Sunday, 26 October 2008

ದೀಪಾವಳಿ




ದೀಪಾವಳಿ

ಗೆಳತಿ...
ನಿನ್ನೆರಡು ಕಣ್ಣುಗಳು
ಜೋಡಿ ಹಣತೆಗಳಿದ್ದಂತೆ.
ಅದಕ್ಕೇ...
ನೀನು ನನ್ನೊಡನಿರುವ ಪ್ರತಿ ಕ್ಷಣವೂ,

ನನಗೆ ದೀಪಾವಳಿ!

Friday, 11 April 2008

ಬೋಗಿಯೊಳಗಿನ ಕಲರವ...

ರಾಜಧಾನಿಯ ಥಳುಕು- ಬಳುಕಿನ ನಡುವೆಯೇ ಹೊತ್ತು ಕಳೆಯುವುದಿಲ್ಲ ಎಂಬ ನನ್ನಂತಹ ಸೋಮಾರಿಗೆ ಎರಡು ದಿನಗಳ ರೈಲು ಪಯಣ ಮಹಾನ್ ಶಿಕ್ಷೆಯಂತೆ ಅನಿಸಿದ್ದರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ. ನಗರ, ಹಳ್ಳಿ, ಬೆಟ್ಟ- ಗುಡ್ಡಗಳನ್ನು ಹಿಂದಿಕ್ಕಿ ರೈಲು ಮುಂದೆ ಓಡುತ್ತಿತ್ತು. ಸಾಗಿದಷ್ಟೂ ಮುಗಿಯದ ಹಾದಿ. ಕಪ್ಪನೆಯ ಹೊಗೆಯುಗುಳುತ್ತಾ ರೈಲು ಮುಂದಕ್ಕೆ ದೌಡಾಯಿಸುತ್ತಿದ್ದರೆ ನನ್ನ ಮನಸ್ಸು ನೆನಪುಗಳ ಕಣಜದೊಳಗೆ ನಿಧಾನವಾಗಿ ಹಿಂದಕ್ಕೆ ಜಾರುತ್ತಿತ್ತು...
ಬದುಕು ಎಲ್ಲವನ್ನೂ ಕಲಿಸುತ್ತದೆ. ಅನಿವಾರ್ಯತೆ ಎದುರಾದಾಗ ಎಂತಹ ಭಾವನೆಗಳೂ ಬಾಲಿಶವಾಗುತ್ತದೆ ಎಂದು ಅಪ್ಪ ಹೇಳುತ್ತಿದ್ದ ಮಾತು ಮನದಲ್ಲೊಮ್ಮೆ ಮಿಂಚಿ ಮರೆಯಾಯ್ತು. ಆದರೆ ನನ್ನ ಬದುಕೇ ಆ ಮಾತಿಗೆ ನಿದರ್ಶನವಾದೀತು ಎಂಬ ಕಲ್ಪನೆಯೂ ನನಗಿರಲಿಲ್ಲ. ಕಾಲೇಜು ಮೆಟ್ಟಿಲೇರಿದ್ದರೂ ಅಮ್ಮನ ಬೆಚ್ಚಗಿನ ಆರೈಕೆಯಲ್ಲಿಯೇ ಭದ್ರವಾಗಿ ಬಚ್ಚಿಟ್ಟು ಕೊಂಡಿದ್ದ ನಾನು ಉದ್ಯೋಗ ನಿಮಿತ್ತ ಅಪ್ಪ-ಅಮ್ಮ, ಮನೆ, ಸಂಬಂಧಗಳ ಸೂಕ್ಷ್ಮ ಸುಳಿಗಳನ್ನು ಬಿಟ್ಟು ಸಾವಿರಾರು ಮೈಲು ದೂರದ ಊರಿಗೆ ಬಂದು ನೆಲೆಸಿದ್ದು ವಿಧಿಯ ಆಟವೇ? ಅಥವಾ ಬದುಕಿನ ವಿವಿಧ ಮಜಲಿನ ಒಂದು ಹಂತವೇ? ಎಂಬ ಧ್ವಂದ್ವ ನನ್ನನ್ನಿಂದಿಗೂ ಕಾಡುತ್ತಿದೆ. ತಲೆ ಧಿಮ್ಮೆನ್ನುವಂತೆ ಮಾಡುತ್ತಿದ್ದ ಈ ಎಲ್ಲಾ ಯೋಚನೆಗಳ ನಡುವೆಯೂ, ಆರು ತಿಂಗಳ ಬಳಿಕ ಮತ್ತೆ ಹುಟ್ಟಿದ ಮಣ್ಣಿಗೆ ಮರಳಿ, ತಾಯ ಮಡಿಲಲ್ಲಿ ತಲೆಯಿಟ್ಟು, ಇಷ್ಟು ಕಾಲ ಮನದೊಳಗೇ ಹುದುಗಿಸಿಟ್ಟಿದ್ದ ಬೇಗುದಿ, ಬೇಸರಗಳನ್ನೆಲ್ಲಾ ಮರೆಯುವ ತವಕ ಮಾತ್ರ ಕಿಂಚಿತ್ತೂ ಕಡಮೆಯಾಗಿರಲಿಲ್ಲ. ಆ ಅವರ್ಣನೀಯ ಸಂಭ್ರಮದ ಕ್ಷಣದ ಮುಂದೆ ಈ ಆಯಾಸವೆಲ್ಲವೂ ಗೌಣವಾಗಿ ಕಂಡಿತ್ತು. ಮತ್ತೆ ಹಳೆಯ ದಿನಗಳು ಮರಳಬಾರದೇ ಎನ್ನುವ ತವಕದೊಂದಿಗೆ, ಬಾರದ ನಿದ್ದೆಯನ್ನು ತಂದುಕೊಳ್ಳುವ ಪ್ರಯತ್ನ ಮಾಡುತ್ತಾ ನಿಧಾನವಾಗಿ ಕಣ್ಣುಗಳನ್ನು ಮುಚ್ಚಿಕೊಂಡೆ. ರೈಲಿನ ಕುಲುಕಾಟ, ಹಿತವಾಗಿ ಬೀಸುತ್ತಿದ್ದ ಗಾಳಿ ಇವೆಲ್ಲವೂ ತೊಟ್ಟಿಲಿನೊಳಗೆ ಬೆಚ್ಚಗೆ ಮಲಗಿದ ಕಂದನ ಸುಖವನ್ನು ನೆನಪಿಸುತ್ತಿತ್ತು... ಕಣ್ಣಾಲಿಗಳಲ್ಲಿ ನಿದ್ದೆಯ ಜೊಂಪು ಮೆತ್ತಗೆ ಆವರಿಸತೊಡಗಿತು...
***
ಪಿಸುಮಾತು, ಮೆಲುವಾದ ಬಿಕ್ಕಳಿಕೆ, ಸಾಂತ್ವನದ ನುಡಿಗಳು... ಅರೆರೆ ಇದೇನಿದು ಅಂದುಕೊಳ್ಳುವಷ್ಟರಲ್ಲಿ ನಿದ್ರಾದೇವಿಯ ಗಾಢ ಆಲಿಂಗನದಿಂದ ಒಮ್ಮೆಲೆ ಹೊರ ಜಾರಿದ ಅನುಭವ. ವಾಸ್ತವ ಅರಿವಿಗೆ ಬಂದು ಕಣ್ತೆರೆದು ನೋಡಿದರೆ ಸುತ್ತಲೂ ಕತ್ತಲು. ರಾತ್ರಿಯ ಮೌನವನ್ನು ಮುರಿದು ಮುನ್ನುಗುತ್ತಿದ್ದ ರೈಲಿನ ಸದ್ದು. ಅಲ್ಲೊಮ್ಮೆ ಇಲ್ಲೊಮ್ಮೆ ಮಿಣುಕಾಡುತ್ತಿದ್ದ ಬೆಳಕು ಬಿಟ್ಟರೆ ಬೇರೆ ‍ಯಾವುದೂ ಅರಿವಿಗೆ ಬರಲಿಲ್ಲ. ಆದರೆ ಈ ಮಧ್ಯೆಯೂ ನನಗೆ ಆ ಬಿಕ್ಕಳಿಕೆ ಕೇಳಿಸಿದ್ದು ನಿಜ. ಅದು ಖಂಡಿತಾ ಕನಸಲ್ಲ ಎಂದು ಮನಸ್ಸು ಒತ್ತಿ ಹೇಳುತ್ತಿತ್ತು.
ನಿಧಾನವಾಗಿ ಬೋಗಿಯೊಳಗೆ ಹರಡಿದ್ದ ಮಂದ ಬೆಳಕಿಗೆ ಕಣ್ಣು ಹೊಂದಿಕೊಳ್ಳಲಾರಂಭಿಸಿತು. ನನ್ನ ಎಡಗಡೆಗಿದ್ದ ಬರ್ತ್‌ನಿಂದ ಆ ಬಿಕ್ಕಳಿಕೆ ಕೇಳಿಬರುತ್ತಿತ್ತು. ಅದು ಮುಂಜಾನೆ ನನ್ನೊಂದಿಗೆ ರೈಲನ್ನೇರಿದ್ದ ಯುವತಿಯದ್ದು ಎಂಬುದು ಅರಿವಾಗಲು ನನಗೆ ಹೆಚ್ಚು ಸಮಯ ತಗುಲಲಿಲ್ಲ. ಆಕೆಯನ್ನು ಸಂತೈಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದ ಆಕೆಯ ಸಂಗಾತಿ ನಿರಾಶನಾಗಿ ಕುಳಿತಿದ್ದ.
