Wednesday 6 May 2009

ಆಹಾ ಎಂಥಾ ಆ ಕ್ಷಣ...

"ಸ್ಸಾರಿ... ನಂಗೆ ನಿಜವಾಗ್ಲೂ ತುಂಬಾ ಕೆಲಸ ಇದೆ. ಇವತ್ತು ನಿಂಜೊತೆ ಡಿನ್ನರ್‌ಗೆ ಬರೋಕಾಗೊಲ್ಲ..." ಎಂದು ಹೇಳಿ ಅವಳ ಉತ್ತರಕ್ಕೂ ಕಾಯದೆ ಮೊಬೈಲ್ ಕೆಳಗಿಟ್ಟೆ. ಆಕೆಗೆ ಖಂಡಿತವಾಗಿಯೂ ಬೇಜಾರಾಗಿರುತ್ತೆ ಅನ್ನೋದು ನಂಗೂ ಗೊತ್ತಿತ್ತು. ಆ ಬಗ್ಗೆ ಹೆಚ್ಚು ಯೊಚಿಸಲಿಲ್ಲ. ಸುಮ್ಮನೆ ಕೀ ಬೋರ್ಡ್ ಕುಟ್ಟುತ್ತಾ ಕುಳಿತೆ. ದೃಷ್ಟಿ ಮಾನಿಟರ್‌ನತ್ತ ನೆಟ್ಟಿದ್ದರೂ, ಯೋಚನೆಗಳೆಲ್ಲಾ ಸೃಷ್ಟಿಯ ಸುತ್ತಲೇ ಸುತ್ತುತ್ತಿದ್ದವು. ಖಂಡಿತಾ ಆಕೆ ಮತ್ತೆ ಫೋನ್ ಮಾಡುತ್ತಾಳೆ... ಪುನಃ ನೆಪ ಹೇಳುವ ಮನಸ್ಸಿರಲಿಲ್ಲ...
+++
ಸೃಷ್ಟಿ ನನ್ನಲ್ಲಿ ಇಷ್ಟಲ್ಲಾ ಹೋಯ್ದಾಟಗಳನ್ನು ಸೃಷ್ಟಿಸುತ್ತಾಳೆಂದು ನಾನೆಸಿರಲಿಲ್ಲ. ಇದುವರೆಗೂ ನಾನು ಆಕೆಯಿಂದ ಒಂದೇ ಒಂದು ವಿಷಯವನ್ನು ಮರೆಮಾಚಿದವನಲ್ಲ. ನನ್ನ ಗುಣ-ಅವಗುಣಗಳೆರಡನ್ನೂ ಸಮಾನವಾಗಿ ಸ್ವೀಕರಿಸಿದ್ದ ಸ್ನೇಹಿತೆ ಆಕೆ. ಛೆ... ಮತ್ತೆ ಗೊಂದಲ. ಆಕೆ ನಿಜವಾಗಿಯೂ ನನ್ನ ಸ್ನೇಹಿತೆಯಷ್ಟೇ ಆಗಿದ್ದಳೆ. ಹೌದು... ನಮ್ಮಿಬ್ಬರ ನಡುವೆ ಬೇರೇನೂ ಇರಲಿಲ್ಲ ಎಂದರೆ ಯಾರೂ ನಂಬುವುದಿಲ್ಲ. ಪ್ರಾಯಶಃ ಈಗ ನಾನೂ ನಂಬುವುದಿಲ್ಲ.
