕ್ಕೆ ಬಂದಿದೆ. ಇಂದು ಸಾಯಂಕಾಲ ಆಫೀಸ್‌ನಿಂದ ಬಂದು ಫೋನ್ ಮಾಡಿದಾಗ ಮತ್ತದೇ ತುಂಟತನದಿಂದ ಮಾತು ಪ್ರಾರಂಭಿಸಿದ ಅವಳು, "ಹೇ... ನಿಂಗೊಂದು ಸರ್‌ಪ್ರೈಸ್. ಮುಂದಿನ ವಾರ ನನ್ನ ಮದುವೆ ಇದೆ" ಎಂದು ಹೇಳಿ ನಗತೊಡಗಿದಾಗ, "ಇವತ್ತು ಯಾವುದೇ ಕಾರಣಕ್ಕೆ ನಾನು ಫೂಲ್ ಅಗುವುದಿಲ್ಲ" ಎಂದು ದೃಢವಾಗಿ ಹೇಳಿದ್ದೆ. ಆದರೆ, "ಇಲ್ಲಾ ಕಣೋ. ನಿಜವಾಗ್ಲೂ. ಐ ಸ್ವೇರ್ ಬಾಬಾ" ಎಂದಾಗ ಕೊಂಚ ಕನ್‌ಫ್ಯೂಸ್ ಆದದ್ದಂತೂ ನಿಜ. ಏಕೆಂದರೆ ಕಾರಣವಿಲ್ಲದೆ ಆಕೆ 'ಐ ಸ್ವೇರ್' ಅನ್ನುವುದಿಲ್ಲ. ಏನೂ ಹೇಳಲು ತೋಚದೆ, ಮತ್ತೆ ಕಾಲ್ ಮಾಡುತ್ತೇನೆಂದು ಹೇಳಿ ನುಣುಚಿಕೊಂಡಾಯ್ತು. ಮುಂದೇ? ಆಕೆ ಹೇಳಿದ್ದು ನಿಜವಾಗದಿರಲಿ ಎಂದು ಆ 'ಗಣೇಶ'ನನ್ನು ಪ್ರಾರ್ಥಿಸಿದೆ. ಮೊಬೈಲ್ ಮತ್ತೆ ರಿಂಗಣಿಸಲಾರಂಭಿಸಿತು...
***
ರೆ... ಆಕೆಗೆ ಫೋನ್ ಮಾಡಿ ಎರಡು ಆಗಲೇ ಎರಡು ದಿನವಾಯ್ತು. ಆಕೆಗೆ ಫೋನ್ ಮಾಡಿದ ರಾತ್ರಿ, ನನ್ನ ಆಪ್ತ ಗೆಳೆಯನಿಗೆ ಅಪಘಾತವಾದ ಸುದ್ದಿ ಬಂದಿತ್ತು. ಮುಂದೆ ಎರಡು ದಿನ ಆಸ್ಪತ್ರೆಯ ಒತ್ತಡದ ನಡುವೆಯೇ ಕಳೆದು ಹೋಗಿತ್ತು. ಒಂದೆರಡು ಬಾರಿ ಆಕೆಗೆ ಫೋನ್ ಮಾಡಲು ಯತ್ನಿಸಿದರೂ 'ನಾಟ್ ರೀಚೇಬಲ್' ಎನ್ನುವ ಮುದ್ರಿತ ದನಿಯಷ್ಟೇ ಕೇಳಿಬಂತು. ಇಂದು ಆಕೆಯ ಬಳಿ ಮಾತನಾಡಲೇಬೇಕು ಎಂದು ನಿರ್ಧರಿಸಿ, ಮೊಬೈಲ್ ಕೈಗೆತ್ತಿಕೊಂಡೆ. ಅಷ್ಟರಲ್ಲಿ ಕಾಲಿಂಗ್‌ಬೆಲ್ ಸದ್ದು ಮಾಡಿತು. ಬಾಗಿಲಲ್ಲಿ ಕೊರಿಯರ್ ಹುಡುಗ ನಿಂತಿದ್ದ. ಕೈಯಲ್ಲಿ ಯಾವುದೋ ಆಮಂತ್ರಣ ಪತ್ರಿಕೆ ಇದ್ದಂತಿತ್ತು. ಆತ ಕೊಟ್ಟ ಫಾರ್ಮ್‌ನಲ್ಲಿ ಸಹಿ ಹಾಕಿ ಪತ್ರಿಕೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ನನ್ನ ಭಯ ಗೆದ್ದಿತು... ಹೊಳೆಯುತ್ತಿದ್ದ 'ಗಣೇಶ'ನ ಆಕರ್ಷಕ ಚಿತ್ರದ ಕೆಳಗೆ ಅಚ್ಚಾಗಿದ್ದ ಅವಳ ಮುದ್ದಾದ ಹೆಸರಿನ ಮೇಲೆ ಬಿದ್ದ ನನ್ನ ಕಂಬನಿಯೂ ಹೊಳೆಯಲಾರಂಭಿಸಿತು...

Sunday, 26 October 2008

ದೀಪಾವಳಿ




ದೀಪಾವಳಿ

ಗೆಳತಿ...
ನಿನ್ನೆರಡು ಕಣ್ಣುಗಳು
ಜೋಡಿ ಹಣತೆಗಳಿದ್ದಂತೆ.
ಅದಕ್ಕೇ...
ನೀನು ನನ್ನೊಡನಿರುವ ಪ್ರತಿ ಕ್ಷಣವೂ,

ನನಗೆ ದೀಪಾವಳಿ!

Friday, 11 April 2008

ಬೋಗಿಯೊಳಗಿನ ಕಲರವ...