ಮುಂಜಾನೆ ರೈಲನ್ನೇರಿದಾಗಿನಿಂದಲೂ ಆ ಜೋಡಿ ಎಲ್ಲರ ಗಮನ ಸೆಳೆದಿತ್ತು. ಆಕೆಗೆ ಸುಮಾರು 18ರ ವಯಸ್ಸಿರಬಹುದು. ತಕ್ಕ ಮಟ್ಟಿಗೆ ಚೆಲುವೆಯೆಂದೇ ಹೇಳಬಹುದು. ಇನ್ನು, ಗಟ್ಟಿಮುಟ್ಟಾಗಿದ್ದ ಆಕೆಯ ಜೊತೆಗಾರನದು 25ರ ಆಸುಪಾಸು. ಬೆಳಗ್ಗಿನಿಂದ ಬೋಗಿಯೋಳಗೆ ಸ್ವಚ್ಛಂದ ಹಕ್ಕಿಯಂತೆ ಹಾರಾಡುತ್ತಿದ್ದ ಆ ಜೋಡಿಯನ್ನು ನೋಡಿದರೆ ಅವರಿಬ್ಬರಿಗೂ ಆಗಷ್ಟೇ ಮದುವೆಯಾದಂತಿತ್ತು. ಆದರೆ ಆಕೆಯ ಕತ್ತಿನಲ್ಲಿ ತಾಳಿಯಾಗಲೀ ಬೆರಳಲ್ಲಿ ಕಾಲುಂಗುರವಾಗಲೀ ಗೋಚರಿಸಿರಲಿಲ್ಲ...
ಇಡೀ ಜಗತ್ತೇ ತಮ್ಮದೆಂಬಂತೆ ಮೆರೆಯುತ್ತಿದ್ದ ಅವರಿಬ್ಬರೂ ಈಗ ಈ ರೀತಿ ವಿಷಾದದಲ್ಲಿ ಮುಳುಗಿರುವುದನ್ನು ನೋಡಿದರೆ ಏನೋ ತೊಂದರೆಯಾಗಿರುವುದಂತೂ ನಿಜ ಎಂಬ ಅನುಮಾನ ನನ್ನನ್ನು ಕಾಡದಿರಲಿಲ್ಲ. ಜೊತೆಗೆ ಆಕೆಯ ಅಳುವಿಗೆ ಕಾರಣ ತಿಳಿದುಕೊಳ್ಳಲೇ ಬೇಕೆಂಬ ಕೆಟ್ಟ ಕುತೂಹಲವೂ ಸೇರಿಕೊಂಡಿತು. ಅಲ್ಲಿಗೆ ನನ್ನ ನಿದ್ದೆಗೆ ತಿಲಾಂಜಲಿ ನೀಡಿ ಮಲಗಿದಲ್ಲಿಂದಲೇ ಮೆತ್ತಗೆ ಹೊರಳಿ ಅವರಿಬ್ಬರನ್ನು ಗಮನಿಸತೊಡಗಿದೆ. ಆಕೆಯ ಬಿಕ್ಕಳಿಕೆ ಮತ್ತದಕ್ಕೆ ಸಂಗಾತಿಯ ಸಾಂತ್ವನ ಮುಂದುವರಿದಿತ್ತು. ಅಳುವಿನ ನಡುವೆಯೇ ಸಾಗಿದ್ದ ಮಾತುಗಳಿಂದಾಗಿ ಇನ್ನೂ ಕಾಲೇಜು ಕಲಿಯುತ್ತಿದ್ದ ಆಕೆ, ಆ ಯುವಕನ ಪ್ರೇಮಪಾಶದಲ್ಲಿ ಸಿಲುಕಿ, ಮನೆಯವರ ವಿರೋಧದ ಕಾರಣದಿಂದಾಗಿ ತನ್ನ ಹೆತ್ತವರನ್ನೂ, ಮನೆಯನ್ನೂ ತೊರೆದು ತನ್ನ ಪ್ರಿಯತಮನೊಡನೆ ಬಂದಿರುವುದು ಖಾತ್ರಿಯಾಯಿತು. ಆದರೆ ಈಗ ಇತ್ತ ಪ್ರೀತಿಸಿದವನನ್ನು ಬಿಡಲಾರದೆ ಅತ್ತ ಹೆತ್ತವರ ಬಂಧವನ್ನೂ ತೊರೆಯಲಾರದೆ ತೊಳಲಾಡುತ್ತಿದ್ದಳು ಆ ಹುಡುಗಿ. ಪ್ರಾಯಶಃ ಅವರಿಬ್ಬರೂ ನನ್ನನ್ನು ಗಮನಿಸದಂತಿರಲಿಲ್ಲ. ಅದೂ ಸರಿ. ಪ್ರೀತಿಗಾಗಿ ಇಡೀ ಜಗತ್ತನ್ನೇ ಧಿಕ್ಕರಿಸಿ ಹೊರಟವರಿಗೆ ನಾನ್ಯಾವ ಲೆಕ್ಕ. ಮತ್ತಷ್ಟು ಕುತೂಹಲದಿಂದ ಆಕೆಯನ್ನು ಗಮನಿಸತೊಡಗಿದೆ, ನಸುಗತ್ತಲಲ್ಲೂ ಕಣ್ಣೀರು ತುಂಬಿ ಹೊಳೆಯುತ್ತಿದ್ದ ಆ ಕಣ್ಣುಗಳಲ್ಲಿ ಆಗಷ್ಟೇ ಉನ್ಮತ್ತ ಪ್ರೀತಿಯ ಅಮಲು ಇಳಿದು ಹೋದ ಲಕ್ಷಣವಿತ್ತು. ಹೆಚ್ಚು ಕಡಿಮೆ ಆ ಯುವಕನದ್ದೂ ಅದೇ ಕಥೆ.
ಈಗ ಅವರಿಬ್ಬರ ಮೊಗದಲ್ಲಿರುವುದು ಪ್ರೀತಿ ತಂದಿತ್ತ ನೋವಿನ ನೆರಳೇ ಅಥವಾ ವಿಷಾದವೇ?... ಉಹ್ಞೂಂ... ಅದು ನನಗೂ ಸ್ಪಷ್ಟವಾಗಲಿಲ್ಲ. ಪ್ರಾಯಶಃ ಅವರಿಬ್ಬರಲ್ಲೂ ಮಾತುಗಳು ಮುಗಿದಿದ್ದವು. ರಾತ್ರಿಯ ನೀರವ ಮೌನವನ್ನು ಭೇದಿಸಿ ತನ್ನ ಗಮ್ಯದತ್ತ ಮುನ್ನಡೆಯುತ್ತಿದ್ದ ರೈಲಿನ ಸದ್ದು ಅವರಿಬ್ಬರ ಮೌನ ರೋದನವನ್ನು ಮೀರಿ ಮಾರ್ದನಿಸುತ್ತಿತ್ತು. ಅಬ್ಬಾ! ಕೆಲವೇ ದಿನಗಳ ಹಿಂದೆ ಪ್ರೀತಿಯ ಮಾತಿಗಾಗಿ, ಪರಸ್ಪರ ಸಾನಿಧ್ಯಕ್ಕಾಗಿ ಹಂಬಲಿಸುತ್ತಿದ್ದಿರಬಹುದಾದ ಆ ಜೋಡಿ ಇಂದು ತಮ್ಮಲ್ಲಿ ಹಂಚಿಕೊಳ್ಳಲು ಏನೂ ಉಳಿದಿಲ್ಲವೇನೋ ಎಂಬಂತೆ ಕುಳಿತುಕೊಂಡಿದ್ದು ನೋಡಿ 'ಪ್ರೀತಿ' ಎಂದರೆ ಇಷ್ಟೇನಾ ಎಂಬ ಸಂದೇಹ ನನ್ನನ್ನು ಕಾಡತೊಡಗಿತು... ಬಹಳ ಹೊತ್ತಾದರೂ ಅವರಿಬ್ಬರು ಮತ್ತೆ ಮಾತನಾಡುವ ಪ್ರಯತ್ನ ಮಾಡಲಿಲ್ಲ. ಪ್ರಾಯಶಃ ನನ್ನನ್ನು ಕಾಡುತ್ತಿರುವ 'ಪ್ರಶ್ನೆ'ಯೇ ಅವರನ್ನೂ ಆವರಿಸಿರುವಂತೆ ಕಂಡುಬಂತು. ಅವರನ್ನು ಅವರ ಪಾಡಿಗೆ ಬಿಟ್ಟು ನಾನು ನಿಧಾನವಾಗಿ ಮಗ್ಗುಲು ಬದಲಾಯಿಸಿ ನಿದ್ರಿಸುವ ಪ್ರಯತ್ನ ಮಾಡಿದೆ. ಆದರೆ ಗೊಂದಲವೇ ತುಂಬಿದ್ದ ಕಣ್ಣಿಗೆ ನಿದ್ದೆಯ ಸುಖವಾದರೂ ಎಲ್ಲಿಂದ ಬರಬೇಕು...