ಮೊದಲಾದರೆ, "ಎಲ್ಲಿ... ನಿನ್ನ ಪ್ರೇಯಸಿ ಇನ್ನೂ ಬಂದೇ ಇಲ್ಲವಲ್ಲಾ..." ಎಂದು ಮದನ್ ಹೇಳಿದಾಗ, ಅಥವಾ "ಏನು ಹರಿ... ಬರೀ ಹುಡುಗಿ ಜೊತೆ ಸುತ್ತೋದು ಮಾತ್ರಾನೋ ಅಥವಾ ಮದುವೆ ಊಟಾನೂ ಹಾಕಿಸ್ತಿಯೋ..." ಎಂದು ಪ್ರಶಾಂತ್ ಕುಹಕವಾಡಿದಾಗ ನನಗೆ ಅಸಾಧ್ಯ ಸಿಟ್ಟು ಬರುತ್ತಿತ್ತು. ಆದರೆ ಸೃಷ್ಟಿಯೇ, ಅದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಸಮಾಧಾನ ಮಾಡುತ್ತಿದ್ದಳು. ಆದರೆ ಒಂದು ಬಾರಿಯಂತೂ ಮದನ್ ಮಿತಿಮೀರಿ ಕೀಟಲೆ ಮಾಡಿದಾಗ ಅವಳೇ, "ಹೌದು. ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಮದುವೆಯೂ ಮಾಡಿಕೊಳ್ಳುತ್ತೇವೆ. ಏನಿವಾಗ?" ಎಂದು ಅವನನ್ನು ದಬಾಯಿಸಿದ್ದಳು. ಯಾವಾಗಲೂ ಶಾಂತವಾಗಿರುತ್ತಿದ್ದ ಸೃಷ್ಟಿ ಅಂದು ಧನಿಯೇರಿಸಿ ಮದನ್‌ಗೆ ಬೈದು ಆತನ ಬಾಯಿ ಮುಚ್ಚಿಸಿದ್ದು ಕಂಡು ನನಗಂತೂ ಅಚ್ಚರಿಯಾಗಿತ್ತು. ಆದರೆ ಅಂದೇ ಸಲ್ಲದ ಯೋಚನೆಯೊಂದು ನನ್ನನ್ನು ಕಾಡಿತ್ತು. ಹಾಗಾದರೆ ಆ ಭಾವನೆ ಆಕೆಯಲ್ಲಿ ಇದ್ದಿದ್ದು ನಿಜವೇ?
ಈ ಅನುಮಾನವನ್ನು ಪರಿಹರಿಸಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. "ಸೃಷ್ಟಿ... ನಿನ್ನ ಮನಸ್ಸಲ್ಲಿ ನಿಜಕ್ಕೂ ಆ ರೀತಿಯ ಯೋಚನೆ ಇದೆಯೇ?" ಎಂದು ನೇರವಾಗಿ ಕೇಳಿಯೇ ಬಿಟ್ಟೆ.
ಆದರೆ ನಾನು ಊಹಿಸಿದಂತೆ ಸೃಷ್ಟಿ ತಬ್ಬಿಬ್ಬಾಗಲಿಲ್ಲ, ಕೋಪಗೊಳ್ಳಲಿಲ್ಲ ಅಥವಾ ಹೌದು ಎಂದು ಹೇಳಿ ನಾಚಿಕೆಯಿಂದ ನೆಲ ನೋಡುತ್ತಲೂ ನಿಲ್ಲಲಿಲ್ಲ.
"ಹರಿ... ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ" ಎಂದಷ್ಟೇ ಹೇಳಿ ಅಲ್ಲಿಂದ ಹೊರಟುಹೋದಳು.
ಅಂದಿನಿಂದ ನನಗರಿವಿಲ್ಲದಂತೆ ಸೃಷ್ಟಿಯೊಡನಿದ್ದ ಸಲುಗೆ ಕೊಂಚ ಮರೆಯಾಯ್ತು. ಆಕೆಯೊಡಗಿನ ಮಾತುಗಳಲ್ಲಿ ಕೊಂಚ ಬಿಗು ಕಾಣಿಸಿಕೊಳ್ಳತೊಡಗಿತು. ಇದನ್ನು ಯಾರು ಗಮನಿಸಿದರೋ, ಬಿಟ್ಟರೋ ಗೊತ್ತಿಲ್ಲ. ಆದರೆ ಸೃಷ್ಟಿ... ಇದು ಆಕೆಯ ಗಮನಕ್ಕೆ ಬಾರದಿರುತ್ತದೆಯೇ...
+++
ತ್ತೆ ಮೊಬೈಲ್ ಅರಚತೊಡಗಿತು. ಆಕೆಯೇ... ಬೇರೆ ದಾರಿ ಇರಲಿಲ್ಲ.
"ಹೇಳು ಸೃಷ್ಟಿ..." ಎಂದೆ.
"ಹರಿ... ದಯವಿಟ್ಟು ಅವಾಯ್ಡ್ ಮಾಡಬೇಡ. ನಾನು ನಿಂಜೊತೆ ಮಾತಾಡ್ಲೇಬೇಕು" ಎಂದ ಸೃಷ್ಟಿಗೆ ಇಲ್ಲ ಎನ್ನಲಾಗಲಿಲ್ಲ.