ರಾಜಧಾನಿಯ ಥಳುಕು- ಬಳುಕಿನ ನಡುವೆಯೇ ಹೊತ್ತು ಕಳೆಯುವುದಿಲ್ಲ ಎಂಬ ನನ್ನಂತಹ ಸೋಮಾರಿಗೆ ಎರಡು ದಿನಗಳ ರೈಲು ಪಯಣ ಮಹಾನ್ ಶಿಕ್ಷೆಯಂತೆ ಅನಿಸಿದ್ದರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ. ನಗರ, ಹಳ್ಳಿ, ಬೆಟ್ಟ- ಗುಡ್ಡಗಳನ್ನು ಹಿಂದಿಕ್ಕಿ ರೈಲು ಮುಂದೆ ಓಡುತ್ತಿತ್ತು. ಸಾಗಿದಷ್ಟೂ ಮುಗಿಯದ ಹಾದಿ. ಕಪ್ಪನೆಯ ಹೊಗೆಯುಗುಳುತ್ತಾ ರೈಲು ಮುಂದಕ್ಕೆ ದೌಡಾಯಿಸುತ್ತಿದ್ದರೆ ನನ್ನ ಮನಸ್ಸು ನೆನಪುಗಳ ಕಣಜದೊಳಗೆ ನಿಧಾನವಾಗಿ ಹಿಂದಕ್ಕೆ ಜಾರುತ್ತಿತ್ತು...
ಬದುಕು ಎಲ್ಲವನ್ನೂ ಕಲಿಸುತ್ತದೆ. ಅನಿವಾರ್ಯತೆ ಎದುರಾದಾಗ ಎಂತಹ ಭಾವನೆಗಳೂ ಬಾಲಿಶವಾಗುತ್ತದೆ ಎಂದು ಅಪ್ಪ ಹೇಳುತ್ತಿದ್ದ ಮಾತು ಮನದಲ್ಲೊಮ್ಮೆ ಮಿಂಚಿ ಮರೆಯಾಯ್ತು. ಆದರೆ ನನ್ನ ಬದುಕೇ ಆ ಮಾತಿಗೆ ನಿದರ್ಶನವಾದೀತು ಎಂಬ ಕಲ್ಪನೆಯೂ ನನಗಿರಲಿಲ್ಲ. ಕಾಲೇಜು ಮೆಟ್ಟಿಲೇರಿದ್ದರೂ ಅಮ್ಮನ ಬೆಚ್ಚಗಿನ ಆರೈಕೆಯಲ್ಲಿಯೇ ಭದ್ರವಾಗಿ ಬಚ್ಚಿಟ್ಟು ಕೊಂಡಿದ್ದ ನಾನು ಉದ್ಯೋಗ ನಿಮಿತ್ತ ಅಪ್ಪ-ಅಮ್ಮ, ಮನೆ, ಸಂಬಂಧಗಳ ಸೂಕ್ಷ್ಮ ಸುಳಿಗಳನ್ನು ಬಿಟ್ಟು ಸಾವಿರಾರು ಮೈಲು ದೂರದ ಊರಿಗೆ ಬಂದು ನೆಲೆಸಿದ್ದು ವಿಧಿಯ ಆಟವೇ? ಅಥವಾ ಬದುಕಿನ ವಿವಿಧ ಮಜಲಿನ ಒಂದು ಹಂತವೇ? ಎಂಬ ಧ್ವಂದ್ವ ನನ್ನನ್ನಿಂದಿಗೂ ಕಾಡುತ್ತಿದೆ. ತಲೆ ಧಿಮ್ಮೆನ್ನುವಂತೆ ಮಾಡುತ್ತಿದ್ದ ಈ ಎಲ್ಲಾ ಯೋಚನೆಗಳ ನಡುವೆಯೂ, ಆರು ತಿಂಗಳ ಬಳಿಕ ಮತ್ತೆ ಹುಟ್ಟಿದ ಮಣ್ಣಿಗೆ ಮರಳಿ, ತಾಯ ಮಡಿಲಲ್ಲಿ ತಲೆಯಿಟ್ಟು, ಇಷ್ಟು ಕಾಲ ಮನದೊಳಗೇ ಹುದುಗಿಸಿಟ್ಟಿದ್ದ ಬೇಗುದಿ, ಬೇಸರಗಳನ್ನೆಲ್ಲಾ ಮರೆಯುವ ತವಕ ಮಾತ್ರ ಕಿಂಚಿತ್ತೂ ಕಡಮೆಯಾಗಿರಲಿಲ್ಲ. ಆ ಅವರ್ಣನೀಯ ಸಂಭ್ರಮದ ಕ್ಷಣದ ಮುಂದೆ ಈ ಆಯಾಸವೆಲ್ಲವೂ ಗೌಣವಾಗಿ ಕಂಡಿತ್ತು. ಮತ್ತೆ ಹಳೆಯ ದಿನಗಳು ಮರಳಬಾರದೇ ಎನ್ನುವ ತವಕದೊಂದಿಗೆ, ಬಾರದ ನಿದ್ದೆಯನ್ನು ತಂದುಕೊಳ್ಳುವ ಪ್ರಯತ್ನ ಮಾಡುತ್ತಾ ನಿಧಾನವಾಗಿ ಕಣ್ಣುಗಳನ್ನು ಮುಚ್ಚಿಕೊಂಡೆ. ರೈಲಿನ ಕುಲುಕಾಟ, ಹಿತವಾಗಿ ಬೀಸುತ್ತಿದ್ದ ಗಾಳಿ ಇವೆಲ್ಲವೂ ತೊಟ್ಟಿಲಿನೊಳಗೆ ಬೆಚ್ಚಗೆ ಮಲಗಿದ ಕಂದನ ಸುಖವನ್ನು ನೆನಪಿಸುತ್ತಿತ್ತು... ಕಣ್ಣಾಲಿಗಳಲ್ಲಿ ನಿದ್ದೆಯ ಜೊಂಪು ಮೆತ್ತಗೆ ಆವರಿಸತೊಡಗಿತು...
***
ಪಿಸುಮಾತು, ಮೆಲುವಾದ ಬಿಕ್ಕಳಿಕೆ, ಸಾಂತ್ವನದ ನುಡಿಗಳು... ಅರೆರೆ ಇದೇನಿದು ಅಂದುಕೊಳ್ಳುವಷ್ಟರಲ್ಲಿ ನಿದ್ರಾದೇವಿಯ ಗಾಢ ಆಲಿಂಗನದಿಂದ ಒಮ್ಮೆಲೆ ಹೊರ ಜಾರಿದ ಅನುಭವ. ವಾಸ್ತವ ಅರಿವಿಗೆ ಬಂದು ಕಣ್ತೆರೆದು ನೋಡಿದರೆ ಸುತ್ತಲೂ ಕತ್ತಲು. ರಾತ್ರಿಯ ಮೌನವನ್ನು ಮುರಿದು ಮುನ್ನುಗುತ್ತಿದ್ದ ರೈಲಿನ ಸದ್ದು. ಅಲ್ಲೊಮ್ಮೆ ಇಲ್ಲೊಮ್ಮೆ ಮಿಣುಕಾಡುತ್ತಿದ್ದ ಬೆಳಕು ಬಿಟ್ಟರೆ ಬೇರೆ ‍ಯಾವುದೂ ಅರಿವಿಗೆ ಬರಲಿಲ್ಲ. ಆದರೆ ಈ ಮಧ್ಯೆಯೂ ನನಗೆ ಆ ಬಿಕ್ಕಳಿಕೆ ಕೇಳಿಸಿದ್ದು ನಿಜ. ಅದು ಖಂಡಿತಾ ಕನಸಲ್ಲ ಎಂದು ಮನಸ್ಸು ಒತ್ತಿ ಹೇಳುತ್ತಿತ್ತು.
ನಿಧಾನವಾಗಿ ಬೋಗಿಯೊಳಗೆ ಹರಡಿದ್ದ ಮಂದ ಬೆಳಕಿಗೆ ಕಣ್ಣು ಹೊಂದಿಕೊಳ್ಳಲಾರಂಭಿಸಿತು. ನನ್ನ ಎಡಗಡೆಗಿದ್ದ ಬರ್ತ್‌ನಿಂದ ಆ ಬಿಕ್ಕಳಿಕೆ ಕೇಳಿಬರುತ್ತಿತ್ತು. ಅದು ಮುಂಜಾನೆ ನನ್ನೊಂದಿಗೆ ರೈಲನ್ನೇರಿದ್ದ ಯುವತಿಯದ್ದು ಎಂಬುದು ಅರಿವಾಗಲು ನನಗೆ ಹೆಚ್ಚು ಸಮಯ ತಗುಲಲಿಲ್ಲ. ಆಕೆಯನ್ನು ಸಂತೈಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದ ಆಕೆಯ ಸಂಗಾತಿ ನಿರಾಶನಾಗಿ ಕುಳಿತಿದ್ದ.
ಮುಂಜಾನೆ ರೈಲನ್ನೇರಿದಾಗಿನಿಂದಲೂ ಆ ಜೋಡಿ ಎಲ್ಲರ ಗಮನ ಸೆಳೆದಿತ್ತು. ಆಕೆಗೆ ಸುಮಾರು 18ರ ವಯಸ್ಸಿರಬಹುದು. ತಕ್ಕ ಮಟ್ಟಿಗೆ ಚೆಲುವೆಯೆಂದೇ ಹೇಳಬಹುದು. ಇನ್ನು, ಗಟ್ಟಿಮುಟ್ಟಾಗಿದ್ದ ಆಕೆಯ ಜೊತೆಗಾರನದು 25ರ ಆಸುಪಾಸು. ಬೆಳಗ್ಗಿನಿಂದ ಬೋಗಿಯೋಳಗೆ ಸ್ವಚ್ಛಂದ ಹಕ್ಕಿಯಂತೆ ಹಾರಾಡುತ್ತಿದ್ದ ಆ ಜೋಡಿಯನ್ನು ನೋಡಿದರೆ ಅವರಿಬ್ಬರಿಗೂ ಆಗಷ್ಟೇ ಮದುವೆಯಾದಂತಿತ್ತು. ಆದರೆ ಆಕೆಯ ಕತ್ತಿನಲ್ಲಿ ತಾಳಿಯಾಗಲೀ ಬೆರಳಲ್ಲಿ ಕಾಲುಂಗುರವಾಗಲೀ ಗೋಚರಿಸಿರಲಿಲ್ಲ...
ಇಡೀ ಜಗತ್ತೇ ತಮ್ಮದೆಂಬಂತೆ ಮೆರೆಯುತ್ತಿದ್ದ ಅವರಿಬ್ಬರೂ ಈಗ ಈ ರೀತಿ ವಿಷಾದದಲ್ಲಿ ಮುಳುಗಿರುವುದನ್ನು ನೋಡಿದರೆ ಏನೋ ತೊಂದರೆಯಾಗಿರುವುದಂತೂ ನಿಜ ಎಂಬ ಅನುಮಾನ ನನ್ನನ್ನು ಕಾಡದಿರಲಿಲ್ಲ. ಜೊತೆಗೆ ಆಕೆಯ ಅಳುವಿಗೆ ಕಾರಣ ತಿಳಿದುಕೊಳ್ಳಲೇ ಬೇಕೆಂಬ ಕೆಟ್ಟ ಕುತೂಹಲವೂ ಸೇರಿಕೊಂಡಿತು. ಅಲ್ಲಿಗೆ ನನ್ನ ನಿದ್ದೆಗೆ ತಿಲಾಂಜಲಿ ನೀಡಿ ಮಲಗಿದಲ್ಲಿಂದಲೇ ಮೆತ್ತಗೆ ಹೊರಳಿ ಅವರಿಬ್ಬರನ್ನು ಗಮನಿಸತೊಡಗಿದೆ. ಆಕೆಯ ಬಿಕ್ಕಳಿಕೆ ಮತ್ತದಕ್ಕೆ ಸಂಗಾತಿಯ ಸಾಂತ್ವನ ಮುಂದುವರಿದಿತ್ತು. ಅಳುವಿನ ನಡುವೆಯೇ ಸಾಗಿದ್ದ ಮಾತುಗಳಿಂದಾಗಿ ಇನ್ನೂ ಕಾಲೇಜು ಕಲಿಯುತ್ತಿದ್ದ ಆಕೆ, ಆ ಯುವಕನ ಪ್ರೇಮಪಾಶದಲ್ಲಿ ಸಿಲುಕಿ, ಮನೆಯವರ ವಿರೋಧದ ಕಾರಣದಿಂದಾಗಿ ತನ್ನ ಹೆತ್ತವರನ್ನೂ, ಮನೆಯನ್ನೂ ತೊರೆದು ತನ್ನ ಪ್ರಿಯತಮನೊಡನೆ ಬಂದಿರುವುದು ಖಾತ್ರಿಯಾಯಿತು. ಆದರೆ ಈಗ ಇತ್ತ ಪ್ರೀತಿಸಿದವನನ್ನು ಬಿಡಲಾರದೆ ಅತ್ತ ಹೆತ್ತವರ ಬಂಧವನ್ನೂ ತೊರೆಯಲಾರದೆ ತೊಳಲಾಡುತ್ತಿದ್ದಳು ಆ ಹುಡುಗಿ. ಪ್ರಾಯಶಃ ಅವರಿಬ್ಬರೂ ನನ್ನನ್ನು ಗಮನಿಸದಂತಿರಲಿಲ್ಲ. ಅದೂ ಸರಿ. ಪ್ರೀತಿಗಾಗಿ ಇಡೀ ಜಗತ್ತನ್ನೇ ಧಿಕ್ಕರಿಸಿ ಹೊರಟವರಿಗೆ ನಾನ್ಯಾವ ಲೆಕ್ಕ. ಮತ್ತಷ್ಟು ಕುತೂಹಲದಿಂದ ಆಕೆಯನ್ನು ಗಮನಿಸತೊಡಗಿದೆ, ನಸುಗತ್ತಲಲ್ಲೂ ಕಣ್ಣೀರು ತುಂಬಿ ಹೊಳೆಯುತ್ತಿದ್ದ ಆ ಕಣ್ಣುಗಳಲ್ಲಿ ಆಗಷ್ಟೇ ಉನ್ಮತ್ತ ಪ್ರೀತಿಯ ಅಮಲು ಇಳಿದು ಹೋದ ಲಕ್ಷಣವಿತ್ತು. ಹೆಚ್ಚು ಕಡಿಮೆ ಆ ಯುವಕನದ್ದೂ ಅದೇ ಕಥೆ.