ಮುಂದೇನು..?
ತಮ್ಮ ಪ್ರೀತಿಯನ್ನು ಮನೆಯವರು ಒಪ್ಪಲಿಲ್ಲ ಎಂದಾಕ್ಷಣ ಮನೆಯಿಂದ, ಹೆತ್ತವರಿಂದ ದೂರಾಗುವ, ಇಲ್ಲವೇ ಆತ್ಮಹತ್ಯೆಯಂತಹ ಪರಮ ಮೂರ್ಖತನದ ಕಾರ್ಯಕ್ಕೆ ಕೈಹಾಕುವ ಇವರಂತಹ 'ಪ್ರೇಮಿ'ಗಳು 'ಮುಂದೇನು?' ಎಂಬ ಪ್ರಶ್ನೆಗೆ ಉತ್ತರ ಹುಡುಕೋ ಪ್ರಯತ್ನ ಮಾಡಿದರೆ ಪ್ರಾಯಶಃ ಈ ರೀತಿ ಕಣ್ಣೀರು ಹಾಕಬೇಕಾದ ಪ್ರಸಂಗ ಬರುತ್ತಿರಲಿಲ್ಲವೇನೋ? ಎಂಬ ಅನಿಸಿಕೆ ಮಿಂಚಿ ಮರೆಯಾಯ್ತು. ಯೌವನದ ಹುಚ್ಚು ಆವೇಶಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಲ್ಲ. ಆದರೆ ಆ ಆವೇಗ ಕಡಿಮೆಯಾದ ಮೇಲಷ್ಟೇ ತಾರುಣ್ಯದ ಆಕಾಂಕ್ಷೆಯಿಂದ ಉದ್ಭವವಾಗುವ ಒಂದು ಕ್ಷಣದ 'ಹುಚ್ಚು ಪ್ರೀತಿ'ಗಾಗಿ ತಾವು ಕಳೆದುಕೊಂಡಿರುವ ನಿಜವಾದ 'ಪ್ರೀತಿ'ಯ ಅರಿವಾಗುವುದು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ... ಮತ್ತೆ ಮನೆ, ಅಮ್ಮ, ಪಪ್ಪ, ಊರಿನ ನೆನಪು ತೀವ್ರವಾಗಿ ಕಾಡಲಾರಂಭಿಸಿತು. ಹೆತ್ತವರ ವಾತ್ಸಲ್ಯದ ಅನುಭೂತಿ ನೆನೆಸಿಕೊಂಡಾಕ್ಷಣ ಮನ ರೋಮಾಂಚನ ಗೊಂಡಿತು. ಈ ಮಧ್ಯೆ ಬಳಲಿದ್ದ ದೇಹವನ್ನು ನಿದ್ರಾದೇವಿ ಅದೆಷ್ಟು ಹೊತ್ತಿಗೆ ತನ್ನ ಮಡಿಲಿಗೆಳೆದುಕೊಂಡಳೋ ಅರಿವಾಗಲೇ ಇಲ್ಲ.
***
'ಚಾಯ್, ಬೋಲಿಯೇ... ಚಾಯ್... ಚಾಯ್...' ಎಂಬ ಗದ್ದಲ ಮತ್ತೊಮ್ಮೆ ಗಾಢ ನಿದ್ದೆಯಿಂದ ನನ್ನನ್ನು ಬಡಿದೆಬ್ಬಿಸಿತು. ಕಣ್ಣುಜ್ಜಿಕೊಂಡು ವಾಚ್ ನೋಡಿಕೊಂಡರೆ 8 ಗಂಟೆ ಆಗಿತ್ತು. ಅಬ್ಬಾ! ರಾತ್ರಿ ಯೋಚನೆಗಳಲ್ಲೇ ಕಳೆದುಹೋಗಿದ್ದ ನಾನು ತುಂಬಾ ಹೊತ್ತು ಮಲಗಿಬಿಟ್ಟಿದ್ದೆ. ಬರ್ತ್‌ನಿಂದ ಕೆಳಗಿಳಿದು ಇನ್ನೂ ಓಡುತ್ತಲೇ ಇದ್ದ ರೈಲಿನ ಕಿಟಕಿಯಿಂದ ಹೊರಗಿಣುಕಿ ನೋಡಿದೆ.
ಸುಳಿಯುತ್ತಿದ್ದ ತಣ್ಣನೆಯ ಗಾಳಿ, ಸಾಲು ಸಾಲು ತೆಂಗು, ಮಣ್ಣಿನ ಕಂಪು ಇನ್ನು ಸ್ವಲ್ಪವೇ ಸಮಯದಲ್ಲಿ ನಾನು ನಮ್ಮೂರಲ್ಲಿರುತ್ತೇನೆ ಎಂಬುದನ್ನು ಸಾರಿ ಹೇಳುತ್ತಿತ್ತು. ಮನೆ ಸೇರುತ್ತೇನೆಂಬ ಸಂತಸ, ಅಮ್ಮನ ಮಡಿಲು ಸೇರುವ ಆಹ್ಲಾದ ಇವೆಲ್ಲ ಭಾವಗಳು ಸೇರಿಕೊಂಡು ಖುಷಿಯಿಂದ ಕುಣಿಯಬೇಕೆಂದುಕೊಂಡರೂ ಆ ಬೋಗಿಯಲ್ಲಿ ಇನ್ನೂ ಕೆಲವು ಸಹಪ್ರಯಾಣಿಕರಿದ್ದುದರಿಂದ ಆ ಆಸೆಯನ್ನು ಅಲ್ಲೇ ಹತ್ತಿಕ್ಕಿಕೊಂಡೆ. ಈ ನಡುವೆ ರಾತ್ರಿಯ ಘಟನೆಗಳು ಮತ್ತೆ ನೆನಪಾದವು...
ಅರೆ! ಆ ಜೋಡಿ ಎಲ್ಲಿ? ಅವರಿದ್ದ ಬರ್ತ್ ಖಾಲಿಯಾಗಿತ್ತು. ಪ್ರಾಯಶಃ ನಾನು ನಿದ್ದೆಯಲ್ಲಿದ್ದಾಗ, ಅವರಿಬ್ಬರು ಇಳಿದು ಹೋಗಿರಬೇಕು... ಅಥವಾ ಇನ್ನೇನಾದರೂ...!?
ಛೇ! ಛೇ! ಆ ರೀತಿ ಕೆಟ್ಟದ್ದೇನೂ ಆಗಿರಲಿಕ್ಕಿಲ್ಲ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಕೂ... ಎಂಬ ಸದ್ದಿನೊಂದಿಗೆ ರೈಲು ಇದ್ದಕ್ಕಿದ್ದಂತೆ ತನ್ನ ವೇಗ ತಗ್ಗಿಸಿಕೊಂಡಿತು. ನಾನು ಇಳಿಯಬೇಕಾದ ನಿಲ್ದಾಣ ಬಂತು. ಅಲ್ಲಿಂದ ಮನೆ ತಲುಪಲು ಮತ್ತೆ ಬಸ್ಸು ಹಿಡಿಯಬೇಕಾಗಿದ್ದರಿಂದ ಆತುರಾತುರವಾಗಿ ಲಗೇಜುಗಳನ್ನು ಸರಿಪಡಿಸಿಕೊಂಡು ಇಳಿಯಲು ಸಿದ್ಧನಾದೆ. ಪರಿಚಿತ ನೆಲ, ಭಾಷೆಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆ ಮನದಲ್ಲಿದ್ದ ಎಲ್ಲಾ ಗೊಂದಲಗಳೂ ಕಳೆದುಹೋದವು. ಇರುಳು ಉದ್ಭವಿಸಿದ್ದ ಪ್ರಶ್ನೆ ಮರೆತು ಹೋಯ್ತು... ಆ ಪ್ರೇಮಿಗಳು ಏನಾದರು ಎಂಬ ಕುತೂಹಲ ಕೂಡಾ ಸತ್ತುಹೊಯ್ತು. ಅಂತಿಮವಾಗಿ ಅಲ್ಲಿ ಉಳಿದದ್ದು ಮನೆ ಸೇರುವ ತವಕ ಮಾತ್ರ. ಎಲ್ಲವನ್ನೂ ಮರೆತು ತನ್ನ ಗಮ್ಯದತ್ತ ಮುನ್ನುಗ್ಗುವ ರೈಲಿನಂತೆ ನಾನೂ ಹತ್ತಿರದಲ್ಲಿದ್ದ ಬಸ್ಸು ನಿಲ್ದಾಣದತ್ತ ಹೆಜ್ಜೆ ಹಾಕಿದೆ.