"ಸರಿ... ಸಂಜೆ ವೆಸ್ಟ್ ಎಂಡ್ ಬಳಿ ಸಿಗುತ್ತೇನೆ" ಎಂದಾಗ ಸೃಷ್ಟಿ ನಿಟ್ಟುಸಿರು ಬಿಟ್ಟಿದ್ದು ಕೇಳಿಸಿತು.
ಇಷ್ಟಾದ ಮೇಲೆ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗಲಿಲ್ಲ. ಸೃಷ್ಟಿ ಏನು ಹೇಳಲು ಪ್ರಯತ್ನಿಸುತ್ತಿದ್ದಾಳೆ ಎಂದು ಯೋಚಿಸತೊಡಗಿದೆ. ಅರ್ಥವಾಗಲಿಲ್ಲ... ಅಥವಾ ನಾನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲ.
+++
ಸಂಜೆ ವೆಸ್ಟ್ ಎಂಡ್‌ಗೆ ಕಾಲಿಟ್ಟಾಗ, ಆ ಬೀಚ್ ರೆಸಾರ್ಟ್ ತನ್ನ ಎಂದಿನ ಜೋಶ್‌ನಲ್ಲಿತ್ತು. ಈ ಮೊದಲು ಸೃಷ್ಟಿಯೊಂದಿಗೆ ಅನೇಕ ಬಾರಿ ಇಲ್ಲಿಗೆ ಬಂದಿದ್ದರೂ, ಇಂದೇಕೊ ಆ ವಾತಾವರಣ ವಿಚಿತ್ರವಾಗಿ ಕಂಡಿತು. ಅಲ್ಲೇ ಕೊಂಚ ದೂರದಲ್ಲಿ ಕುಳಿತಿದ್ದ ಸೃಷ್ಟಿ ನನ್ನತ್ತಲೇ ನೋಡುತ್ತಿದ್ದಳು... ಆಕೆಯ ಸನಿಹ ಹೋಗುತ್ತಿದ್ದಂತೆಯೇ ಎದ್ದು ನನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ ನಿಂತ ಸೃಷ್ಟಿ ನನ್ನೊಳಗೆ ಯಾವುದೋ ಆತಂಕ ಹುಟ್ಟುಹಾಕತೊಡಗಿದಳು.
"ಬಹಳ ದಿನಗಳಿಂದ ಗಮನಿಸುತ್ತಿದ್ದೇನೆ ಹರಿ... ನಿನ್ನ ಮಾತು, ವರ್ತನೆ ಎಲ್ಲವೂ ಬದಲಾಗುತ್ತಿದೆ..."
"ಹಾಗೇನೂ ಇಲ್ಲಾ. ಅದು...' ಎಂದು ಸಮರ್ಥಿಸಲು ಹೊರಟ ನನ್ನ ಮಾತುಗಳನ್ನು ಅರ್ಧದಲ್ಲೇ ತಡೆದು, "ಕಾರಣ ಬೇಕಿಲ್ಲ ಹರಿ. ಅದನ್ನೂ ಅರ್ಥಮಾಡಿಕೊಳ್ಳದಷ್ಟು ದಡ್ಡಿಯಲ್ಲ ನಾನು. ಆದರೆ ಒಂದು ತಿಳಿದುಕೋ... ನಮ್ಮಲ್ಲಿ ಹುಟ್ಟುವ ಎಲ್ಲಾ ಭಾವನೆಗಳಿಗೂ ಕಾರಣ ಹುಡುಕಲು ಸಾಧ್ಯವಿಲ್ಲ. ಹುಡುಕಲೂ ಬಾರದು... ನಿನಗೆ ಆತ್ಮೀಯವಾಗಿರುವ ವ್ಯಕ್ತಿಗಳೊಂದಿಗಿರುವಾಗ ನಿನಗೆ ಸಿಗುವ ಅನುಭೂತಿಗೆ ಕಾರಣ ಹುಡುಕುತ್ತಾ ಹೊರಟರೆ ನೀನು ನೆಮ್ಮದಿ ಕಳೆದುಕೊಳ್ಳುತ್ತೀಯೇ ಹೊರತು, ಕಾರಣ ಕಂಡುಕೊಳ್ಳುವುದಿಲ್ಲ" ಎಂದ ಸೃಷ್ಟಿಯ ಮಾತುಗಳು ನನಗ್ಯಾಕೋ ತೀರಾ ಅಪರಿಚಿತವೆನೆಸಿತು.