ಈಗ ಅವರಿಬ್ಬರ ಮೊಗದಲ್ಲಿರುವುದು ಪ್ರೀತಿ ತಂದಿತ್ತ ನೋವಿನ ನೆರಳೇ ಅಥವಾ ವಿಷಾದವೇ?... ಉಹ್ಞೂಂ... ಅದು ನನಗೂ ಸ್ಪಷ್ಟವಾಗಲಿಲ್ಲ. ಪ್ರಾಯಶಃ ಅವರಿಬ್ಬರಲ್ಲೂ ಮಾತುಗಳು ಮುಗಿದಿದ್ದವು. ರಾತ್ರಿಯ ನೀರವ ಮೌನವನ್ನು ಭೇದಿಸಿ ತನ್ನ ಗಮ್ಯದತ್ತ ಮುನ್ನಡೆಯುತ್ತಿದ್ದ ರೈಲಿನ ಸದ್ದು ಅವರಿಬ್ಬರ ಮೌನ ರೋದನವನ್ನು ಮೀರಿ ಮಾರ್ದನಿಸುತ್ತಿತ್ತು. ಅಬ್ಬಾ! ಕೆಲವೇ ದಿನಗಳ ಹಿಂದೆ ಪ್ರೀತಿಯ ಮಾತಿಗಾಗಿ, ಪರಸ್ಪರ ಸಾನಿಧ್ಯಕ್ಕಾಗಿ ಹಂಬಲಿಸುತ್ತಿದ್ದಿರಬಹುದಾದ ಆ ಜೋಡಿ ಇಂದು ತಮ್ಮಲ್ಲಿ ಹಂಚಿಕೊಳ್ಳಲು ಏನೂ ಉಳಿದಿಲ್ಲವೇನೋ ಎಂಬಂತೆ ಕುಳಿತುಕೊಂಡಿದ್ದು ನೋಡಿ 'ಪ್ರೀತಿ' ಎಂದರೆ ಇಷ್ಟೇನಾ ಎಂಬ ಸಂದೇಹ ನನ್ನನ್ನು ಕಾಡತೊಡಗಿತು... ಬಹಳ ಹೊತ್ತಾದರೂ ಅವರಿಬ್ಬರು ಮತ್ತೆ ಮಾತನಾಡುವ ಪ್ರಯತ್ನ ಮಾಡಲಿಲ್ಲ. ಪ್ರಾಯಶಃ ನನ್ನನ್ನು ಕಾಡುತ್ತಿರುವ 'ಪ್ರಶ್ನೆ'ಯೇ ಅವರನ್ನೂ ಆವರಿಸಿರುವಂತೆ ಕಂಡುಬಂತು. ಅವರನ್ನು ಅವರ ಪಾಡಿಗೆ ಬಿಟ್ಟು ನಾನು ನಿಧಾನವಾಗಿ ಮಗ್ಗುಲು ಬದಲಾಯಿಸಿ ನಿದ್ರಿಸುವ ಪ್ರಯತ್ನ ಮಾಡಿದೆ. ಆದರೆ ಗೊಂದಲವೇ ತುಂಬಿದ್ದ ಕಣ್ಣಿಗೆ ನಿದ್ದೆಯ ಸುಖವಾದರೂ ಎಲ್ಲಿಂದ ಬರಬೇಕು...
ಮುಂದೇನು..?
ತಮ್ಮ ಪ್ರೀತಿಯನ್ನು ಮನೆಯವರು ಒಪ್ಪಲಿಲ್ಲ ಎಂದಾಕ್ಷಣ ಮನೆಯಿಂದ, ಹೆತ್ತವರಿಂದ ದೂರಾಗುವ, ಇಲ್ಲವೇ ಆತ್ಮಹತ್ಯೆಯಂತಹ ಪರಮ ಮೂರ್ಖತನದ ಕಾರ್ಯಕ್ಕೆ ಕೈಹಾಕುವ ಇವರಂತಹ 'ಪ್ರೇಮಿ'ಗಳು 'ಮುಂದೇನು?' ಎಂಬ ಪ್ರಶ್ನೆಗೆ ಉತ್ತರ ಹುಡುಕೋ ಪ್ರಯತ್ನ ಮಾಡಿದರೆ ಪ್ರಾಯಶಃ ಈ ರೀತಿ ಕಣ್ಣೀರು ಹಾಕಬೇಕಾದ ಪ್ರಸಂಗ ಬರುತ್ತಿರಲಿಲ್ಲವೇನೋ? ಎಂಬ ಅನಿಸಿಕೆ ಮಿಂಚಿ ಮರೆಯಾಯ್ತು. ಯೌವನದ ಹುಚ್ಚು ಆವೇಶಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಲ್ಲ. ಆದರೆ ಆ ಆವೇಗ ಕಡಿಮೆಯಾದ ಮೇಲಷ್ಟೇ ತಾರುಣ್ಯದ ಆಕಾಂಕ್ಷೆಯಿಂದ ಉದ್ಭವವಾಗುವ ಒಂದು ಕ್ಷಣದ 'ಹುಚ್ಚು ಪ್ರೀತಿ'ಗಾಗಿ ತಾವು ಕಳೆದುಕೊಂಡಿರುವ ನಿಜವಾದ 'ಪ್ರೀತಿ'ಯ ಅರಿವಾಗುವುದು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ... ಮತ್ತೆ ಮನೆ, ಅಮ್ಮ, ಪಪ್ಪ, ಊರಿನ ನೆನಪು ತೀವ್ರವಾಗಿ ಕಾಡಲಾರಂಭಿಸಿತು. ಹೆತ್ತವರ ವಾತ್ಸಲ್ಯದ ಅನುಭೂತಿ ನೆನೆಸಿಕೊಂಡಾಕ್ಷಣ ಮನ ರೋಮಾಂಚನ ಗೊಂಡಿತು. ಈ ಮಧ್ಯೆ ಬಳಲಿದ್ದ ದೇಹವನ್ನು ನಿದ್ರಾದೇವಿ ಅದೆಷ್ಟು ಹೊತ್ತಿಗೆ ತನ್ನ ಮಡಿಲಿಗೆಳೆದುಕೊಂಡಳೋ ಅರಿವಾಗಲೇ ಇಲ್ಲ.
***
'ಚಾಯ್, ಬೋಲಿಯೇ... ಚಾಯ್... ಚಾಯ್...' ಎಂಬ ಗದ್ದಲ ಮತ್ತೊಮ್ಮೆ ಗಾಢ ನಿದ್ದೆಯಿಂದ ನನ್ನನ್ನು ಬಡಿದೆಬ್ಬಿಸಿತು. ಕಣ್ಣುಜ್ಜಿಕೊಂಡು ವಾಚ್ ನೋಡಿಕೊಂಡರೆ 8 ಗಂಟೆ ಆಗಿತ್ತು. ಅಬ್ಬಾ! ರಾತ್ರಿ ಯೋಚನೆಗಳಲ್ಲೇ ಕಳೆದುಹೋಗಿದ್ದ ನಾನು ತುಂಬಾ ಹೊತ್ತು ಮಲಗಿಬಿಟ್ಟಿದ್ದೆ. ಬರ್ತ್‌ನಿಂದ ಕೆಳಗಿಳಿದು ಇನ್ನೂ ಓಡುತ್ತಲೇ ಇದ್ದ ರೈಲಿನ ಕಿಟಕಿಯಿಂದ ಹೊರಗಿಣುಕಿ ನೋಡಿದೆ.
ಸುಳಿಯುತ್ತಿದ್ದ ತಣ್ಣನೆಯ ಗಾಳಿ, ಸಾಲು ಸಾಲು ತೆಂಗು, ಮಣ್ಣಿನ ಕಂಪು ಇನ್ನು ಸ್ವಲ್ಪವೇ ಸಮಯದಲ್ಲಿ ನಾನು ನಮ್ಮೂರಲ್ಲಿರುತ್ತೇನೆ ಎಂಬುದನ್ನು ಸಾರಿ ಹೇಳುತ್ತಿತ್ತು. ಮನೆ ಸೇರುತ್ತೇನೆಂಬ ಸಂತಸ, ಅಮ್ಮನ ಮಡಿಲು ಸೇರುವ ಆಹ್ಲಾದ ಇವೆಲ್ಲ ಭಾವಗಳು ಸೇರಿಕೊಂಡು ಖುಷಿಯಿಂದ ಕುಣಿಯಬೇಕೆಂದುಕೊಂಡರೂ ಆ ಬೋಗಿಯಲ್ಲಿ ಇನ್ನೂ ಕೆಲವು ಸಹಪ್ರಯಾಣಿಕರಿದ್ದುದರಿಂದ ಆ ಆಸೆಯನ್ನು ಅಲ್ಲೇ ಹತ್ತಿಕ್ಕಿಕೊಂಡೆ. ಈ ನಡುವೆ ರಾತ್ರಿಯ ಘಟನೆಗಳು ಮತ್ತೆ ನೆನಪಾದವು...
ಅರೆ! ಆ ಜೋಡಿ ಎಲ್ಲಿ? ಅವರಿದ್ದ ಬರ್ತ್ ಖಾಲಿಯಾಗಿತ್ತು. ಪ್ರಾಯಶಃ ನಾನು ನಿದ್ದೆಯಲ್ಲಿದ್ದಾಗ, ಅವರಿಬ್ಬರು ಇಳಿದು ಹೋಗಿರಬೇಕು... ಅಥವಾ ಇನ್ನೇನಾದರೂ...!?
ಛೇ! ಛೇ! ಆ ರೀತಿ ಕೆಟ್ಟದ್ದೇನೂ ಆಗಿರಲಿಕ್ಕಿಲ್ಲ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಕೂ... ಎಂಬ ಸದ್ದಿನೊಂದಿಗೆ ರೈಲು ಇದ್ದಕ್ಕಿದ್ದಂತೆ ತನ್ನ ವೇಗ ತಗ್ಗಿಸಿಕೊಂಡಿತು. ನಾನು ಇಳಿಯಬೇಕಾದ ನಿಲ್ದಾಣ ಬಂತು. ಅಲ್ಲಿಂದ ಮನೆ ತಲುಪಲು ಮತ್ತೆ ಬಸ್ಸು ಹಿಡಿಯಬೇಕಾಗಿದ್ದರಿಂದ ಆತುರಾತುರವಾಗಿ ಲಗೇಜುಗಳನ್ನು ಸರಿಪಡಿಸಿಕೊಂಡು ಇಳಿಯಲು ಸಿದ್ಧನಾದೆ. ಪರಿಚಿತ ನೆಲ, ಭಾಷೆಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆ ಮನದಲ್ಲಿದ್ದ ಎಲ್ಲಾ ಗೊಂದಲಗಳೂ ಕಳೆದುಹೋದವು. ಇರುಳು ಉದ್ಭವಿಸಿದ್ದ ಪ್ರಶ್ನೆ ಮರೆತು ಹೋಯ್ತು... ಆ ಪ್ರೇಮಿಗಳು ಏನಾದರು ಎಂಬ ಕುತೂಹಲ ಕೂಡಾ ಸತ್ತುಹೊಯ್ತು. ಅಂತಿಮವಾಗಿ ಅಲ್ಲಿ ಉಳಿದದ್ದು ಮನೆ ಸೇರುವ ತವಕ ಮಾತ್ರ. ಎಲ್ಲವನ್ನೂ ಮರೆತು ತನ್ನ ಗಮ್ಯದತ್ತ ಮುನ್ನುಗ್ಗುವ ರೈಲಿನಂತೆ ನಾನೂ ಹತ್ತಿರದಲ್ಲಿದ್ದ ಬಸ್ಸು ನಿಲ್ದಾಣದತ್ತ ಹೆಜ್ಜೆ ಹಾಕಿದೆ.