Friday, 22 February 2008

ಹುಚ್ಚು ಕೋಡಿ ಮನಸ್ಸು...

"ಮೊನ್ನೆ ಮೊನ್ನೆಯವರೆಗೆ ಚೆನ್ನಾಗಿದ್ದ ಹುಡುಗ ಈಗ ಒಂಥರಾ ಆಡ್ತಿದ್ದಾನೆ... ನಂಗ್ಯಾಕೋ ಅನುಮಾನ...?"
" ಅರೆ ಯಾಕೋ ಮಾರಾಯ.. ಇದ್ದಕ್ಕಿದ್ದಂಗೆ ನಗ್ತಾ ಇದ್ದೀಯಲ್ಲೋ ಏನಾಯ್ತೋ ನಿಂಗೆ..?"
ಅರೇ ಇದೇನಿದು ಅಂಥ ಯೋಚಿಸ್ತಿದ್ದೀರಾ...? ಮತ್ತೇನಿಲ್ಲ...
ಬಾಂಧವ್ಯವೊಂದರ ಅಲೆಗೆ ಸಿಕ್ಕಿಬಿದ್ದು ಹೊಯ್ದಾಡುವ ಹುಡುಗರ ಬಗ್ಗೆ ಆತನ ಮನೆಯವರು, ಸ್ನೇಹಿತರು ಯಾವ ರೀತಿ ಮಾತನಾಡುತ್ತಾರೆ ಅನ್ನೋದಕ್ಕೆ ಒಂದು ಸಣ್ಣ ಉದಾಹರಣೆ ಕೊಟ್ಟೆ ಅಷ್ಟೆ...
ಒಂದು ಅನುಪಮವಾದ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದು ನಿಜಕ್ಕೂ ಸವಾಲಿನ ಕೆಲಸ. ಅಂಥಾ ಸಂಬಂಧವೊಂದನ್ನ ಕಂಡುಕೊಳ್ಳುವ ತುಡಿತದಲ್ಲಿರುವ ವ್ಯಕ್ತಿಯ ಬಗ್ಗೆ ನಾವಾಡುವ ಸಹಜ ಮಾತುಗಳಿವು... ಆದರೆ ಈ ರೀತಿ ಗೊಂದಲಕ್ಕೆ ಬಿದ್ದವರಿಗೆ ಮಾತ್ರ ಇದ್ಯಾವುದರ ಪರಿವೇ ಇರೋದಿಲ್ಲ.. ಅವರದೇನಿದ್ರೂ 'ಡೋಂಟ್ ಕೇರ್ ಪಾಲಿಸಿ'...
ಆದರೆ ಎಷ್ಟು ದಿನ?
ತಮ್ಮನ್ನು ಕಾಡುವ ಹುಚ್ಚು ಭಾವನೆಗಳ ಅಲೆಯಿಂದ ಹೊರ ಬರುವವರೆಗೆ ಮಾತ್ರ... ನಂತರ ಅವರೂ ನಮ್ಮಂತೆ 'ನಾರ್ಮಲ್' ಮನುಷ್ಯರಾಗುತ್ತಾರೆ... ಆಮೇಲೆ ಅವರ ಜೊತೆ ಕುಳಿತು ಮಾತನಾಡಿ ನೋಡಿ... ಅದ್ಭುತ ಅನುಭವಗಳ ಮೂಟೆಯೇ ಅವರಲ್ಲಿರುತ್ತದೆ... ಏಷ್ಟಾದರೂ ಮೋಹ ಕಲಿಸುವ ಪಾಠ ನಿಜಕ್ಕೂ ಅನನ್ಯ...
ಇಷ್ಟಕ್ಕೂ ಇಲ್ಲಿ ನಾವು ಗಮನಿಸಬೇಕಾದ್ದು, ಮೋಹಕ್ಕೆ ಸಿಲುಕಿದ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎಂಬುದನ್ನಲ್ಲ. ಬದಲಾಗಿ, ಅವರನ್ನು ಆ ರೀತಿ ವರ್ತಿಸುವಂತೆ ಮಾಡುವ ಆ ಭಾವನೆಯ ಸಾಮರ್ಥ್ಯವನ್ನ.
ಒಬ್ಬ ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಏರಿಸುವ ಸಾಮರ್ಥ್ಯ ಈ ಭಾವನೆಗಳ ಹುಚ್ಚುಕೋಡಿಗಿರುತ್ತೆ. ಆದರೆ ನಮ್ಮಲ್ಲಿರುವ ವಿವೇಕ ಈ ಸೆಳೆತದಿಂದ ನಮ್ಮನ್ನು ರಕ್ಷಿಸಿ ಮತ್ತೆ ಮಾಮೂಲು ಮನುಷ್ಯರನ್ನಾಗಿಸಲು ಶಕ್ತವಾಗಿರಬೇಕಷ್ಟೆ. ಇಲ್ಲದೇ ಹೋದಲ್ಲಿ ಅನಾಹುತವಾಗುತ್ತದೆ. ಇಷ್ಟಕ್ಕೂ ಭಗ್ನ ಪ್ರೇಮಿಗಳೆಂದು ಕರೆಸಿಕೊಳ್ಳುವವರು, ಪ್ರೀತಿಗಾಗಿ ಪ್ರಾಣವನ್ನೇ ಬಲಿಕೊಟ್ಟ ಆಧುನಿಕ 'ಅಮರ ಪ್ರೇಮಿ'ಗಳ ಉದಾಹರಣೆಗಳನ್ನು ಗಮನಿಸಿದರೆ ನಿಮಗಿದು ಸ್ಪಷ್ಟವಾಗುತ್ತದೆ.
ಆದರೆ ಎಲ್ಲರೂ ಇದೇ ರೀತಿ ಇರುತ್ತಾರೆಂದಲ್ಲ. ಸರಿಯಾದ ಸಮಯದಲ್ಲಿ ಎಚ್ಚರಿಸಿದರೆ ಈ 'ಭಾವನಾ' ಜೀವಿಗಳು ಖಂಡಿತಾ ಹುಚ್ಚುಕೋಡಿಯಲ್ಲಿ ಕೊಚ್ಚಿ ಹೋಗುವುದಿಲ್ಲ. ಹಿಂತಿರುಗಿ ಬರುತ್ತಾರೆ... ಮತ್ತೆ ವಾಸ್ತವಕ್ಕೆ ತಮ್ಮನ್ನು ತಾವು ತೆರೆದು ಕೊಳ್ಳುತ್ತಾರೆ... ಇದಕ್ಕಾಗಿ ಅವರನ್ನು ಎಚ್ಚರಿಸುವುದು ಮುಖ್ಯ..
ಎಷ್ಟಾದರೂ ಈ 'ಮೋಹ'ದ ಮೋಡಿ ಎನ್ನುವುದು ತೀರಾ ಅನನ್ಯ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಈ ಸುಳಿಗೆ ಸಿಲುಕಿ ಅದರ ಸವಿಯನ್ನು, ಮಾಧುರ್ಯವನ್ನು ಅನುಭವಿಸಿಯೇ ಇರುತ್ತಾರೆ. ಈಗ ಅವುಗಳನ್ನೆಲ್ಲಾ ನೆನಸಿಕೊಂಡರೆ, ನಮ್ಮ ಹುಚ್ಚು ವಾಂಛೆಗಳ ಪೀಕಲಾಟ ಸಣ್ಣಗೆ ನಗು ತರಿಸುತ್ತವೆ. ಆದರೆ ಭಾಂದವ್ಯದ ಅಲೆಗೆ ಸಿಲುಕಿದ್ದ ಕಾಲದಲ್ಲಿ ಇವೇ ಪೀಕಲಾಟಗಳು ನಮಗೆ 'ಅಮರ ಪ್ರೇಮಿ'ಗಳ ಹೆಗ್ಗುರುತುಗಳಾಗಿ ಕಂಡಿರುತ್ತವೆ. ಕಾಲ ನಮ್ಮಲ್ಲಿ ಎಷ್ಟೊಂದು ಬದಲಾವಣೆಗಳನ್ನು ತರುತ್ತವೆ ಅಲ್ಲವೇ...!?

