Friday 22 February 2008

ಹುಚ್ಚು ಕೋಡಿ ಮನಸ್ಸು...

"ಮೊನ್ನೆ ಮೊನ್ನೆಯವರೆಗೆ ಚೆನ್ನಾಗಿದ್ದ ಹುಡುಗ ಈಗ ಒಂಥರಾ ಆಡ್ತಿದ್ದಾನೆ... ನಂಗ್ಯಾಕೋ ಅನುಮಾನ...?"
" ಅರೆ ಯಾಕೋ ಮಾರಾಯ.. ಇದ್ದಕ್ಕಿದ್ದಂಗೆ ನಗ್ತಾ ಇದ್ದೀಯಲ್ಲೋ ಏನಾಯ್ತೋ ನಿಂಗೆ..?"
ಅರೇ ಇದೇನಿದು ಅಂಥ ಯೋಚಿಸ್ತಿದ್ದೀರಾ...? ಮತ್ತೇನಿಲ್ಲ...
ಬಾಂಧವ್ಯವೊಂದರ ಅಲೆಗೆ ಸಿಕ್ಕಿಬಿದ್ದು ಹೊಯ್ದಾಡುವ ಹುಡುಗರ ಬಗ್ಗೆ ಆತನ ಮನೆಯವರು, ಸ್ನೇಹಿತರು ಯಾವ ರೀತಿ ಮಾತನಾಡುತ್ತಾರೆ ಅನ್ನೋದಕ್ಕೆ ಒಂದು ಸಣ್ಣ ಉದಾಹರಣೆ ಕೊಟ್ಟೆ ಅಷ್ಟೆ...
ಒಂದು ಅನುಪಮವಾದ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದು ನಿಜಕ್ಕೂ ಸವಾಲಿನ ಕೆಲಸ. ಅಂಥಾ ಸಂಬಂಧವೊಂದನ್ನ ಕಂಡುಕೊಳ್ಳುವ ತುಡಿತದಲ್ಲಿರುವ ವ್ಯಕ್ತಿಯ ಬಗ್ಗೆ ನಾವಾಡುವ ಸಹಜ ಮಾತುಗಳಿವು... ಆದರೆ ಈ ರೀತಿ ಗೊಂದಲಕ್ಕೆ ಬಿದ್ದವರಿಗೆ ಮಾತ್ರ ಇದ್ಯಾವುದರ ಪರಿವೇ ಇರೋದಿಲ್ಲ.. ಅವರದೇನಿದ್ರೂ 'ಡೋಂಟ್ ಕೇರ್ ಪಾಲಿಸಿ'...
ಆದರೆ ಎಷ್ಟು ದಿನ?
ತಮ್ಮನ್ನು ಕಾಡುವ ಹುಚ್ಚು ಭಾವನೆಗಳ ಅಲೆಯಿಂದ ಹೊರ ಬರುವವರೆಗೆ ಮಾತ್ರ... ನಂತರ ಅವರೂ ನಮ್ಮಂತೆ 'ನಾರ್ಮಲ್' ಮನುಷ್ಯರಾಗುತ್ತಾರೆ... ಆಮೇಲೆ ಅವರ ಜೊತೆ ಕುಳಿತು ಮಾತನಾಡಿ ನೋಡಿ... ಅದ್ಭುತ ಅನುಭವಗಳ ಮೂಟೆಯೇ ಅವರಲ್ಲಿರುತ್ತದೆ... ಏಷ್ಟಾದರೂ ಮೋಹ ಕಲಿಸುವ ಪಾಠ ನಿಜಕ್ಕೂ ಅನನ್ಯ...
ಇಷ್ಟಕ್ಕೂ ಇಲ್ಲಿ ನಾವು ಗಮನಿಸಬೇಕಾದ್ದು, ಮೋಹಕ್ಕೆ ಸಿಲುಕಿದ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎಂಬುದನ್ನಲ್ಲ. ಬದಲಾಗಿ, ಅವರನ್ನು ಆ ರೀತಿ ವರ್ತಿಸುವಂತೆ ಮಾಡುವ ಆ ಭಾವನೆಯ ಸಾಮರ್ಥ್ಯವನ್ನ.