Friday, 22 February 2008

ಹುಚ್ಚು ಕೋಡಿ ಮನಸ್ಸು...

"ಮೊನ್ನೆ ಮೊನ್ನೆಯವರೆಗೆ ಚೆನ್ನಾಗಿದ್ದ ಹುಡುಗ ಈಗ ಒಂಥರಾ ಆಡ್ತಿದ್ದಾನೆ... ನಂಗ್ಯಾಕೋ ಅನುಮಾನ...?"
" ಅರೆ ಯಾಕೋ ಮಾರಾಯ.. ಇದ್ದಕ್ಕಿದ್ದಂಗೆ ನಗ್ತಾ ಇದ್ದೀಯಲ್ಲೋ ಏನಾಯ್ತೋ ನಿಂಗೆ..?"
ಅರೇ ಇದೇನಿದು ಅಂಥ ಯೋಚಿಸ್ತಿದ್ದೀರಾ...? ಮತ್ತೇನಿಲ್ಲ...
ಬಾಂಧವ್ಯವೊಂದರ ಅಲೆಗೆ ಸಿಕ್ಕಿಬಿದ್ದು ಹೊಯ್ದಾಡುವ ಹುಡುಗರ ಬಗ್ಗೆ ಆತನ ಮನೆಯವರು, ಸ್ನೇಹಿತರು ಯಾವ ರೀತಿ ಮಾತನಾಡುತ್ತಾರೆ ಅನ್ನೋದಕ್ಕೆ ಒಂದು ಸಣ್ಣ ಉದಾಹರಣೆ ಕೊಟ್ಟೆ ಅಷ್ಟೆ...
ಒಂದು ಅನುಪಮವಾದ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದು ನಿಜಕ್ಕೂ ಸವಾಲಿನ ಕೆಲಸ. ಅಂಥಾ ಸಂಬಂಧವೊಂದನ್ನ ಕಂಡುಕೊಳ್ಳುವ ತುಡಿತದಲ್ಲಿರುವ ವ್ಯಕ್ತಿಯ ಬಗ್ಗೆ ನಾವಾಡುವ ಸಹಜ ಮಾತುಗಳಿವು... ಆದರೆ ಈ ರೀತಿ ಗೊಂದಲಕ್ಕೆ ಬಿದ್ದವರಿಗೆ ಮಾತ್ರ ಇದ್ಯಾವುದರ ಪರಿವೇ ಇರೋದಿಲ್ಲ.. ಅವರದೇನಿದ್ರೂ 'ಡೋಂಟ್ ಕೇರ್ ಪಾಲಿಸಿ'...
ಆದರೆ ಎಷ್ಟು ದಿನ?
ತಮ್ಮನ್ನು ಕಾಡುವ ಹುಚ್ಚು ಭಾವನೆಗಳ ಅಲೆಯಿಂದ ಹೊರ ಬರುವವರೆಗೆ ಮಾತ್ರ... ನಂತರ ಅವರೂ ನಮ್ಮಂತೆ 'ನಾರ್ಮಲ್' ಮನುಷ್ಯರಾಗುತ್ತಾರೆ... ಆಮೇಲೆ ಅವರ ಜೊತೆ ಕುಳಿತು ಮಾತನಾಡಿ ನೋಡಿ... ಅದ್ಭುತ ಅನುಭವಗಳ ಮೂಟೆಯೇ ಅವರಲ್ಲಿರುತ್ತದೆ... ಏಷ್ಟಾದರೂ ಮೋಹ ಕಲಿಸುವ ಪಾಠ ನಿಜಕ್ಕೂ ಅನನ್ಯ...
ಇಷ್ಟಕ್ಕೂ ಇಲ್ಲಿ ನಾವು ಗಮನಿಸಬೇಕಾದ್ದು, ಮೋಹಕ್ಕೆ ಸಿಲುಕಿದ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎಂಬುದನ್ನಲ್ಲ. ಬದಲಾಗಿ, ಅವರನ್ನು ಆ ರೀತಿ ವರ್ತಿಸುವಂತೆ ಮಾಡುವ ಆ ಭಾವನೆಯ ಸಾಮರ್ಥ್ಯವನ್ನ.
ಒಬ್ಬ ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಏರಿಸುವ ಸಾಮರ್ಥ್ಯ ಈ ಭಾವನೆಗಳ ಹುಚ್ಚುಕೋಡಿಗಿರುತ್ತೆ. ಆದರೆ ನಮ್ಮಲ್ಲಿರುವ ವಿವೇಕ ಈ ಸೆಳೆತದಿಂದ ನಮ್ಮನ್ನು ರಕ್ಷಿಸಿ ಮತ್ತೆ ಮಾಮೂಲು ಮನುಷ್ಯರನ್ನಾಗಿಸಲು ಶಕ್ತವಾಗಿರಬೇಕಷ್ಟೆ. ಇಲ್ಲದೇ ಹೋದಲ್ಲಿ ಅನಾಹುತವಾಗುತ್ತದೆ. ಇಷ್ಟಕ್ಕೂ ಭಗ್ನ ಪ್ರೇಮಿಗಳೆಂದು ಕರೆಸಿಕೊಳ್ಳುವವರು, ಪ್ರೀತಿಗಾಗಿ ಪ್ರಾಣವನ್ನೇ ಬಲಿಕೊಟ್ಟ ಆಧುನಿಕ 'ಅಮರ ಪ್ರೇಮಿ'ಗಳ ಉದಾಹರಣೆಗಳನ್ನು ಗಮನಿಸಿದರೆ ನಿಮಗಿದು ಸ್ಪಷ್ಟವಾಗುತ್ತದೆ.
ಆದರೆ ಎಲ್ಲರೂ ಇದೇ ರೀತಿ ಇರುತ್ತಾರೆಂದಲ್ಲ. ಸರಿಯಾದ ಸಮಯದಲ್ಲಿ ಎಚ್ಚರಿಸಿದರೆ ಈ 'ಭಾವನಾ' ಜೀವಿಗಳು ಖಂಡಿತಾ ಹುಚ್ಚುಕೋಡಿಯಲ್ಲಿ ಕೊಚ್ಚಿ ಹೋಗುವುದಿಲ್ಲ. ಹಿಂತಿರುಗಿ ಬರುತ್ತಾರೆ... ಮತ್ತೆ ವಾಸ್ತವಕ್ಕೆ ತಮ್ಮನ್ನು ತಾವು ತೆರೆದು ಕೊಳ್ಳುತ್ತಾರೆ... ಇದಕ್ಕಾಗಿ ಅವರನ್ನು ಎಚ್ಚರಿಸುವುದು ಮುಖ್ಯ..
ಎಷ್ಟಾದರೂ ಈ 'ಮೋಹ'ದ ಮೋಡಿ ಎನ್ನುವುದು ತೀರಾ ಅನನ್ಯ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಈ ಸುಳಿಗೆ ಸಿಲುಕಿ ಅದರ ಸವಿಯನ್ನು, ಮಾಧುರ್ಯವನ್ನು ಅನುಭವಿಸಿಯೇ ಇರುತ್ತಾರೆ. ಈಗ ಅವುಗಳನ್ನೆಲ್ಲಾ ನೆನಸಿಕೊಂಡರೆ, ನಮ್ಮ ಹುಚ್ಚು ವಾಂಛೆಗಳ ಪೀಕಲಾಟ ಸಣ್ಣಗೆ ನಗು ತರಿಸುತ್ತವೆ. ಆದರೆ ಭಾಂದವ್ಯದ ಅಲೆಗೆ ಸಿಲುಕಿದ್ದ ಕಾಲದಲ್ಲಿ ಇವೇ ಪೀಕಲಾಟಗಳು ನಮಗೆ 'ಅಮರ ಪ್ರೇಮಿ'ಗಳ ಹೆಗ್ಗುರುತುಗಳಾಗಿ ಕಂಡಿರುತ್ತವೆ. ಕಾಲ ನಮ್ಮಲ್ಲಿ ಎಷ್ಟೊಂದು ಬದಲಾವಣೆಗಳನ್ನು ತರುತ್ತವೆ ಅಲ್ಲವೇ...!?

