Friday 22 February 2008

ಹುಚ್ಚು ಕೋಡಿ ಮನಸ್ಸು...

"ಮೊನ್ನೆ ಮೊನ್ನೆಯವರೆಗೆ ಚೆನ್ನಾಗಿದ್ದ ಹುಡುಗ ಈಗ ಒಂಥರಾ ಆಡ್ತಿದ್ದಾನೆ... ನಂಗ್ಯಾಕೋ ಅನುಮಾನ...?"
" ಅರೆ ಯಾಕೋ ಮಾರಾಯ.. ಇದ್ದಕ್ಕಿದ್ದಂಗೆ ನಗ್ತಾ ಇದ್ದೀಯಲ್ಲೋ ಏನಾಯ್ತೋ ನಿಂಗೆ..?"
ಅರೇ ಇದೇನಿದು ಅಂಥ ಯೋಚಿಸ್ತಿದ್ದೀರಾ...? ಮತ್ತೇನಿಲ್ಲ...
ಬಾಂಧವ್ಯವೊಂದರ ಅಲೆಗೆ ಸಿಕ್ಕಿಬಿದ್ದು ಹೊಯ್ದಾಡುವ ಹುಡುಗರ ಬಗ್ಗೆ ಆತನ ಮನೆಯವರು, ಸ್ನೇಹಿತರು ಯಾವ ರೀತಿ ಮಾತನಾಡುತ್ತಾರೆ ಅನ್ನೋದಕ್ಕೆ ಒಂದು ಸಣ್ಣ ಉದಾಹರಣೆ ಕೊಟ್ಟೆ ಅಷ್ಟೆ...
ಒಂದು ಅನುಪಮವಾದ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದು ನಿಜಕ್ಕೂ ಸವಾಲಿನ ಕೆಲಸ. ಅಂಥಾ ಸಂಬಂಧವೊಂದನ್ನ ಕಂಡುಕೊಳ್ಳುವ ತುಡಿತದಲ್ಲಿರುವ ವ್ಯಕ್ತಿಯ ಬಗ್ಗೆ ನಾವಾಡುವ ಸಹಜ ಮಾತುಗಳಿವು... ಆದರೆ ಈ ರೀತಿ ಗೊಂದಲಕ್ಕೆ ಬಿದ್ದವರಿಗೆ ಮಾತ್ರ ಇದ್ಯಾವುದರ ಪರಿವೇ ಇರೋದಿಲ್ಲ.. ಅವರದೇನಿದ್ರೂ 'ಡೋಂಟ್ ಕೇರ್ ಪಾಲಿಸಿ'...
ಆದರೆ ಎಷ್ಟು ದಿನ?
ತಮ್ಮನ್ನು ಕಾಡುವ ಹುಚ್ಚು ಭಾವನೆಗಳ ಅಲೆಯಿಂದ ಹೊರ ಬರುವವರೆಗೆ ಮಾತ್ರ... ನಂತರ ಅವರೂ ನಮ್ಮಂತೆ 'ನಾರ್ಮಲ್' ಮನುಷ್ಯರಾಗುತ್ತಾರೆ... ಆಮೇಲೆ ಅವರ ಜೊತೆ ಕುಳಿತು ಮಾತನಾಡಿ ನೋಡಿ... ಅದ್ಭುತ ಅನುಭವಗಳ ಮೂಟೆಯೇ ಅವರಲ್ಲಿರುತ್ತದೆ... ಏಷ್ಟಾದರೂ ಮೋಹ ಕಲಿಸುವ ಪಾಠ ನಿಜಕ್ಕೂ ಅನನ್ಯ...
ಇಷ್ಟಕ್ಕೂ ಇಲ್ಲಿ ನಾವು ಗಮನಿಸಬೇಕಾದ್ದು, ಮೋಹಕ್ಕೆ ಸಿಲುಕಿದ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎಂಬುದನ್ನಲ್ಲ. ಬದಲಾಗಿ, ಅವರನ್ನು ಆ ರೀತಿ ವರ್ತಿಸುವಂತೆ ಮಾಡುವ ಆ ಭಾವನೆಯ ಸಾಮರ್ಥ್ಯವನ್ನ.
ಒಬ್ಬ ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಏರಿಸುವ ಸಾಮರ್ಥ್ಯ ಈ ಭಾವನೆಗಳ ಹುಚ್ಚುಕೋಡಿಗಿರುತ್ತೆ. ಆದರೆ ನಮ್ಮಲ್ಲಿರುವ ವಿವೇಕ ಈ ಸೆಳೆತದಿಂದ ನಮ್ಮನ್ನು ರಕ್ಷಿಸಿ ಮತ್ತೆ ಮಾಮೂಲು ಮನುಷ್ಯರನ್ನಾಗಿಸಲು ಶಕ್ತವಾಗಿರಬೇಕಷ್ಟೆ. ಇಲ್ಲದೇ ಹೋದಲ್ಲಿ ಅನಾಹುತವಾಗುತ್ತದೆ. ಇಷ್ಟಕ್ಕೂ ಭಗ್ನ ಪ್ರೇಮಿಗಳೆಂದು ಕರೆಸಿಕೊಳ್ಳುವವರು, ಪ್ರೀತಿಗಾಗಿ ಪ್ರಾಣವನ್ನೇ ಬಲಿಕೊಟ್ಟ ಆಧುನಿಕ 'ಅಮರ ಪ್ರೇಮಿ'ಗಳ ಉದಾಹರಣೆಗಳನ್ನು ಗಮನಿಸಿದರೆ ನಿಮಗಿದು ಸ್ಪಷ್ಟವಾಗುತ್ತದೆ.
ಆದರೆ ಎಲ್ಲರೂ ಇದೇ ರೀತಿ ಇರುತ್ತಾರೆಂದಲ್ಲ. ಸರಿಯಾದ ಸಮಯದಲ್ಲಿ ಎಚ್ಚರಿಸಿದರೆ ಈ 'ಭಾವನಾ' ಜೀವಿಗಳು ಖಂಡಿತಾ ಹುಚ್ಚುಕೋಡಿಯಲ್ಲಿ ಕೊಚ್ಚಿ ಹೋಗುವುದಿಲ್ಲ. ಹಿಂತಿರುಗಿ ಬರುತ್ತಾರೆ... ಮತ್ತೆ ವಾಸ್ತವಕ್ಕೆ ತಮ್ಮನ್ನು ತಾವು ತೆರೆದು ಕೊಳ್ಳುತ್ತಾರೆ... ಇದಕ್ಕಾಗಿ ಅವರನ್ನು ಎಚ್ಚರಿಸುವುದು ಮುಖ್ಯ..
ಎಷ್ಟಾದರೂ ಈ 'ಮೋಹ'ದ ಮೋಡಿ ಎನ್ನುವುದು ತೀರಾ ಅನನ್ಯ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಈ ಸುಳಿಗೆ ಸಿಲುಕಿ ಅದರ ಸವಿಯನ್ನು, ಮಾಧುರ್ಯವನ್ನು ಅನುಭವಿಸಿಯೇ ಇರುತ್ತಾರೆ. ಈಗ ಅವುಗಳನ್ನೆಲ್ಲಾ ನೆನಸಿಕೊಂಡರೆ, ನಮ್ಮ ಹುಚ್ಚು ವಾಂಛೆಗಳ ಪೀಕಲಾಟ ಸಣ್ಣಗೆ ನಗು ತರಿಸುತ್ತವೆ. ಆದರೆ ಭಾಂದವ್ಯದ ಅಲೆಗೆ ಸಿಲುಕಿದ್ದ ಕಾಲದಲ್ಲಿ ಇವೇ ಪೀಕಲಾಟಗಳು ನಮಗೆ 'ಅಮರ ಪ್ರೇಮಿ'ಗಳ ಹೆಗ್ಗುರುತುಗಳಾಗಿ ಕಂಡಿರುತ್ತವೆ. ಕಾಲ ನಮ್ಮಲ್ಲಿ ಎಷ್ಟೊಂದು ಬದಲಾವಣೆಗಳನ್ನು ತರುತ್ತವೆ ಅಲ್ಲವೇ...!?