ಒಬ್ಬ ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಏರಿಸುವ ಸಾಮರ್ಥ್ಯ ಈ ಭಾವನೆಗಳ ಹುಚ್ಚುಕೋಡಿಗಿರುತ್ತೆ. ಆದರೆ ನಮ್ಮಲ್ಲಿರುವ ವಿವೇಕ ಈ ಸೆಳೆತದಿಂದ ನಮ್ಮನ್ನು ರಕ್ಷಿಸಿ ಮತ್ತೆ ಮಾಮೂಲು ಮನುಷ್ಯರನ್ನಾಗಿಸಲು ಶಕ್ತವಾಗಿರಬೇಕಷ್ಟೆ. ಇಲ್ಲದೇ ಹೋದಲ್ಲಿ ಅನಾಹುತವಾಗುತ್ತದೆ. ಇಷ್ಟಕ್ಕೂ ಭಗ್ನ ಪ್ರೇಮಿಗಳೆಂದು ಕರೆಸಿಕೊಳ್ಳುವವರು, ಪ್ರೀತಿಗಾಗಿ ಪ್ರಾಣವನ್ನೇ ಬಲಿಕೊಟ್ಟ ಆಧುನಿಕ 'ಅಮರ ಪ್ರೇಮಿ'ಗಳ ಉದಾಹರಣೆಗಳನ್ನು ಗಮನಿಸಿದರೆ ನಿಮಗಿದು ಸ್ಪಷ್ಟವಾಗುತ್ತದೆ.
ಆದರೆ ಎಲ್ಲರೂ ಇದೇ ರೀತಿ ಇರುತ್ತಾರೆಂದಲ್ಲ. ಸರಿಯಾದ ಸಮಯದಲ್ಲಿ ಎಚ್ಚರಿಸಿದರೆ ಈ 'ಭಾವನಾ' ಜೀವಿಗಳು ಖಂಡಿತಾ ಹುಚ್ಚುಕೋಡಿಯಲ್ಲಿ ಕೊಚ್ಚಿ ಹೋಗುವುದಿಲ್ಲ. ಹಿಂತಿರುಗಿ ಬರುತ್ತಾರೆ... ಮತ್ತೆ ವಾಸ್ತವಕ್ಕೆ ತಮ್ಮನ್ನು ತಾವು ತೆರೆದು ಕೊಳ್ಳುತ್ತಾರೆ... ಇದಕ್ಕಾಗಿ ಅವರನ್ನು ಎಚ್ಚರಿಸುವುದು ಮುಖ್ಯ..
ಎಷ್ಟಾದರೂ ಈ 'ಮೋಹ'ದ ಮೋಡಿ ಎನ್ನುವುದು ತೀರಾ ಅನನ್ಯ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಈ ಸುಳಿಗೆ ಸಿಲುಕಿ ಅದರ ಸವಿಯನ್ನು, ಮಾಧುರ್ಯವನ್ನು ಅನುಭವಿಸಿಯೇ ಇರುತ್ತಾರೆ. ಈಗ ಅವುಗಳನ್ನೆಲ್ಲಾ ನೆನಸಿಕೊಂಡರೆ, ನಮ್ಮ ಹುಚ್ಚು ವಾಂಛೆಗಳ ಪೀಕಲಾಟ ಸಣ್ಣಗೆ ನಗು ತರಿಸುತ್ತವೆ. ಆದರೆ ಭಾಂದವ್ಯದ ಅಲೆಗೆ ಸಿಲುಕಿದ್ದ ಕಾಲದಲ್ಲಿ ಇವೇ ಪೀಕಲಾಟಗಳು ನಮಗೆ 'ಅಮರ ಪ್ರೇಮಿ'ಗಳ ಹೆಗ್ಗುರುತುಗಳಾಗಿ ಕಂಡಿರುತ್ತವೆ. ಕಾಲ ನಮ್ಮಲ್ಲಿ ಎಷ್ಟೊಂದು ಬದಲಾವಣೆಗಳನ್ನು ತರುತ್ತವೆ ಅಲ್ಲವೇ...!?