Monday, 11 February 2008

ಚದುರಿದ ಕನಸು...

ಯಾಕೋ ಮನಸ್ಸು ಸ್ಥಿಮಿತದಲ್ಲಿಲ್ಲ. ಭರವಸೆಯ ಒರತೆ ಬತ್ತಿ ಹೋಗಿದೆ. ಅಚಾನಕ್ಕಾಗಿ ಏಕತಾನತೆ ಕಾಡುತ್ತಿದೆ. ವರ್ಷಗಳಿಂದ ಹನಿಹನಿಯಾಗಿ ಕೂಡಿಟ್ಟ ಕನಸುಗಳೆಲ್ಲ ಒಮ್ಮೆಲೇ ಯಾರೋ ಅಪಹರಿಸಿದ ಅನುಭವ.. ಮನಸ್ಸೆಲ್ಲ ಖಾಲಿ ಖಾಲಿ... ಎತ್ತ ನೋಡಿದರೂ ಕತ್ತಲು, ಬರೀ ಗಾಡಾಂಧಕಾರ..

'ಬೆಳಕಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯ, ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದೆಂತು?' ಎಂದು ಎಲ್ಲೋ ಓದಿದ್ದ ವಾಕ್ಯ ಮನಪಟಿಲದ ಮೇಲೊಮ್ಮೆ ಮಿಂಚಿ ಮರೆಯಾಯ್ತು. ಭಾರವಾದ ಹೃದಯ ವಾಸ್ತವವನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದರೆ, ಮನಸ್ಸೆಲ್ಲೋ ಕಳೆದು ಹೋಗಿತ್ತು. ಕಣ್ಣುಗಳಲ್ಲಿ ತುಂಬಿಕೊಂಡ ನೀರು ಹೊರ ಹರಿಯುತ್ತಿರಲಿಲ್ಲ. ಎಷ್ಟಾದರು ಗಂಡಸು ಅಳಬಾರದೆನ್ನುವ ಸಂಪ್ರದಾಯದಲ್ಲಿ ಬೆಳೆದ ಮನಸ್ಸು.. ಕಣ್ಣೀರಾದರು ಏನು ಮಾಡೀತು?

ಗೆಳೆಯ ಸಂದೇಶ್ ಕಳಿಸಿದ್ದ ಎಸ್‌ಎಮ್‌ಎಸ್(SMS) ಮತ್ತೆ ಮತ್ತೆ ನೆನಪಾಗುತ್ತಿದೆ. 'ಕಣ್ಣಿಂದ ಹರಿದು ಕೆನ್ನೆ ಒದ್ದೆ ಮಾಡುವುದು ಕಣ್ಣಿರಲ್ಲ.. ಬದಲಾಗಿ ಹೃದಯದಿಂದ ಜಾರಿ ಮನಸ್ಸನ್ನು ಆರ್ದ್ರಗೊಳಿಸುವುದೇ ನಿಜವಾದ ಕಣ್ಣೀರು' ಅಬ್ಬಾ ಎಂಥಾ ಸುಂದರ ಕಲ್ಪನೆ. ನೋವಿನಲ್ಲೂ ಸುಖ ಕೊಡುವ ಸಾಲುಗಳಿವು.. ಘಾಸಿಗೊಂಡ ಹೃದಯಕ್ಕೆ ಸಾಂತ್ವನ ನೀಡುವ ಇಂತಹ ಅರ್ಥಭರಿತ ಸಾಲುಗಳು ನಿಜಕ್ಕೂ ಅದ್ಭುತ.

'ಸತ್ಯ ಯಾವತ್ತಿಗೂ ಕಹಿ' ಎಂಬುದನ್ನು ನಾನು ನಂಬಿರಲಿಲ್ಲ. ಅದರೆ ಹೃದಯವನ್ನೇ ಹಿಂಡಿ, ವಾಸ್ತವ ನಗುತ್ತಿರುವಾಗ ನಂಬಿಕೆ ಬದಲಾಗಲೇಬೇಕಿದೆ... ಇಂದು ನನ್ನೆಲ್ಲಾ ಕನಸುಗಳು ಮತ್ತೆಂದೂ ಬಾರದಷ್ಟು ದೂರ ಹೊರಟು ಹೋಗಿವೆ. ಭರವಸೆ, ಆಸೆ, ಆಕಾಂಕ್ಷೆಗಳ ಮೇಲೆ ಕಟ್ಟಿದ್ದ ಪ್ರೀತಿಯ ಅರಮನೆ, ವಾಸ್ತವದ ಬರಸಿಡಿಲಿಗೆ ಬಲಿಯಾಗಿ ಕಣ್ಣೆದುರೇ ಉರುಳಿ ಹೋಗುತ್ತಿದೆ. ಅಸಹಾಯಕತೆಯಿಂದ ಮನಸ್ಸು ರೋದಿಸುತ್ತಿದೆ...

ಈಗ ಉಳಿದಿರುವುದೆಲ್ಲ ಭಗ್ನಾವಷೇಷ ಮಾತ್ರ...ನಂಬಿಕೆಯ ಚೂರು, ಪ್ರೀತಿಯ ಬೂದಿಯ ಮಧ್ಯೆ ಅಳಿಯದೆ ಉಳಿದ ಕನಸುಗಳನ್ನು ಹೆಕ್ಕಿ ತೆಗೆಯುವ ನನ್ನ ವ್ಯರ್ಥ ಪ್ರಯತ್ನ ಕಂಡು ವಿಧಿ ನಕ್ಕಂತಾಯಿತು. ಜೀವನ ಪೂರ್ತಿ ನನ್ನ ಜೊತೆಗಿರಬೇಕೆಂದು ಕಟ್ಟಿದ್ದ ಕನಸು ಇಂದು ಇನ್ಯಾರದೊ ಪಾಲಾಗಿದೆ.. ನನ್ನ ನಿರೀಕ್ಷೆಗೆ ಬೆಂಗಾವಲಾಗಬೇಕಿದ್ದ ಭರವಸೆ ಸೋತು ನೆಲಕಚ್ಚಿದೆ...

ನೋವಿಗೆ ನಗುವಿನ ಮುಖವಾಡ ಧರಿಸಿಯಾದರು ನಾನು ಮತ್ತೆ ಜೀವನ ಯಾತ್ರೆ ಆರಂಭಿಸಲೇಬೇಕಿದೆ. ಆದರೆ ಅದು ಮತ್ತೆ ಹೊಸ ಕನಸನ್ನು ಕಟ್ಟಿ ಬೆಳೆಸುವುದಕಾಗಲ್ಲ ಬದಲಾಗಿ ಕಳೆದುಕೊಂಡ ಕನಸಿನ ನೆನಪನ್ನು ಸದಾ ಹಸಿರಾಗಿರಿಸುವುದಕ್ಕಾಗಿ...... ಆ ನೆನಪಲ್ಲೇ ಉಳಿದ ಉಸಿರನ್ನು ಕಾಪಾಡುವುದಕ್ಕಾಗಿ.... ನಾನು ಬದುಕಲೇಬೇಕಾಗಿದೆ... ಪ್ರೀತಿಯ ನೆನಪಿಪಾಗಿ...