"ನಿನ್ನ ಜೊತೆ ಇರುವಾಗ ಯಾಕೋ ನಿರಾಳವಾಗಿರುತ್ತೇನೆ. ಏನೋ ಒಂದು ಅವ್ಯಕ್ತ ಖುಷಿ ಸಿಗುತ್ತದೆ. ಆದರೆ, ಅಂತಹ ಭಾವಗಳನ್ನು ಆ ಕ್ಷಣದಲ್ಲಷ್ಟೇ ಅನುಭವಿಸಿ ಸುಮ್ಮನಿದ್ದು ಬಿಡಬೇಕು ಹರಿ. ಆಗಷ್ಟೇ ಅವು ಮಧುರವಾಗುಳಿಯುತ್ತವೆ. ಒಂದು ಸಂಬಂಧವನ್ನು ತೀರಾ ಗೋಜಲಾಗಿಸಿದರೆ, ನಿನ್ನ ಗೊಂದಲಗಳಿಗೆ ಆ ಸಂಬಂಧವೇ ಬಲಿಯಾಗುತ್ತದೆ... ದಯವಿಟ್ಟು ಅದಕ್ಕೆ ಅವಕಾಶ ಮಾಡಿಕೊಡಬೇಡ..." ಎಂದು ಹೇಳಿ ನನ್ನ ತಲೆ ನೇವರಿಸಿ, ಹಣೆಯನ್ನು ಮೃದುವಾಗಿ ಚುಂಬಿಸಿದ ಸೃಷ್ಟಿ ತನ್ನ ಕಾರಿನತ್ತ ಹೆಜ್ಜೆ ಹಾಕಲಾರಂಭಿಸಿದಳು.
ಸ್ವಲ್ಪ ದೂರ ಸಾಗಿದ ನಂತರ ನನ್ನತ್ತ ತಿರುಗಿ, "ಹರಿ... ಈ ಮುತ್ತಿಗೂ ಕಾರಣ ಹುಡುಕುತ್ತಾ ಕೂರಬೇಡ" ಎಂದು ಕಣ್ಣಲ್ಲೇ ತುಂಟ ನಗು ಸೂಸಿ ಹೊರಟುಹೋದಳು. ಆಕೆ ಹೋದೆಡೆಗೆ ನೋಡುತ್ತಾ ನಿಂತೆ. ಆ ವೇಳೆ ಸೃಷ್ಟಿಯ ನಗು ತೀರಾ ಹಿತವೆನೆಸಿತು. ಆದರೆ ಯಾಕೋ ಆ ನಗುವಿಗೆ ಹಾಗೂ ಅದು ನನ್ನಲ್ಲಿ ಸೃಷ್ಟಿಸಿದ ಹಿತಕರ ಭಾವಕ್ಕೆ ಕಾರಣ ಹುಡುಕಬೇಕೆಂದು ಅನಿಸಲಿಲ್ಲ...

Wednesday 29 April 2009

ಶ್ರೀನಿವಾಸ ಕಲ್ಯಾಣ ಮತ್ತು ಚಿಂತಾಮಣಿ ಪ್ರಸಂಗ

ಲವರಂತೆ ನನಗೂ ನನ್ನ ಹೈಸ್ಕೂಲ್ ಜೀವನ ಮರೆಯಲಾಗದ ನೆನಪುಗಳ ಬುತ್ತಿ. ಅತ್ತ ಸಂಪೂರ್ಣ ಪ್ರೌಢ ವಯಸ್ಸೂ ಅಲ್ಲ, ಇತ್ತ ಮರ್ಕಟ ಬುದ್ಧಿಗೇನೂ ಕಮ್ಮಿ ಇಲ್ಲ ಎಂಬಂತಿದ್ದ ಕಾಲಘಟ್ಟವದು. ಆಗಷ್ಟೇ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್‌ಗೆ ಭಡ್ತಿ ಪಡೆದು ಒಂದು ವರ್ಷ ಸರಿದುಹೋಗಿತ್ತು. ನಮ್ಮೊಂದಿಗೆ ಹೈಸ್ಕೂಲ್‌ನಲ್ಲಿ ಕೈಗೊಂಡಿದ್ದ ಬಹುವಿಧದ ಕಿತಾಪತಿ ಕಾರ್ಯಗಳ ಕಾರಣ ಶಿಕ್ಷಕರು ಸಹಸ್ರ ನಾಮಾರ್ಚನೆ ಸಹಿತವಾಗಿದ ನೀಡಿದ್ದ ಹಲವು 'ಬಿರುದು'ಗಳನ್ನು ಹೊಂದಿದ್ದ ತರ್ಲೆ ಬಳಗವೂ ಇತ್ತು. ಚಿಂತಾಮಣಿ (ಗಣಿತದ ಕಾಗುಣಿತಗಳನ್ನು ತನ್ನದೇ ವಿಧಾನದಲ್ಲಿ ಬಿಡಿಸುತ್ತಿದ್ದ ಮೇಧಾವಿ ನಿತ್ಯಾನಂದನಿಗೆ ನಾವಿಟ್ಟಿದ್ದ ಅಡ್ಡ ಹೆಸರಿದು), ನಾರಾಯಣ, ಶಿವು, ರಾಜೇಶ್, ಸತೀಶ್... ಹೀಗೆ ಹಲವು ಶಾಶ್ವತ ಸದಸ್ಯರನ್ನು ಹೊಂದಿದ್ದ ಆ ತರ್ಲೆ ಬಳಗದಲ್ಲಿ ನಾನೂ ಕೆಲವೊಮ್ಮೆ ಅತಿಥಿ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೆ.