Monday, 11 February 2008

ಚದುರಿದ ಕನಸು...

ಯಾಕೋ ಮನಸ್ಸು ಸ್ಥಿಮಿತದಲ್ಲಿಲ್ಲ. ಭರವಸೆಯ ಒರತೆ ಬತ್ತಿ ಹೋಗಿದೆ. ಅಚಾನಕ್ಕಾಗಿ ಏಕತಾನತೆ ಕಾಡುತ್ತಿದೆ. ವರ್ಷಗಳಿಂದ ಹನಿಹನಿಯಾಗಿ ಕೂಡಿಟ್ಟ ಕನಸುಗಳೆಲ್ಲ ಒಮ್ಮೆಲೇ ಯಾರೋ ಅಪಹರಿಸಿದ ಅನುಭವ.. ಮನಸ್ಸೆಲ್ಲ ಖಾಲಿ ಖಾಲಿ... ಎತ್ತ ನೋಡಿದರೂ ಕತ್ತಲು, ಬರೀ ಗಾಡಾಂಧಕಾರ..

'ಬೆಳಕಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯ, ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದೆಂತು?' ಎಂದು ಎಲ್ಲೋ ಓದಿದ್ದ ವಾಕ್ಯ ಮನಪಟಿಲದ ಮೇಲೊಮ್ಮೆ ಮಿಂಚಿ ಮರೆಯಾಯ್ತು. ಭಾರವಾದ ಹೃದಯ ವಾಸ್ತವವನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದರೆ, ಮನಸ್ಸೆಲ್ಲೋ ಕಳೆದು ಹೋಗಿತ್ತು. ಕಣ್ಣುಗಳಲ್ಲಿ ತುಂಬಿಕೊಂಡ ನೀರು ಹೊರ ಹರಿಯುತ್ತಿರಲಿಲ್ಲ. ಎಷ್ಟಾದರು ಗಂಡಸು ಅಳಬಾರದೆನ್ನುವ ಸಂಪ್ರದಾಯದಲ್ಲಿ ಬೆಳೆದ ಮನಸ್ಸು.. ಕಣ್ಣೀರಾದರು ಏನು ಮಾಡೀತು?

ಗೆಳೆಯ ಸಂದೇಶ್ ಕಳಿಸಿದ್ದ ಎಸ್‌ಎಮ್‌ಎಸ್(SMS) ಮತ್ತೆ ಮತ್ತೆ ನೆನಪಾಗುತ್ತಿದೆ. 'ಕಣ್ಣಿಂದ ಹರಿದು ಕೆನ್ನೆ ಒದ್ದೆ ಮಾಡುವುದು ಕಣ್ಣಿರಲ್ಲ.. ಬದಲಾಗಿ ಹೃದಯದಿಂದ ಜಾರಿ ಮನಸ್ಸನ್ನು ಆರ್ದ್ರಗೊಳಿಸುವುದೇ ನಿಜವಾದ ಕಣ್ಣೀರು' ಅಬ್ಬಾ ಎಂಥಾ ಸುಂದರ ಕಲ್ಪನೆ. ನೋವಿನಲ್ಲೂ ಸುಖ ಕೊಡುವ ಸಾಲುಗಳಿವು.. ಘಾಸಿಗೊಂಡ ಹೃದಯಕ್ಕೆ ಸಾಂತ್ವನ ನೀಡುವ ಇಂತಹ ಅರ್ಥಭರಿತ ಸಾಲುಗಳು ನಿಜಕ್ಕೂ ಅದ್ಭುತ.

'ಸತ್ಯ ಯಾವತ್ತಿಗೂ ಕಹಿ' ಎಂಬುದನ್ನು ನಾನು ನಂಬಿರಲಿಲ್ಲ. ಅದರೆ ಹೃದಯವನ್ನೇ ಹಿಂಡಿ, ವಾಸ್ತವ ನಗುತ್ತಿರುವಾಗ ನಂಬಿಕೆ ಬದಲಾಗಲೇಬೇಕಿದೆ... ಇಂದು ನನ್ನೆಲ್ಲಾ ಕನಸುಗಳು ಮತ್ತೆಂದೂ ಬಾರದಷ್ಟು ದೂರ ಹೊರಟು ಹೋಗಿವೆ. ಭರವಸೆ, ಆಸೆ, ಆಕಾಂಕ್ಷೆಗಳ ಮೇಲೆ ಕಟ್ಟಿದ್ದ ಪ್ರೀತಿಯ ಅರಮನೆ, ವಾಸ್ತವದ ಬರಸಿಡಿಲಿಗೆ ಬಲಿಯಾಗಿ ಕಣ್ಣೆದುರೇ ಉರುಳಿ ಹೋಗುತ್ತಿದೆ. ಅಸಹಾಯಕತೆಯಿಂದ ಮನಸ್ಸು ರೋದಿಸುತ್ತಿದೆ...

ಈಗ ಉಳಿದಿರುವುದೆಲ್ಲ ಭಗ್ನಾವಷೇಷ ಮಾತ್ರ...ನಂಬಿಕೆಯ ಚೂರು, ಪ್ರೀತಿಯ ಬೂದಿಯ ಮಧ್ಯೆ ಅಳಿಯದೆ ಉಳಿದ ಕನಸುಗಳನ್ನು ಹೆಕ್ಕಿ ತೆಗೆಯುವ ನನ್ನ ವ್ಯರ್ಥ ಪ್ರಯತ್ನ ಕಂಡು ವಿಧಿ ನಕ್ಕಂತಾಯಿತು. ಜೀವನ ಪೂರ್ತಿ ನನ್ನ ಜೊತೆಗಿರಬೇಕೆಂದು ಕಟ್ಟಿದ್ದ ಕನಸು ಇಂದು ಇನ್ಯಾರದೊ ಪಾಲಾಗಿದೆ.. ನನ್ನ ನಿರೀಕ್ಷೆಗೆ ಬೆಂಗಾವಲಾಗಬೇಕಿದ್ದ ಭರವಸೆ ಸೋತು ನೆಲಕಚ್ಚಿದೆ...

ನೋವಿಗೆ ನಗುವಿನ ಮುಖವಾಡ ಧರಿಸಿಯಾದರು ನಾನು ಮತ್ತೆ ಜೀವನ ಯಾತ್ರೆ ಆರಂಭಿಸಲೇಬೇಕಿದೆ. ಆದರೆ ಅದು ಮತ್ತೆ ಹೊಸ ಕನಸನ್ನು ಕಟ್ಟಿ ಬೆಳೆಸುವುದಕಾಗಲ್ಲ ಬದಲಾಗಿ ಕಳೆದುಕೊಂಡ ಕನಸಿನ ನೆನಪನ್ನು ಸದಾ ಹಸಿರಾಗಿರಿಸುವುದಕ್ಕಾಗಿ...... ಆ ನೆನಪಲ್ಲೇ ಉಳಿದ ಉಸಿರನ್ನು ಕಾಪಾಡುವುದಕ್ಕಾಗಿ.... ನಾನು ಬದುಕಲೇಬೇಕಾಗಿದೆ... ಪ್ರೀತಿಯ ನೆನಪಿಪಾಗಿ...

Monday, 19 November 2007

"ಮೌನ ಮಾತನಾಡುವುದಿಲ್ಲ..."

"ನಿನ್ನ ಮೌನವನ್ನು ಅರ್ಥಮಾಡಿಕೊಳ್ಳದವರು ನಿನ್ನ ಮಾತುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ.."
ಗೆಳೆಯನೊಬ್ಬ ಕಳುಹಿಸಿದ ಈ ಎಸ್ಸೆಮ್ಮೆಸ್ ನ್ನು ಮತ್ತೆ ಮತ್ತೆ ಓದಿಕೊಂಡೆ...
ಮನದಲ್ಲೇನೋ ಸಂಶಯ.! ಈ ಮಾತು ನಿಜವೇ..?
ಹಾಗಾದರೆ ಎಲ್ಲರಿಗೂ ಮೌನದ ಭಾಷೆ ಅರ್ಥವಾಗುತ್ತದೆಯೇ?
ಇಲ್ಲ... ಖಂಡಿತಾ ಇಲ್ಲ...ಯೋಚಿಸಿದಷ್ಟೂ ಮನಸ್ಸು ಗೊಂದಲದ ಗೂಡಾಗುತ್ತಿದೆ.. ಉತ್ತರ ಮಾತ್ರ ಸಿಗುತ್ತಿಲ್ಲ..