Monday, 19 November 2007

"ಮೌನ ಮಾತನಾಡುವುದಿಲ್ಲ..."

"ನಿನ್ನ ಮೌನವನ್ನು ಅರ್ಥಮಾಡಿಕೊಳ್ಳದವರು ನಿನ್ನ ಮಾತುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ.."
ಗೆಳೆಯನೊಬ್ಬ ಕಳುಹಿಸಿದ ಈ ಎಸ್ಸೆಮ್ಮೆಸ್ ನ್ನು ಮತ್ತೆ ಮತ್ತೆ ಓದಿಕೊಂಡೆ...
ಮನದಲ್ಲೇನೋ ಸಂಶಯ.! ಈ ಮಾತು ನಿಜವೇ..?
ಹಾಗಾದರೆ ಎಲ್ಲರಿಗೂ ಮೌನದ ಭಾಷೆ ಅರ್ಥವಾಗುತ್ತದೆಯೇ?
ಇಲ್ಲ... ಖಂಡಿತಾ ಇಲ್ಲ...ಯೋಚಿಸಿದಷ್ಟೂ ಮನಸ್ಸು ಗೊಂದಲದ ಗೂಡಾಗುತ್ತಿದೆ.. ಉತ್ತರ ಮಾತ್ರ ಸಿಗುತ್ತಿಲ್ಲ..


ನಗೇ ಅರಿವಿಲ್ಲದಂತೆ ಮನಸ್ಸು ಮತ್ತೆ ಅವಳ ನೆನಪನ್ನು ಕೆದಕಲಾರಂಬಿಸಿತು. ನನ್ನೆಲ್ಲಾ ಮಾತನ್ನು ಮೌನವಾಗಿಸಿ ಕೊನೆಗೆ ಆ ಮೌನದ ನೆನಪೊಂದನ್ನೇ ನನ್ನ ಪಾಲಿಗೆ ಉಳಿಸಿ ಹೋದವಳವಳು. ಅವಳ ನಗುವಿನ ಸುಂದರ ಸ್ಮೃತಿ ಮನದಲ್ಲಿ ಮೂಡುತ್ತಿದ್ದಂತೆಯೇ, ಇಷ್ಟು ವರ್ಷಗಳಿಂದ ಹೃದಯದಲ್ಲಿ ಉಳಿಸಿಕೊಂಡಿದ್ದ ಮಾತುಗಳೆಲ್ಲವೂ ಮೌನದ ಪೊರೆಯನ್ನು ಭೇದಿಸಿ ನನ್ನನ್ನು ನೋವಿನ ಮಡುವಿನಲ್ಲಿ ಮುಳುಗಿಸಿದಂತಾಯ್ತು.. ಹೇಳಲಾಗದ ಅವ್ಯಕ್ತ ಯಾತನೆ..
ಅವಳ ನೆನಪೆಂದರೆ ಹಾಗೇನೆ.. ಕೇವಲ ನೋವು ಮಾತ್ರ ತುಂಬಿದ್ದರೂ ಕೂಡಾ ಅದು ಮಧುರ...ಅಬ್ಬಾ!ಎಷ್ಟೊಂದು ಮಾತುಗಳಿದ್ದವು ನನ್ನಲ್ಲಿ.. ಅವಳು ನಕ್ಕಾಗ "ಮುದ್ದಾಗಿ ಕಾಣುತ್ತಿ" ಅನ್ನಬೇಕಿತ್ತು. ಅತ್ತಾಗ "ನಾನಿದ್ದೇನೆ ಅಳಬೇಡ" ಎಂದು ಹೇಳಬೇಕಿತ್ತು. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ನನ್ನನ್ನು ಗೋಳು ಹೊಯ್ದುಕೊಳ್ಳುವಾಗ "ಸದಾ ಹೀಗೆ ನನ್ನ ಜೊತೆಗಿರು" ಅನ್ನಬೇಕಿತ್ತು.. ಆದರೆ ಈ ಯಾವ ಮಾತುಗಳೂ ನನ್ನ ತುಟಿಯನ್ನು ದಾಟಲೇ ಇಲ್ಲ.. ಅವಳ ಮುಗ್ಧ ಸೌಂದರ್ಯದೆದುರು ನನ್ನ ಮಾತುಗಳಿಗೆ ಧ್ವನಿಯಾಗುವ ತಾಕತ್ತು ಬರಲೇ ಇಲ್ಲ.. ಅದು ಮೌನವಾಗಿಯೇ ಎದೆಗೂಡು ಸೇರಿಕೊಂಡುಬಿಟ್ಟಿತ್ತು...

ಪ್ರತೀ ಹಂತದಲ್ಲೂ ಅವಳೆದುರು ಮಾತನಾಡಲಾಗದೆ ಸೋತು, ಅವಳನ್ನೂ ಸಂಪೂರ್ಣವಾಗಿ ಕಳೆದುಕೊಂಡು , ಕೇವಲ ನೆನಪುಗಳಲ್ಲೇ ಅವಳೊಂದಿಗಿದ್ದು ಬಿಡುವ ಹುಂಬತನಕ್ಕೆ ಈಗಾಗಲೇ ಒಗ್ಗಿಕೊಂಡಿರುವ ನನಗೆ ಅವಳ ನೆನಪು ಕೆದಕಿದ ಗೆಳೆಯನ ಎಸ್ಸೆಮ್ಮೆಸ್ ಮೇಲೆ ಅಗಾಧ ಸಿಟ್ಟು ಬಂದುಬಿಟ್ಟಿತ್ತು. ತಕ್ಷಣ ಅದನ್ನು ಡಿಲೀಟ್ ಮಾಡಿದೆ. ಮನಸ್ಸೇಕೋ ನಿರಾಳವೆನಿಸಿತು. ಈಗ ಮೊಬೈಲ್‌ನ ಇನ್‌ಬಾಕ್ಸ್‌ನಂತೆ ನನ್ನ ಮನಸ್ಸೂ ಖಾಲಿ ಖಾಲಿ.. ಆದರೆ ಇದು ಕ್ಷಣಿಕ.. ಮತ್ತೆ ಇನ್ನೊಂದು ಎಸ್ಸೆಮ್ಮೆಸ್ ಬಂದು ಅವಳ ನೆನಪನ್ನು ಕದಡುವವರೆಗೆ ಮಾತ್ರ.. ನಂತರ ಮತ್ತದೇ ಗೊಂದಲ... ನೋವು.. ಮಧುರ ಯಾತನೆ...

Sunday, 18 November 2007

"ಐ ಲವ್ ಯೂ"- ಮೊದಲ ಮಾತೇ...ಕೊನೆಯ ಮಾತೇ...?

ಮಹಿಳೆಯರು ಕೇಳಲು ಅತ್ಯಂತ ಇಷ್ಟಪಡುವ ಮೂರು ಶಬ್ದಗಳು ಯಾವುವು?
ಅರೆ.. ಯಾವುದಪ್ಪಾ ಅದು ಎಂದು ಯೋಚಿಸುತ್ತಿದ್ದೀರಾ... ಸ್ವಲ್ಪ ಪ್ರಯತ್ನಪಡಿ...
ಹ್ಞಾಂ !...ಅದೇ...
ನಿಮ್ಮ ಉತ್ತರ ಐ..... ಲವ್...... ಯೂ.... ಎಂದಾಗಿದ್ದಲ್ಲಿ ನೀವು ಸರಿಯಾಗಿಯೆ ಊಹಿಸಿದ್ದೀರಿ ಬಿಡಿ...

ಸಾಮಾನ್ಯವಾಗಿ, ನಾವೆಲ್ಲಾ ತಿಳಿದುಕೊಂಡಿರುವಂತೆ ಎಲ್ಲಾ ಮಹಿಳೆಯರೂ ತಮಗೊಪ್ಪುವ 'ರೋಮ್ಯಾಂಟಿಕ್' ಪುರುಷರಿಂದ 'ಐ ಲವ್ ಯೂ' ಎಂಬ ಅಮೂಲ್ಯ ಶಬ್ಧಗಳನ್ನು ಕೇಳಲು ಇಚ್ಚಿಸುತ್ತಾರೆ. ಸರಿ ತಾನೆ?

ಆದರೆ ಸ್ನೇಹಿತರೆ, ಈ ಬಾವನೆ ತಪ್ಪು. ಒಂದು ವೇಳೆ ನೀವು ಹಾಗಂದುಕೊಂಡಿದ್ದರೆ ಅದು ಖಂಡಿತವಾಗಿಯೂ ತಪ್ಪು...

ಅರೆ... ಇವನ್ಯಾವನಪ್ಪ... ತಲೆ ಕೆರ್ಕೊಂಡು ನಮ್ ಮುಂದೆ ಈ ರೀತಿ ಕುಯ್ಯುತ್ತಿದ್ದಾನಲ್ಲಾ ಅನ್ತೀರಾ... ಹಾಗಾದ್ರೆ ತಡೀರಿ, ಮುಂದೆ ಓದಿ...