ಇಂತಿಪ್ಪ ಈ ಗುಂಪಿಗೆ ನಮ್ಮದೇ ತರಗತಿಯಲ್ಲಿದ್ದ ಒಂದು ಹುಡುಗಿಯನ್ನ ಕಂಡರಾಗುತ್ತಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಈ ತರ್ಲೆ ಬಳಗ ಮಾಡುವ ಎಲ್ಲಾ ಆವಾಂತರಗಳನ್ನು ವರದಿಯನ್ನು ಚಾಚೂ ತಪ್ಪದೆ ಕ್ಲಾಸ್ ಟೀಚರ್‌ಗೆ ಸಲ್ಲಿಸಿ, ಅವರಿಂದ ಪ್ರತಿದಿನ ಮಹಾಪೂಜೆ ಮಾಡಿಸುತ್ತಿದ್ದ ಆಕೆಯ ಮೇಲೆ ಇವರಿಗೆ ಸಿಟ್ಟು ಬರುವುದು ಸಹಜ ತಾನೇ... ಪಾಪ! ಇಷ್ಟಕ್ಕೂ ಅವಳದೇನೂ ತಪ್ಪಿರಲಿಲ್ಲ ಬಿಡಿ. ತರಗತಿಯ ಮಾನಿಟರ್ ಆಗಿ, ಶಿಸ್ತು ಕಾಪಾಡಿಕೊಳ್ಳುವುದಕ್ಕೆ ಆಕೆ ಅಷ್ಟಾದರೂ ಮಾಡದಿದ್ದರೆ ಹೇಗೆ? ಆದರೆ ಈ ಮಾತು ನಮ್ಮ ಮೊಂಡು ಬುದ್ಧಿಗೆ ಎಲ್ಲಿ ತಿಳಿಯಬೇಕು. ಹೇಗಾದರೂ ಮಾಡಿ ಒಂದು ದಿನ ಆಕೆಗೆ ನಮ್ಮ ಕ್ಲಾಸ್ ಟೀಚರ್ ಕೈಯಿಂದ ಮಹಾಮಂಗಳಾರತಿ ಮಾಡಿಸಬೇಕು ಎಂಬ ಭೀಷ್ಮ ಪ್ರತಿಜ್ಞೆಯನ್ನು ತರ್ಲೆ ಬಳಗ ಮಾಡಿಯೇಬಿಟ್ಟಿತ್ತು. ಅಂತಹ ಒಂದು ಸಂದರ್ಭಕ್ಕಾಗಿ ಹೊಂಚು ಹಾಕಿ ಕಾಯುತ್ತಿತ್ತು. ಆದರೆ ಇದ್ಯಾವುದರ ಪರಿವೇ ಇಲ್ಲದ ಆಕೆ ಮಾತ್ರ ತನ್ನ ಮಾನಿಟರಿಂಗ್ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದಳು. ಈ ನಡುವೆ ನಮ್ಮ ತರ್ಲೆ ಬಳಗದ ಪ್ರತಿಜ್ಞೆ ನೆರವೇರುವ ದಿನ ಬಂದೇ ಬಿಟ್ಟಿತು...