Monday 11 February 2008

ಚದುರಿದ ಕನಸು...

ಯಾಕೋ ಮನಸ್ಸು ಸ್ಥಿಮಿತದಲ್ಲಿಲ್ಲ. ಭರವಸೆಯ ಒರತೆ ಬತ್ತಿ ಹೋಗಿದೆ. ಅಚಾನಕ್ಕಾಗಿ ಏಕತಾನತೆ ಕಾಡುತ್ತಿದೆ. ವರ್ಷಗಳಿಂದ ಹನಿಹನಿಯಾಗಿ ಕೂಡಿಟ್ಟ ಕನಸುಗಳೆಲ್ಲ ಒಮ್ಮೆಲೇ ಯಾರೋ ಅಪಹರಿಸಿದ ಅನುಭವ.. ಮನಸ್ಸೆಲ್ಲ ಖಾಲಿ ಖಾಲಿ... ಎತ್ತ ನೋಡಿದರೂ ಕತ್ತಲು, ಬರೀ ಗಾಡಾಂಧಕಾರ..

'ಬೆಳಕಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯ, ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದೆಂತು?' ಎಂದು ಎಲ್ಲೋ ಓದಿದ್ದ ವಾಕ್ಯ ಮನಪಟಿಲದ ಮೇಲೊಮ್ಮೆ ಮಿಂಚಿ ಮರೆಯಾಯ್ತು. ಭಾರವಾದ ಹೃದಯ ವಾಸ್ತವವನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದರೆ, ಮನಸ್ಸೆಲ್ಲೋ ಕಳೆದು ಹೋಗಿತ್ತು. ಕಣ್ಣುಗಳಲ್ಲಿ ತುಂಬಿಕೊಂಡ ನೀರು ಹೊರ ಹರಿಯುತ್ತಿರಲಿಲ್ಲ. ಎಷ್ಟಾದರು ಗಂಡಸು ಅಳಬಾರದೆನ್ನುವ ಸಂಪ್ರದಾಯದಲ್ಲಿ ಬೆಳೆದ ಮನಸ್ಸು.. ಕಣ್ಣೀರಾದರು ಏನು ಮಾಡೀತು?

ಗೆಳೆಯ ಸಂದೇಶ್ ಕಳಿಸಿದ್ದ ಎಸ್‌ಎಮ್‌ಎಸ್(SMS) ಮತ್ತೆ ಮತ್ತೆ ನೆನಪಾಗುತ್ತಿದೆ. 'ಕಣ್ಣಿಂದ ಹರಿದು ಕೆನ್ನೆ ಒದ್ದೆ ಮಾಡುವುದು ಕಣ್ಣಿರಲ್ಲ.. ಬದಲಾಗಿ ಹೃದಯದಿಂದ ಜಾರಿ ಮನಸ್ಸನ್ನು ಆರ್ದ್ರಗೊಳಿಸುವುದೇ ನಿಜವಾದ ಕಣ್ಣೀರು' ಅಬ್ಬಾ ಎಂಥಾ ಸುಂದರ ಕಲ್ಪನೆ. ನೋವಿನಲ್ಲೂ ಸುಖ ಕೊಡುವ ಸಾಲುಗಳಿವು.. ಘಾಸಿಗೊಂಡ ಹೃದಯಕ್ಕೆ ಸಾಂತ್ವನ ನೀಡುವ ಇಂತಹ ಅರ್ಥಭರಿತ ಸಾಲುಗಳು ನಿಜಕ್ಕೂ ಅದ್ಭುತ.