ಒಬ್ಬರನ್ನು 'ಪ್ರೀತಿ'ಸುವುದು ಎಂಬ ದೃಷ್ಟಿಕೋನವೇ ಮಾನವನ ಕಲ್ಪನೆಗೆ ನಿಲುಕದ್ದು. ಹಾಗಿರುವಾಗ ಅದನ್ನು ಹೇಳಲು ಆತುರಪಡುವುದು ಹೇಗೆ ತಾನೆ ಸಮಂಜಸವಾದೀತು...? ಈ ಕುರಿತು ಯಾವತ್ತಾದರೂ ಯೋಚಿಸಿದ್ದೀರಾ?

''ಐ ಲವ್ ಯೂ'' ಎಂಬ ಸಮ್ಮೋಹಕ ಶಬ್ದ ಎಷ್ಟು ಬೇಗ ನಿಮ್ಮ ತುಟಿ ದಾಟಿ ಹೊರ ಬರುತ್ತದೋ ಅಷ್ಟು ಬೇಗ ನೀವು ಕಳೆದುಕೊಳ್ಳಲು ಸಿದ್ಧವಾಗಬೇಕಾಗುತ್ತದೆ. ನಿಮ್ಮ ಮೇಲೆ ಆಕೆಗಿರುವ ಆಕರ್ಷಣೆ ಅಷ್ಟು ಬೇಗ ಚದುರಿಹೋಗುತ್ತದೆ.

ಸ್ನೇಹಿತರೆ, ಗಮನವಿಟ್ಟು ಕೇಳಿ.-ಸೆಕ್ಸ್ ಎನ್ನುವುದು ಗಂಡಸರ ಪಾಲಿಗೆ ಒಂದು ಪ್ರಾಥಮಿಕ ದೈಹಿಕ ಅಗತ್ಯವಾದರೆ, ಮಹಿಳೆಯರಿಗೆ ಅದು ಭಾವನಾತ್ಮಕ ಅವಶ್ಯಕತೆ. ಇದನ್ನ ಯಾವತ್ತೂ ಮರೆಯಬೇಡಿ..!

ಯಾವಾಗ ಒಬ್ಬ ಪುರುಷ ಮಹಿಳೆಯೆಡೆಗೆ ಆಕರ್ಷಿತನಾಗುತ್ತಾನೋ ಅಂದಿನಿಂದಲೆ ಈ ಮೂರು ಸಮ್ಮೋಹಕ ಶಬ್ದಗಳನ್ನು ಆಕೆಯ ಕಿವಿಯಲ್ಲಿ ಉಸುರಲು ತವಕಿಸಲಾರಂಭಿಸುತ್ತಾನೆ. ಇದರಿಂದ ತಾನು ಆಕೆಯ ಪ್ರೀತಿಯನ್ನು ಗಳಿಸುತ್ತೇನೆಂಬ ಹುಚ್ಚು ಭ್ರಮೆಯಲ್ಲಿ ಬೀಳುತ್ತಾನೆ. ಆದರೆ ಒಂದು ಬಾರಿ ಆತ ಅವಸರಪಟ್ಟು ಈ ಶಬ್ದಗಳನ್ನು ಹೇಳಿದರೆ.....,
ಉ ಹುಂ.... ಅಲ್ಲಿ ನಡೆಯುವುದೇ ಬೇರೆ. ಅದು ಆತ ಅಂದುಕೊಂಡದ್ದಕ್ಕೆ ವಿರುದ್ಧವಾಗಿರುತ್ತದೆಂಬುದೇ ದುರಂತ...

ಸಹಜವಾಗಿಯೆ ಮಹಿಳೆಯರು ತಮ್ಮ ನಿರ್ಧಾರಗಳನ್ನು ವಿಸ್ಮಯಕಾರಿ ಅದೃಷ್ಟದಾಟಕ್ಕೆ ಬಿಟ್ಟುಬಿಡುತ್ತಾರೆ. ಒಬ್ಬ ಮಹಿಳೆಗೆ ನಿಜವಾಗಿಯೂ ಬೇಕಾಗಿರುವುದು ನೀವು ಬಾಯಿಬಿಟ್ಟು ಹೇಳುವ 'ಐ ಲವ್ ಯೂ' ಎಂಬ ಮೂರು ಸಮ್ಮೋಹಕ ಶಬ್ದಗಳಲ್ಲ. ಬದಲಾಗಿ ನೀವು ಆಕೆಯನ್ನು ಇಷ್ಟಪಡುತ್ತಿದ್ದೀರಿ ಎಂಬ ಸಣ್ಣ ಸುಳಿವು ಮಾತ್ರ.. ಆಕೆಯ ಭಾವನಾತ್ಮಕ ಅವಶ್ಯಕತೆಯನ್ನು ಪೂರೈಸಲು ಇವಿಷ್ಟೇ ಸಾಕು. ಆದರೆ ಈ ಸುಳಿವನ್ನು ನಿಮ್ಮ ವರ್ತನೆಯಿಂದ, ಭಾವನೆಗಳಿಂದ ವ್ಯಕ್ತಪಡಿಸಬೇಕೆ ವಿನಃ ಮಾತುಗಳಿಂದಲ್ಲ...

ಹಾಗಾದರೆ ನೀವು ಮಾಡಬೇಕಾಗಿರುವುದೇನು?

ಇದಪ್ಪಾ 'ಮಿಲಿಯನ್ ಡಾಲರ್' ಪ್ರಶ್ನೆ... ನೀವೇನು ಮಾಡಬಹುದು...?
ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಸಾಕು...ನೀವು ಆಕೆಯ ಆಕರ್ಷಣೆಯ ನಿಯಂತ್ರಣದಲ್ಲಿದ್ದೀರಿ, ನಿಮ್ಮನ್ನು ಆಕೆ ಯಾವಾಗ ಬೇಕಾದರೂ ಹೊಂದಬಹುದೆಂಬ ಸತ್ಯ ಆಕೆಯ ಮನದಲ್ಲಿ ಮೂಡಬಾರದು. ಒಂದು ವೇಳೆ ಹಾಗಾದಲ್ಲಿ ನೀವು ದುರಂತವೊಂದಕ್ಕೆ ದಾರಿಮಾಡಿಕೊಟ್ಟಿರೆಂದೇ ಅರ್ಥ. ಈ ಸತ್ಯ ಆಕೆಗೆ ತಿಳಿದ ತಕ್ಷಣ ನೀವು ತನ್ನನ್ನು ಪ್ರೀತಿಸುತ್ತಿದ್ದೀರೊ, ಇಲ್ಲವೋ ಎಂಬ ಆಕೆಯ ಕುತೂಹಲ ಮಾಯವಾಗುತ್ತದೆ. ಆಕೆಯ ನಿರೀಕ್ಷೆಗೆ, ಕಾಯುವಿಕೆಗಳಿಗ್ಯಾವುದಕ್ಕೂ ಅರ್ಥವಿರುವುದಿಲ್ಲ. ಇನ್ನು ಸಂಭ್ರಮದ ಘಳಿಗೆಗಳಂತೂ ತೀರಾ ಸಪ್ಪೆಯಾಗಿಬಿಡುತ್ತವೆ. ಈ ಅಂಶಗಳೇ ಇಬ್ಬರನ್ನು ಒಂದೆಡೆ ಹಿಡಿದಿಡುವುದು. ಇವೆ ಇಲ್ಲಾ ಎಂದರೆ? ಅಲ್ಲಿಗೆ ಮುಗಿಯಿತು ನಿಮ್ಮ ಸಂಬಂಧ. ಹೇಳಿ ಕೇಳಿ ಒಂದು ಬಾಂಧವ್ಯವೆಂದ ಮೇಲೆ ಅಲ್ಲಿ ಕೊಂಚವಾದರೂ ಆಕರ್ಷಣೆಯಿರದಿದ್ದರೆ ಹೇಗೆ? ನೀವೆ ಹೇಳಿ?

ಮಧುರ ಬಾಂಧವ್ಯದ ಆರಂಭದ ಹಂತ...