ನಗೇ ಅರಿವಿಲ್ಲದಂತೆ ಮನಸ್ಸು ಮತ್ತೆ ಅವಳ ನೆನಪನ್ನು ಕೆದಕಲಾರಂಬಿಸಿತು. ನನ್ನೆಲ್ಲಾ ಮಾತನ್ನು ಮೌನವಾಗಿಸಿ ಕೊನೆಗೆ ಆ ಮೌನದ ನೆನಪೊಂದನ್ನೇ ನನ್ನ ಪಾಲಿಗೆ ಉಳಿಸಿ ಹೋದವಳವಳು. ಅವಳ ನಗುವಿನ ಸುಂದರ ಸ್ಮೃತಿ ಮನದಲ್ಲಿ ಮೂಡುತ್ತಿದ್ದಂತೆಯೇ, ಇಷ್ಟು ವರ್ಷಗಳಿಂದ ಹೃದಯದಲ್ಲಿ ಉಳಿಸಿಕೊಂಡಿದ್ದ ಮಾತುಗಳೆಲ್ಲವೂ ಮೌನದ ಪೊರೆಯನ್ನು ಭೇದಿಸಿ ನನ್ನನ್ನು ನೋವಿನ ಮಡುವಿನಲ್ಲಿ ಮುಳುಗಿಸಿದಂತಾಯ್ತು.. ಹೇಳಲಾಗದ ಅವ್ಯಕ್ತ ಯಾತನೆ..
ಅವಳ ನೆನಪೆಂದರೆ ಹಾಗೇನೆ.. ಕೇವಲ ನೋವು ಮಾತ್ರ ತುಂಬಿದ್ದರೂ ಕೂಡಾ ಅದು ಮಧುರ...ಅಬ್ಬಾ!ಎಷ್ಟೊಂದು ಮಾತುಗಳಿದ್ದವು ನನ್ನಲ್ಲಿ.. ಅವಳು ನಕ್ಕಾಗ "ಮುದ್ದಾಗಿ ಕಾಣುತ್ತಿ" ಅನ್ನಬೇಕಿತ್ತು. ಅತ್ತಾಗ "ನಾನಿದ್ದೇನೆ ಅಳಬೇಡ" ಎಂದು ಹೇಳಬೇಕಿತ್ತು. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ನನ್ನನ್ನು ಗೋಳು ಹೊಯ್ದುಕೊಳ್ಳುವಾಗ "ಸದಾ ಹೀಗೆ ನನ್ನ ಜೊತೆಗಿರು" ಅನ್ನಬೇಕಿತ್ತು.. ಆದರೆ ಈ ಯಾವ ಮಾತುಗಳೂ ನನ್ನ ತುಟಿಯನ್ನು ದಾಟಲೇ ಇಲ್ಲ.. ಅವಳ ಮುಗ್ಧ ಸೌಂದರ್ಯದೆದುರು ನನ್ನ ಮಾತುಗಳಿಗೆ ಧ್ವನಿಯಾಗುವ ತಾಕತ್ತು ಬರಲೇ ಇಲ್ಲ.. ಅದು ಮೌನವಾಗಿಯೇ ಎದೆಗೂಡು ಸೇರಿಕೊಂಡುಬಿಟ್ಟಿತ್ತು...

ಪ್ರತೀ ಹಂತದಲ್ಲೂ ಅವಳೆದುರು ಮಾತನಾಡಲಾಗದೆ ಸೋತು, ಅವಳನ್ನೂ ಸಂಪೂರ್ಣವಾಗಿ ಕಳೆದುಕೊಂಡು , ಕೇವಲ ನೆನಪುಗಳಲ್ಲೇ ಅವಳೊಂದಿಗಿದ್ದು ಬಿಡುವ ಹುಂಬತನಕ್ಕೆ ಈಗಾಗಲೇ ಒಗ್ಗಿಕೊಂಡಿರುವ ನನಗೆ ಅವಳ ನೆನಪು ಕೆದಕಿದ ಗೆಳೆಯನ ಎಸ್ಸೆಮ್ಮೆಸ್ ಮೇಲೆ ಅಗಾಧ ಸಿಟ್ಟು ಬಂದುಬಿಟ್ಟಿತ್ತು. ತಕ್ಷಣ ಅದನ್ನು ಡಿಲೀಟ್ ಮಾಡಿದೆ. ಮನಸ್ಸೇಕೋ ನಿರಾಳವೆನಿಸಿತು. ಈಗ ಮೊಬೈಲ್‌ನ ಇನ್‌ಬಾಕ್ಸ್‌ನಂತೆ ನನ್ನ ಮನಸ್ಸೂ ಖಾಲಿ ಖಾಲಿ.. ಆದರೆ ಇದು ಕ್ಷಣಿಕ.. ಮತ್ತೆ ಇನ್ನೊಂದು ಎಸ್ಸೆಮ್ಮೆಸ್ ಬಂದು ಅವಳ ನೆನಪನ್ನು ಕದಡುವವರೆಗೆ ಮಾತ್ರ.. ನಂತರ ಮತ್ತದೇ ಗೊಂದಲ... ನೋವು.. ಮಧುರ ಯಾತನೆ...

Sunday, 18 November 2007

"ಐ ಲವ್ ಯೂ"- ಮೊದಲ ಮಾತೇ...ಕೊನೆಯ ಮಾತೇ...?

ಮಹಿಳೆಯರು ಕೇಳಲು ಅತ್ಯಂತ ಇಷ್ಟಪಡುವ ಮೂರು ಶಬ್ದಗಳು ಯಾವುವು?
ಅರೆ.. ಯಾವುದಪ್ಪಾ ಅದು ಎಂದು ಯೋಚಿಸುತ್ತಿದ್ದೀರಾ... ಸ್ವಲ್ಪ ಪ್ರಯತ್ನಪಡಿ...
ಹ್ಞಾಂ !...ಅದೇ...
ನಿಮ್ಮ ಉತ್ತರ ಐ..... ಲವ್...... ಯೂ.... ಎಂದಾಗಿದ್ದಲ್ಲಿ ನೀವು ಸರಿಯಾಗಿಯೆ ಊಹಿಸಿದ್ದೀರಿ ಬಿಡಿ...

ಸಾಮಾನ್ಯವಾಗಿ, ನಾವೆಲ್ಲಾ ತಿಳಿದುಕೊಂಡಿರುವಂತೆ ಎಲ್ಲಾ ಮಹಿಳೆಯರೂ ತಮಗೊಪ್ಪುವ 'ರೋಮ್ಯಾಂಟಿಕ್' ಪುರುಷರಿಂದ 'ಐ ಲವ್ ಯೂ' ಎಂಬ ಅಮೂಲ್ಯ ಶಬ್ಧಗಳನ್ನು ಕೇಳಲು ಇಚ್ಚಿಸುತ್ತಾರೆ. ಸರಿ ತಾನೆ?

ಆದರೆ ಸ್ನೇಹಿತರೆ, ಈ ಬಾವನೆ ತಪ್ಪು. ಒಂದು ವೇಳೆ ನೀವು ಹಾಗಂದುಕೊಂಡಿದ್ದರೆ ಅದು ಖಂಡಿತವಾಗಿಯೂ ತಪ್ಪು...

ಅರೆ... ಇವನ್ಯಾವನಪ್ಪ... ತಲೆ ಕೆರ್ಕೊಂಡು ನಮ್ ಮುಂದೆ ಈ ರೀತಿ ಕುಯ್ಯುತ್ತಿದ್ದಾನಲ್ಲಾ ಅನ್ತೀರಾ... ಹಾಗಾದ್ರೆ ತಡೀರಿ, ಮುಂದೆ ಓದಿ...

ಒಬ್ಬರನ್ನು 'ಪ್ರೀತಿ'ಸುವುದು ಎಂಬ ದೃಷ್ಟಿಕೋನವೇ ಮಾನವನ ಕಲ್ಪನೆಗೆ ನಿಲುಕದ್ದು. ಹಾಗಿರುವಾಗ ಅದನ್ನು ಹೇಳಲು ಆತುರಪಡುವುದು ಹೇಗೆ ತಾನೆ ಸಮಂಜಸವಾದೀತು...? ಈ ಕುರಿತು ಯಾವತ್ತಾದರೂ ಯೋಚಿಸಿದ್ದೀರಾ?

''ಐ ಲವ್ ಯೂ'' ಎಂಬ ಸಮ್ಮೋಹಕ ಶಬ್ದ ಎಷ್ಟು ಬೇಗ ನಿಮ್ಮ ತುಟಿ ದಾಟಿ ಹೊರ ಬರುತ್ತದೋ ಅಷ್ಟು ಬೇಗ ನೀವು ಕಳೆದುಕೊಳ್ಳಲು ಸಿದ್ಧವಾಗಬೇಕಾಗುತ್ತದೆ. ನಿಮ್ಮ ಮೇಲೆ ಆಕೆಗಿರುವ ಆಕರ್ಷಣೆ ಅಷ್ಟು ಬೇಗ ಚದುರಿಹೋಗುತ್ತದೆ.