"ಇಲ್ಲ... ಇನ್ನು ನನ್ನಿಂದ ಸಾಧ್ಯವಿಲ್ಲ. ಇವತ್ತು ಒಂದು ಕೈ ನೋಡೇ ಬಿಡ್ತೀನಿ..." ಎನ್ನುತ್ತಾ ಅವಸವರಸವಾಗಿ ನಾರಾಯಣ ಕ್ಲಾಸ್ ರೂಮ್‌ಗೆ ನುಗ್ಗಿದಾಗಲೇ ಏನೋ ಎಡವಟ್ಟಾಗಿದೆ ಅಂತ ನಮಗೆಲ್ಲಾ ಗೊತ್ತಾಯ್ತು. ಕೊನೆ ಬೆಂಚ್‌ನಲ್ಲಿ ಕುಳಿತು ಚಿಂತಾಮಣಿ ಮನೆಯಿಂದ ತಂದಿದ್ದ ನೆಲಗಡಲೆ ಸವಿಯುತ್ತಿದ್ದ ನಾವು ಒಂದು ಕ್ಷಣ ನಮ್ಮ ಕೈ-ಬಾಯಿಗಳಿಗೆ ವಿರಾಮ ನೀಡಬೇಕಾಯ್ತು. ಕೆಂಪಿಟ್ಟಿದ್ದ ನಾರಾಯಣನ ಮುಖ ನೋಡಿ, ಚಿಂತಾಮಣಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ಅರ್ಥವಾಯ್ತು. ವಿಚಾರಿಸಿದಾಗ, ಬೆಳಿಗ್ಗೆ ನಮ್ಮ ಮಾನಿಟರ್ ಆ ವಾರದಲ್ಲಿ ತರ್ಲೆ ಬಳಗ ಮಾಡಿದ ಕಿತಾಪತಿಗಳ ಪಟ್ಟಿಯನ್ನು ಕ್ಲಾಸ್ ಟೀಚರ್‌ಗೆ ಕೊಟ್ಟಿರುವುದ್ದಾಗಿಯೂ, ಅವುಗಳಲ್ಲಿ ಶ್ರೀನಿವಾಸ ಮಾಡಿದ ಕಲ್ಯಾಣ ಕಾರ್ಯಗಳ ಸಂಖ್ಯೆ ಆಗಷ್ಟೇ ಮುಗಿದಿದ್ದ ಕ್ಲಾಸ್ ಟೆಸ್ಟ್‌ನಲ್ಲಿ ಆತ ಪಡೆದ ಅಂಕಗಳಿಗಿಂತ ಹೆಚ್ಚಾಗಿದ್ದುದಾಗಿಯೂ ಹಾಗೂ ಆ ಕಾರಣದಿಂದ ಮೇಡಂ ಸಿಟ್ಟಾಗಿ, ಮಧ್ಯಾಹ್ನದ ಲಂಚ್ ಅವರ್‌ನಲ್ಲಿ ಆತನನ್ನು ಸ್ಟಾಫ್ ರೂಮ್‌ಗೆ ಕರೆದು ಅರ್ಧ ಗಂಟೆ 'ಸ್ಷೆಷಲ್ ಕ್ಲಾಸ್' ತೆಗೆದುಕೊಂಡಿರುವುದಾಗಿಯೂ ತಿಳಿದು ಬಂತು. ಇಷ್ಟು ಹೇಳುವಷ್ಟರಲ್ಲಿ ಮಧ್ಯಾಹ್ನ ನಮ್ಮೊಂದಿಗೆ ಊಟಕ್ಕೆ ಬರದ ಶ್ರೀನಿ ಎಲ್ಲಿ ಹೋಗಿದ್ದ ಎಂಬ ವಿಚಾರ ನಮಗೆಲ್ಲಾ ಸ್ಪಷ್ಟವಾಯಿತು.