ನಾನು ಆಕೆಯನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೇನೆ.. ಮುಂದೇನು? ಪ್ರಾಯಶಃ ನೀವು ನಿಮ್ಮನ್ನೇ ಎಷ್ಟೋ ಬಾರಿ ಈ ಪ್ರಶ್ನೆ ಕೇಳಿಕೊಂಡಿರಬಹುದು. ಅದಕ್ಕೊಂದು ಸರಳವಾದ ಆದರೆ ಅಷ್ಟೇ ಪರಿಣಾಮಕಾರಿಯಾದ ಪರಿಹಾರವಿದೆ. ನಿಮ್ಮ ಪ್ರೀತಿಯನ್ನ ಆಕೆಗೆ ಹೇಳಬೇಡಿ. ಮಾತು ತುಂಬಾ ಅಗ್ಗ, ಆದರೆ ನಮ್ಮ ಕಾರ್ಯಗಳು ಹಾಗಲ್ಲ. ಅದಕ್ಕೆ ಅದರದ್ದೇ ಆದ ತೂಕವಿದೆ. ತುಂಬಾ ಕಾಲ ಇನ್ಯಾರದೋ ನೆನಪಿನ ಪುಟಗಳಲ್ಲಿ ನೆಲೆನಿಲ್ಲುವ ತಾಕತ್ತಿದೆ. ಮಾತಿಗೆ ಈ ಶಕ್ತಿಯಿಲ್ಲ. ನಿಮ್ಮ ಪ್ರೀತಿಯನ್ನ ಆಕೆಗೆ ಹೇಳಬೇಡಿ. ಬದಲಿಗೆ ಆಕೆಗೆ ನಿಮ್ಮ ಪ್ರೀತಿಯನ್ನ ಅನುಭವಿಸಲು ಬಿಡಿ. ನಿಮ್ಮ ಕಾರ್ಯಗಳ ಮೂಲಕ, ವರ್ತನೆಗಳ ಮೂಲಕ ಅದನ್ನಾಕೆಗೆ ಮನವರಿಕೆ ಮಾಡಿಕೊಡಿ. ನೀವಾಕೆಗೆ ಸಾಕಷ್ಟು ಗಮನಕೊಡುತ್ತೀರಿ ಎಂಬುದನ್ನ ಮನದಟ್ಟು ಮಾಡಿಸಿ. ನಿಮ್ಮ ಸಾಂಗತ್ಯದ ಸವಿಯನ್ನ ಕ್ಷಣಕ್ಷಣವೂ ಅನುಭವಿಸಲು ಬಿಡಿ. ಜೊತೆಗೆ...ಆಕೆಯಿಲ್ಲದೆ ನೀವು ಬದುಕಬಲ್ಲಿರಿ ಎಂಬ ವಾಸ್ತವನ್ನೂ ತಿಳಿಸಿಕೊಡಿ. ಬಾಂಧವ್ಯವನ್ನು ಯಾವಾಗಲೂ ಜೀವಂತಿಕೆಯಿಂದಿಡಿ. ಇದೇ ಆಕೆಯ ದೃಷ್ಟಿಯಲ್ಲಿ ನಿಮ್ಮನ್ನು ಆಕರ್ಷಕ ವ್ಯಕ್ತಿಯನ್ನಾಗಿಸುವುದು. ಮಹಿಳೆಯರು ಯಾವಾಗಲೂ ಆಕರ್ಷಕ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ. ಕಾರ್ಯಪ್ರವೃತ್ತ ಚಾಣಾಕ್ಷರನ್ನ ಮೆಚ್ಚಿಕೊಳ್ಳುತ್ತಾರೆ. ಅದು ಬಿಟ್ಟು ಭಾವನಾತ್ಮಕವಾಗಿ ದುರ್ಬಲರಾದವರನ್ನಲ್ಲ. ಹೆಂಗರಳು ಹೊಂದಿರುವ ಪರರುಷರನ್ನಂತೂ ಮೊದಲೇ ಅಲ್ಲಾ...
ನೀವು ಯಾರನ್ನಾದರೂ ಇಷ್ಟಪಡುತ್ತೀರಿ ಎಂದರೆ, ಅದನ್ನಾಕೆಗೆ ಹೇಳಲೇ ಬೇಕೆಂದು ಆತುರಪಡುತ್ತಿದ್ದರೆ, ಸ್ವಲ್ಪ ನಿಲ್ಲಿ. ನಿಮ್ಮ ಪ್ರೀತಿ ಆಕೆಗೆ ಅರ್ಥವಾಗುವವರೆಗೆ ಸುಮ್ಮನಿದ್ದುಬಿಡಿ. ಇದು ಮೂರ್ಖತನವೆನಿಸುತ್ತಿದೆಯೆ? ಆದರೆ ಒಂದು ತಿಳಿದುಕೊಳ್ಳಿ. ಬಾಂಧವ್ಯ ಮಧುರವಾಗಿರಬೇಕಾದರೆ ಕಾಯುವಿಕೆ ಅನಿವಾರ್ಯ. ಅಷ್ಟರವರೆಗೆ ಆಕೆ ತನ್ನ ಭಾವನೆಗಳನ್ನ ತನ್ನ ಸ್ನೇಹಿತೆಯರಲ್ಲಿ ಹಂಚಿಕೊಳ್ಳಬೇಕೆ ವಿನಃ ನಿಮ್ಮಲ್ಲಲ್ಲ. ತೀರಾ ಅಷ್ಟರ ಮಟ್ಟಿಗೆ ಆಕೆಯನ್ನ ಕಾಡಿದರೆ ನಿಮ್ಮ ಅರಳುತ್ತಿರುವ ನಿಮ್ಮ ಬಾಂಧವ್ಯಕ್ಕೆ ನೀವೇ ಕೊಳ್ಳಿಯಿಟ್ಟಂತಾದೀತು ಎಚ್ಚರ...

ಆದರೆ ಇಲ್ಲೊಂದು ಸಣ್ಣ ಸಮಸ್ಯೆಯಿದೆ. ಬಹಳಷ್ಟು ಪುರುಷರು ಬಾವನಾತ್ಮಕವಾಗಿ ದುರ್ಬಲರು. ಇದಕ್ಕೆ ವಿರುದ್ಧವಾಗಿ ಮಹಿಳೆಯರು ಸವಾಲುಗಳನ್ನು ಎದುರಿಸುವಂತಹ ಪುರುಷರನ್ನು ಇಷ್ಟಪಡುತ್ತಾರೆಯೆ ಹೊರತು, ನಿನ್ನನ್ನು ಪ್ರೀತಿಸುತ್ತೇನೆ ಎಂದು ಆಕೆಯ ಹಿಂದೆ ಠಾಂ,ಠಾಂ ಹೊಡೆದುಕೊಂಡು ಸುತ್ತುವವರನ್ನಲ್ಲ. ಆದ್ದರಿಂದ ಈ ಕುರಿತು ನಿರ್ಧರಿಸುವ ಮೊದಲು ಕೆಳಗೆ ಹೇಳಿರುವ ಎರಡು ಅಂಶಗಳನ್ನು ಗಮನಿಸಿ...
1) ನೀವು ಆಕೆಯೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿಲ್ಲವೆಂದರೆ, ನೀವಾಕೆಗೆ 'ಐ ಲವ್ ಯೂ' ಹೇಳಲೇಕೂಡದು. (ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ನಡೆಯುವಂತೆ, ನೀವಿಬ್ಬರು ಕೇವಲ ಸ್ನೇಹಿತರಾಗಿದ್ದು, ನೀವೊಬ್ಬರೇ ಏಕಮುಖವಾಗಿ ಆಕೆಯನ್ನು ಪ್ರೀತಿಸುತ್ತಿದ್ದರೆ ಅದನ್ನಾಕೆಗೆ ಹೇಳದಿರುವುದೇ ಒಳಿತು.)
2) ಒಂದು ವೇಳೆ ಆಕೆಯೆ ಮೊದಲು 'ಐ ಲವ್ ಯೂ' ಹೇಳಿದರೆ, ಸುಮ್ಮನೆ 'ನನಗದು ಗೊತ್ತು' ಎಂದು ಬಿಡಿ. ಇದು ನಿಮ್ಮಿಬ್ಬರ ನಡುವಿನ ಬಾಂಧವ್ಯದಲ್ಲಿ ಕುತೂಹಲ, ಆಕರ್ಷಣೆಯನ್ನು ಉಳಿಸಿಕೊಂಡು ಮುಂದೆ ಅನಿಯಮಿತ ಆತ್ಮೀಯತೆಯನ್ನು ಕಟ್ಟಿಕೊಡಲು ನೆರವಾಗುತ್ತದೆ.

'ಪ್ರೀತಿ' ಎಂಬುದು ದಿನಗಳೆದಂತೆ ಸತ್ವಯುತವಾಗಿ ಬೆಳೆಯುವ ಒಂದು ಅನನ್ಯ ಅನುಭೂತಿ. ಅದು ಸಂಬಂಧವೊಂದನ್ನು ಮುಂದುವರಿಸಿಕೊಂಡು ಹೋಗಲು ನಮ್ಮ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಬೇಡುತ್ತದೆ. ಪ್ರೀತಿಯೆಂಬುದು ಕೇವಲ ಒಂದು ರಾತ್ರಿಯಲ್ಲಿ ಅಂಕುರವಾಗುವಂತಹ ಸಸಿಯಲ್ಲ. ಅದು ಎಷ್ಟೋ ವರ್ಷಗಳ ಕಾಯುವಿಕೆ ಫಲ. ಆದ್ದರಿಂದ ಇನ್ನು ಮುಂದೆ ಆಕೆಗೆ ನೀವು-'ನೀನು ನನ್ನನ್ನ ಇಷ್ಟಪಡುತ್ತಿ ಎಂಬುದು ಗೊತ್ತು 'ಎಂದು ಹೇಳುವ ಸನ್ನಿವೇಶ ನಿರ್ಮಿಸಿಕೊಳ್ಳಬೇಕೆ ವಿನಃ, 'ನಾನು ನಿನ್ನನ್ನು ಪ್ರೀತಿಸುತ್ತೇನೆ 'ಎಂಬಂತಹ ಪರಿಸ್ಥಿತಿಯನ್ನಲ್ಲ. ಒಂದು ವೇಳೆ ಇದನ್ನೆಲ್ಲಾ ಮೀರಿ ನೀವು ಆಕೆಗೆ 'ಐ ಲವ್ ಯೂ' ಹೇಳಲೇಬೇಕೆಂದರೆ ಅದಕ್ಕೆ ಸೂಕ್ತ ಸಮಯ, ಒಂದೋ ನಿಮ್ಮಿಬ್ಬರ ಮದುವೆಯ ದಿನ ಅಥವಾ ನಿಮ್ಮಿಬ್ಬರಲ್ಲೊಬ್ಬರ ಜೀವನದ 'ಕೊನೆಯ' ದಿನ...
ಯೋಚಿಸಿ...