ಸ್ನೇಹಿತರೆ, ಗಮನವಿಟ್ಟು ಕೇಳಿ.-ಸೆಕ್ಸ್ ಎನ್ನುವುದು ಗಂಡಸರ ಪಾಲಿಗೆ ಒಂದು ಪ್ರಾಥಮಿಕ ದೈಹಿಕ ಅಗತ್ಯವಾದರೆ, ಮಹಿಳೆಯರಿಗೆ ಅದು ಭಾವನಾತ್ಮಕ ಅವಶ್ಯಕತೆ. ಇದನ್ನ ಯಾವತ್ತೂ ಮರೆಯಬೇಡಿ..!

ಯಾವಾಗ ಒಬ್ಬ ಪುರುಷ ಮಹಿಳೆಯೆಡೆಗೆ ಆಕರ್ಷಿತನಾಗುತ್ತಾನೋ ಅಂದಿನಿಂದಲೆ ಈ ಮೂರು ಸಮ್ಮೋಹಕ ಶಬ್ದಗಳನ್ನು ಆಕೆಯ ಕಿವಿಯಲ್ಲಿ ಉಸುರಲು ತವಕಿಸಲಾರಂಭಿಸುತ್ತಾನೆ. ಇದರಿಂದ ತಾನು ಆಕೆಯ ಪ್ರೀತಿಯನ್ನು ಗಳಿಸುತ್ತೇನೆಂಬ ಹುಚ್ಚು ಭ್ರಮೆಯಲ್ಲಿ ಬೀಳುತ್ತಾನೆ. ಆದರೆ ಒಂದು ಬಾರಿ ಆತ ಅವಸರಪಟ್ಟು ಈ ಶಬ್ದಗಳನ್ನು ಹೇಳಿದರೆ.....,
ಉ ಹುಂ.... ಅಲ್ಲಿ ನಡೆಯುವುದೇ ಬೇರೆ. ಅದು ಆತ ಅಂದುಕೊಂಡದ್ದಕ್ಕೆ ವಿರುದ್ಧವಾಗಿರುತ್ತದೆಂಬುದೇ ದುರಂತ...

ಸಹಜವಾಗಿಯೆ ಮಹಿಳೆಯರು ತಮ್ಮ ನಿರ್ಧಾರಗಳನ್ನು ವಿಸ್ಮಯಕಾರಿ ಅದೃಷ್ಟದಾಟಕ್ಕೆ ಬಿಟ್ಟುಬಿಡುತ್ತಾರೆ. ಒಬ್ಬ ಮಹಿಳೆಗೆ ನಿಜವಾಗಿಯೂ ಬೇಕಾಗಿರುವುದು ನೀವು ಬಾಯಿಬಿಟ್ಟು ಹೇಳುವ 'ಐ ಲವ್ ಯೂ' ಎಂಬ ಮೂರು ಸಮ್ಮೋಹಕ ಶಬ್ದಗಳಲ್ಲ. ಬದಲಾಗಿ ನೀವು ಆಕೆಯನ್ನು ಇಷ್ಟಪಡುತ್ತಿದ್ದೀರಿ ಎಂಬ ಸಣ್ಣ ಸುಳಿವು ಮಾತ್ರ.. ಆಕೆಯ ಭಾವನಾತ್ಮಕ ಅವಶ್ಯಕತೆಯನ್ನು ಪೂರೈಸಲು ಇವಿಷ್ಟೇ ಸಾಕು. ಆದರೆ ಈ ಸುಳಿವನ್ನು ನಿಮ್ಮ ವರ್ತನೆಯಿಂದ, ಭಾವನೆಗಳಿಂದ ವ್ಯಕ್ತಪಡಿಸಬೇಕೆ ವಿನಃ ಮಾತುಗಳಿಂದಲ್ಲ...

ಹಾಗಾದರೆ ನೀವು ಮಾಡಬೇಕಾಗಿರುವುದೇನು?

ಇದಪ್ಪಾ 'ಮಿಲಿಯನ್ ಡಾಲರ್' ಪ್ರಶ್ನೆ... ನೀವೇನು ಮಾಡಬಹುದು...?
ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಸಾಕು...ನೀವು ಆಕೆಯ ಆಕರ್ಷಣೆಯ ನಿಯಂತ್ರಣದಲ್ಲಿದ್ದೀರಿ, ನಿಮ್ಮನ್ನು ಆಕೆ ಯಾವಾಗ ಬೇಕಾದರೂ ಹೊಂದಬಹುದೆಂಬ ಸತ್ಯ ಆಕೆಯ ಮನದಲ್ಲಿ ಮೂಡಬಾರದು. ಒಂದು ವೇಳೆ ಹಾಗಾದಲ್ಲಿ ನೀವು ದುರಂತವೊಂದಕ್ಕೆ ದಾರಿಮಾಡಿಕೊಟ್ಟಿರೆಂದೇ ಅರ್ಥ. ಈ ಸತ್ಯ ಆಕೆಗೆ ತಿಳಿದ ತಕ್ಷಣ ನೀವು ತನ್ನನ್ನು ಪ್ರೀತಿಸುತ್ತಿದ್ದೀರೊ, ಇಲ್ಲವೋ ಎಂಬ ಆಕೆಯ ಕುತೂಹಲ ಮಾಯವಾಗುತ್ತದೆ. ಆಕೆಯ ನಿರೀಕ್ಷೆಗೆ, ಕಾಯುವಿಕೆಗಳಿಗ್ಯಾವುದಕ್ಕೂ ಅರ್ಥವಿರುವುದಿಲ್ಲ. ಇನ್ನು ಸಂಭ್ರಮದ ಘಳಿಗೆಗಳಂತೂ ತೀರಾ ಸಪ್ಪೆಯಾಗಿಬಿಡುತ್ತವೆ. ಈ ಅಂಶಗಳೇ ಇಬ್ಬರನ್ನು ಒಂದೆಡೆ ಹಿಡಿದಿಡುವುದು. ಇವೆ ಇಲ್ಲಾ ಎಂದರೆ? ಅಲ್ಲಿಗೆ ಮುಗಿಯಿತು ನಿಮ್ಮ ಸಂಬಂಧ. ಹೇಳಿ ಕೇಳಿ ಒಂದು ಬಾಂಧವ್ಯವೆಂದ ಮೇಲೆ ಅಲ್ಲಿ ಕೊಂಚವಾದರೂ ಆಕರ್ಷಣೆಯಿರದಿದ್ದರೆ ಹೇಗೆ? ನೀವೆ ಹೇಳಿ?

ಮಧುರ ಬಾಂಧವ್ಯದ ಆರಂಭದ ಹಂತ...