'ಸತ್ಯ ಯಾವತ್ತಿಗೂ ಕಹಿ' ಎಂಬುದನ್ನು ನಾನು ನಂಬಿರಲಿಲ್ಲ. ಅದರೆ ಹೃದಯವನ್ನೇ ಹಿಂಡಿ, ವಾಸ್ತವ ನಗುತ್ತಿರುವಾಗ ನಂಬಿಕೆ ಬದಲಾಗಲೇಬೇಕಿದೆ... ಇಂದು ನನ್ನೆಲ್ಲಾ ಕನಸುಗಳು ಮತ್ತೆಂದೂ ಬಾರದಷ್ಟು ದೂರ ಹೊರಟು ಹೋಗಿವೆ. ಭರವಸೆ, ಆಸೆ, ಆಕಾಂಕ್ಷೆಗಳ ಮೇಲೆ ಕಟ್ಟಿದ್ದ ಪ್ರೀತಿಯ ಅರಮನೆ, ವಾಸ್ತವದ ಬರಸಿಡಿಲಿಗೆ ಬಲಿಯಾಗಿ ಕಣ್ಣೆದುರೇ ಉರುಳಿ ಹೋಗುತ್ತಿದೆ. ಅಸಹಾಯಕತೆಯಿಂದ ಮನಸ್ಸು ರೋದಿಸುತ್ತಿದೆ...

ಈಗ ಉಳಿದಿರುವುದೆಲ್ಲ ಭಗ್ನಾವಷೇಷ ಮಾತ್ರ...ನಂಬಿಕೆಯ ಚೂರು, ಪ್ರೀತಿಯ ಬೂದಿಯ ಮಧ್ಯೆ ಅಳಿಯದೆ ಉಳಿದ ಕನಸುಗಳನ್ನು ಹೆಕ್ಕಿ ತೆಗೆಯುವ ನನ್ನ ವ್ಯರ್ಥ ಪ್ರಯತ್ನ ಕಂಡು ವಿಧಿ ನಕ್ಕಂತಾಯಿತು. ಜೀವನ ಪೂರ್ತಿ ನನ್ನ ಜೊತೆಗಿರಬೇಕೆಂದು ಕಟ್ಟಿದ್ದ ಕನಸು ಇಂದು ಇನ್ಯಾರದೊ ಪಾಲಾಗಿದೆ.. ನನ್ನ ನಿರೀಕ್ಷೆಗೆ ಬೆಂಗಾವಲಾಗಬೇಕಿದ್ದ ಭರವಸೆ ಸೋತು ನೆಲಕಚ್ಚಿದೆ...

ನೋವಿಗೆ ನಗುವಿನ ಮುಖವಾಡ ಧರಿಸಿಯಾದರು ನಾನು ಮತ್ತೆ ಜೀವನ ಯಾತ್ರೆ ಆರಂಭಿಸಲೇಬೇಕಿದೆ. ಆದರೆ ಅದು ಮತ್ತೆ ಹೊಸ ಕನಸನ್ನು ಕಟ್ಟಿ ಬೆಳೆಸುವುದಕಾಗಲ್ಲ ಬದಲಾಗಿ ಕಳೆದುಕೊಂಡ ಕನಸಿನ ನೆನಪನ್ನು ಸದಾ ಹಸಿರಾಗಿರಿಸುವುದಕ್ಕಾಗಿ...... ಆ ನೆನಪಲ್ಲೇ ಉಳಿದ ಉಸಿರನ್ನು ಕಾಪಾಡುವುದಕ್ಕಾಗಿ.... ನಾನು ಬದುಕಲೇಬೇಕಾಗಿದೆ... ಪ್ರೀತಿಯ ನೆನಪಿಪಾಗಿ...