2 comments:

  1. ಕನಸುಗಳನ್ನು ಕಟ್ಟು ಸಾಗುವುದಿದೆಯಲ್ಲ, ಅದು ಹುಚ್ಚು ಅನ್ನಿಸಿಬಿಡುತ್ತದೆ. ಬಂಡಿ ಅಂದ ತಕ್ಷಣ ದೆಹಲಿಯ ಟಾಂಗಾ,ನಮ್ಮೊರಿನ ಹಳೇ ಬಸ್ಸು ನೆನಪಿಗೆ ಬರುತ್ತಲ್ಲಾ. ಹಾಗೇ ಬದುಕು............ಕನಸು...........ಪ್ರೀತಿ?

    ReplyDelete
  2. ಪ್ರಿಯರೇ,

    ನಮಸ್ಕಾರ. ಹೇಗಿದ್ದೀರಿ?

    ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

    ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

    ಡೇಟು: ೧೬ ಮಾರ್ಚ್ ೨೦೦೮
    ಟೈಮು: ಇಳಿಸಂಜೆ ನಾಲ್ಕು
    ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

    ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

    ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

    ಅಲ್ಲಿ ಸಿಗೋಣ,
    ಇಂತಿ,

    ಸುಶ್ರುತ ದೊಡ್ಡೇರಿ

    ReplyDelete