ನಾನು ಆಕೆಯನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೇನೆ.. ಮುಂದೇನು? ಪ್ರಾಯಶಃ ನೀವು ನಿಮ್ಮನ್ನೇ ಎಷ್ಟೋ ಬಾರಿ ಈ ಪ್ರಶ್ನೆ ಕೇಳಿಕೊಂಡಿರಬಹುದು. ಅದಕ್ಕೊಂದು ಸರಳವಾದ ಆದರೆ ಅಷ್ಟೇ ಪರಿಣಾಮಕಾರಿಯಾದ ಪರಿಹಾರವಿದೆ. ನಿಮ್ಮ ಪ್ರೀತಿಯನ್ನ ಆಕೆಗೆ ಹೇಳಬೇಡಿ. ಮಾತು ತುಂಬಾ ಅಗ್ಗ, ಆದರೆ ನಮ್ಮ ಕಾರ್ಯಗಳು ಹಾಗಲ್ಲ. ಅದಕ್ಕೆ ಅದರದ್ದೇ ಆದ ತೂಕವಿದೆ. ತುಂಬಾ ಕಾಲ ಇನ್ಯಾರದೋ ನೆನಪಿನ ಪುಟಗಳಲ್ಲಿ ನೆಲೆನಿಲ್ಲುವ ತಾಕತ್ತಿದೆ. ಮಾತಿಗೆ ಈ ಶಕ್ತಿಯಿಲ್ಲ. ನಿಮ್ಮ ಪ್ರೀತಿಯನ್ನ ಆಕೆಗೆ ಹೇಳಬೇಡಿ. ಬದಲಿಗೆ ಆಕೆಗೆ ನಿಮ್ಮ ಪ್ರೀತಿಯನ್ನ ಅನುಭವಿಸಲು ಬಿಡಿ. ನಿಮ್ಮ ಕಾರ್ಯಗಳ ಮೂಲಕ, ವರ್ತನೆಗಳ ಮೂಲಕ ಅದನ್ನಾಕೆಗೆ ಮನವರಿಕೆ ಮಾಡಿಕೊಡಿ. ನೀವಾಕೆಗೆ ಸಾಕಷ್ಟು ಗಮನಕೊಡುತ್ತೀರಿ ಎಂಬುದನ್ನ ಮನದಟ್ಟು ಮಾಡಿಸಿ. ನಿಮ್ಮ ಸಾಂಗತ್ಯದ ಸವಿಯನ್ನ ಕ್ಷಣಕ್ಷಣವೂ ಅನುಭವಿಸಲು ಬಿಡಿ. ಜೊತೆಗೆ...ಆಕೆಯಿಲ್ಲದೆ ನೀವು ಬದುಕಬಲ್ಲಿರಿ ಎಂಬ ವಾಸ್ತವನ್ನೂ ತಿಳಿಸಿಕೊಡಿ. ಬಾಂಧವ್ಯವನ್ನು ಯಾವಾಗಲೂ ಜೀವಂತಿಕೆಯಿಂದಿಡಿ. ಇದೇ ಆಕೆಯ ದೃಷ್ಟಿಯಲ್ಲಿ ನಿಮ್ಮನ್ನು ಆಕರ್ಷಕ ವ್ಯಕ್ತಿಯನ್ನಾಗಿಸುವುದು. ಮಹಿಳೆಯರು ಯಾವಾಗಲೂ ಆಕರ್ಷಕ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ. ಕಾರ್ಯಪ್ರವೃತ್ತ ಚಾಣಾಕ್ಷರನ್ನ ಮೆಚ್ಚಿಕೊಳ್ಳುತ್ತಾರೆ. ಅದು ಬಿಟ್ಟು ಭಾವನಾತ್ಮಕವಾಗಿ ದುರ್ಬಲರಾದವರನ್ನಲ್ಲ. ಹೆಂಗರಳು ಹೊಂದಿರುವ ಪರರುಷರನ್ನಂತೂ ಮೊದಲೇ ಅಲ್ಲಾ...
ನೀವು ಯಾರನ್ನಾದರೂ ಇಷ್ಟಪಡುತ್ತೀರಿ ಎಂದರೆ, ಅದನ್ನಾಕೆಗೆ ಹೇಳಲೇ ಬೇಕೆಂದು ಆತುರಪಡುತ್ತಿದ್ದರೆ, ಸ್ವಲ್ಪ ನಿಲ್ಲಿ. ನಿಮ್ಮ ಪ್ರೀತಿ ಆಕೆಗೆ ಅರ್ಥವಾಗುವವರೆಗೆ ಸುಮ್ಮನಿದ್ದುಬಿಡಿ. ಇದು ಮೂರ್ಖತನವೆನಿಸುತ್ತಿದೆಯೆ? ಆದರೆ ಒಂದು ತಿಳಿದುಕೊಳ್ಳಿ. ಬಾಂಧವ್ಯ ಮಧುರವಾಗಿರಬೇಕಾದರೆ ಕಾಯುವಿಕೆ ಅನಿವಾರ್ಯ. ಅಷ್ಟರವರೆಗೆ ಆಕೆ ತನ್ನ ಭಾವನೆಗಳನ್ನ ತನ್ನ ಸ್ನೇಹಿತೆಯರಲ್ಲಿ ಹಂಚಿಕೊಳ್ಳಬೇಕೆ ವಿನಃ ನಿಮ್ಮಲ್ಲಲ್ಲ. ತೀರಾ ಅಷ್ಟರ ಮಟ್ಟಿಗೆ ಆಕೆಯನ್ನ ಕಾಡಿದರೆ ನಿಮ್ಮ ಅರಳುತ್ತಿರುವ ನಿಮ್ಮ ಬಾಂಧವ್ಯಕ್ಕೆ ನೀವೇ ಕೊಳ್ಳಿಯಿಟ್ಟಂತಾದೀತು ಎಚ್ಚರ...

ಆದರೆ ಇಲ್ಲೊಂದು ಸಣ್ಣ ಸಮಸ್ಯೆಯಿದೆ. ಬಹಳಷ್ಟು ಪುರುಷರು ಬಾವನಾತ್ಮಕವಾಗಿ ದುರ್ಬಲರು. ಇದಕ್ಕೆ ವಿರುದ್ಧವಾಗಿ ಮಹಿಳೆಯರು ಸವಾಲುಗಳನ್ನು ಎದುರಿಸುವಂತಹ ಪುರುಷರನ್ನು ಇಷ್ಟಪಡುತ್ತಾರೆಯೆ ಹೊರತು, ನಿನ್ನನ್ನು ಪ್ರೀತಿಸುತ್ತೇನೆ ಎಂದು ಆಕೆಯ ಹಿಂದೆ ಠಾಂ,ಠಾಂ ಹೊಡೆದುಕೊಂಡು ಸುತ್ತುವವರನ್ನಲ್ಲ. ಆದ್ದರಿಂದ ಈ ಕುರಿತು ನಿರ್ಧರಿಸುವ ಮೊದಲು ಕೆಳಗೆ ಹೇಳಿರುವ ಎರಡು ಅಂಶಗಳನ್ನು ಗಮನಿಸಿ...
1) ನೀವು ಆಕೆಯೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿಲ್ಲವೆಂದರೆ, ನೀವಾಕೆಗೆ 'ಐ ಲವ್ ಯೂ' ಹೇಳಲೇಕೂಡದು. (ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ನಡೆಯುವಂತೆ, ನೀವಿಬ್ಬರು ಕೇವಲ ಸ್ನೇಹಿತರಾಗಿದ್ದು, ನೀವೊಬ್ಬರೇ ಏಕಮುಖವಾಗಿ ಆಕೆಯನ್ನು ಪ್ರೀತಿಸುತ್ತಿದ್ದರೆ ಅದನ್ನಾಕೆಗೆ ಹೇಳದಿರುವುದೇ ಒಳಿತು.)
2) ಒಂದು ವೇಳೆ ಆಕೆಯೆ ಮೊದಲು 'ಐ ಲವ್ ಯೂ' ಹೇಳಿದರೆ, ಸುಮ್ಮನೆ 'ನನಗದು ಗೊತ್ತು' ಎಂದು ಬಿಡಿ. ಇದು ನಿಮ್ಮಿಬ್ಬರ ನಡುವಿನ ಬಾಂಧವ್ಯದಲ್ಲಿ ಕುತೂಹಲ, ಆಕರ್ಷಣೆಯನ್ನು ಉಳಿಸಿಕೊಂಡು ಮುಂದೆ ಅನಿಯಮಿತ ಆತ್ಮೀಯತೆಯನ್ನು ಕಟ್ಟಿಕೊಡಲು ನೆರವಾಗುತ್ತದೆ.

'ಪ್ರೀತಿ' ಎಂಬುದು ದಿನಗಳೆದಂತೆ ಸತ್ವಯುತವಾಗಿ ಬೆಳೆಯುವ ಒಂದು ಅನನ್ಯ ಅನುಭೂತಿ. ಅದು ಸಂಬಂಧವೊಂದನ್ನು ಮುಂದುವರಿಸಿಕೊಂಡು ಹೋಗಲು ನಮ್ಮ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಬೇಡುತ್ತದೆ. ಪ್ರೀತಿಯೆಂಬುದು ಕೇವಲ ಒಂದು ರಾತ್ರಿಯಲ್ಲಿ ಅಂಕುರವಾಗುವಂತಹ ಸಸಿಯಲ್ಲ. ಅದು ಎಷ್ಟೋ ವರ್ಷಗಳ ಕಾಯುವಿಕೆ ಫಲ. ಆದ್ದರಿಂದ ಇನ್ನು ಮುಂದೆ ಆಕೆಗೆ ನೀವು-'ನೀನು ನನ್ನನ್ನ ಇಷ್ಟಪಡುತ್ತಿ ಎಂಬುದು ಗೊತ್ತು 'ಎಂದು ಹೇಳುವ ಸನ್ನಿವೇಶ ನಿರ್ಮಿಸಿಕೊಳ್ಳಬೇಕೆ ವಿನಃ, 'ನಾನು ನಿನ್ನನ್ನು ಪ್ರೀತಿಸುತ್ತೇನೆ 'ಎಂಬಂತಹ ಪರಿಸ್ಥಿತಿಯನ್ನಲ್ಲ. ಒಂದು ವೇಳೆ ಇದನ್ನೆಲ್ಲಾ ಮೀರಿ ನೀವು ಆಕೆಗೆ 'ಐ ಲವ್ ಯೂ' ಹೇಳಲೇಬೇಕೆಂದರೆ ಅದಕ್ಕೆ ಸೂಕ್ತ ಸಮಯ, ಒಂದೋ ನಿಮ್ಮಿಬ್ಬರ ಮದುವೆಯ ದಿನ ಅಥವಾ ನಿಮ್ಮಿಬ್ಬರಲ್ಲೊಬ್ಬರ ಜೀವನದ 'ಕೊನೆಯ' ದಿನ...
ಯೋಚಿಸಿ...