"ಸರಿ, ಆದದ್ದು ಆಗಿ ಹೋಯ್ತು. ಇದೆಲ್ಲಾ ನಮಗೇನೂ ಹೊಸದೇ? ತಗೋ ಕಡ್ಲೆ ತಿನ್ನು..." ಎಂದು ಚಿಂತಾಮಣಿ ತನ್ನ ಎಂದಿನ ಕೂಲ್ ಸ್ಟೈಲ್‌ನಲ್ಲಿ ಹೇಳಿದರೂ ಶ್ರೀನಿ ಕೇಳಲಿಲ್ಲ. ಪ್ರಾಯಶಃ 'ಸ್ಷೆಷಲ್ ಕ್ಲಾಸ್' ಸಖತ್ ಸ್ಟ್ರಾಂಗ್ ಆಗಿತ್ತು ಎಂದು ಕಾಣುತ್ತದೆ. "ಹೇಗಾದರೂ ಅವಳಿಗಿಂದು 'ಸ್ಪೆಷಲ್ ಕ್ಲಾಸ್' ಅಟೆಂಡ್ ಮಾಡೋದು ಎಷ್ಟು ಕಷ್ಟ ಎಂದು ತಿಳಿಯಲೇ ಬೇಕು. ಏನಾದ್ರೂ ಮಾಡು. ಇಲ್ಲಾಂದ್ರೆ ನನ್ನ ಮನಸ್ಸಿಗೆ ಸಮಾಧಾನ ಇರೋಲ್ಲ..." ಎಂದು ಮನನೊಂದು ನುಡಿದ ಶ್ರೀನಿಯ ದುಃಖ ಕಡಿಮೆ ಮಾಡಲೇಬೇಕು ಎಂಬ ಆಲೋಚನೆ ಚಿಂತಾಮಣಿಯ ತಲೆಯಲ್ಲಿ ಭದ್ರವಾಗಿ ತನ್ನ ಅಧಿಪತ್ಯ ಸ್ಥಾಪಿಸಿಬಿಟ್ಟಿತು. ಏನು ಮಾಡುವುದು ಎಂದು ಯೋಚಿಸುತ್ತಾ, ಕೈಯಲ್ಲಿದ್ದ ನೆಲಗಡಲೆಯಿಂದಲೇ ತನ್ನ ತಲೆ ಕೆರೆದುಕೊಂಡ ಚಿಂತಾಮಣಿ ತಕ್ಷಣವೇ ಯುರೇಕಾ! ಎನ್ನುತ್ತಾ ಮೇಲೆಳುವುದಕ್ಕೂ, ಲಂಚ್ ಅವರ್ ಮುಗಿದು ಮಧ್ಯಾಹ್ನದ ಪ್ರಥಮ ಕ್ಲಾಸ್‌ನ ಬೆಲ್ ಬಾರಿಸುವುದಕ್ಕೂ ಸರಿಹೋಯ್ತು. ಅಷ್ಟರಲ್ಲಿ ಲೈಬ್ರರಿಯಿಂದ ಹುಡುಗಿಯರ ದಂಡು ಕ್ಲಾಸ್‌ಗೆ ನುಗ್ಗಿತು. ಜೊತೆಯಲ್ಲೇ ನಮ್ಮ ಮಾನಿಟರ್ ಬಂದು, ಚಿಂತಾಮಣಿಯ ಕುಳಿತಿದ್ದ ಪಕ್ಕದ ಸಾಲಿನ, ಎರಡನೆಯ ಬೆಂಚ್‌ನಲ್ಲಿ ಕುಳಿತು ತಾನು ಮಾಡಿಕೊಂಡಿದ್ದ ನೋಟ್ಸ್‌ಗಳನ್ನು ಮತ್ತೊಮ್ಮೆ ಪರೀಕ್ಷಿಸಿ ತನ್ನ ಬ್ಯಾಗ್‌ಗೆ ಸೇರಿಸಿದಳು. ಅದಾದ ಐದು ನಿಮಿಷಕ್ಕೇ ಕ್ಲಾಸ್‌ಗೆ ಬಂದ ಮೇಡಂ ಮುಖದಲ್ಲಿ ಇನ್ನೂ ಸಿಟ್ಟಿನ ಛಾಯೆಯಿತ್ತು. ನಮಗೆಲ್ಲಾ ಹಿಂದಿನ ದಿನ ಜಿಯಾಗ್ರಫಿ ಸರ್ ಪಾಠ ಮಾಡುವಾಗ ವಿವರಿಸಿದ್ದ, ಸ್ಫೋಟಿಸಲು ಸಿದ್ಧವಾಗಿರುವ ಜ್ವಾಲಾಮುಖಿಯ ನೆನಪಾಯ್ತು. ಇವತ್ತೇನಾದರೂ ತರ್ಲೆ ಮಾಡಿದ್ರೆ ಘೋರ ಶಿಕ್ಷೆ ಖಂಡಿತಾ ಎಂದರಿತ ನಾವು, ಮೇಡಂ ಮುಖ ನೋಡುವ ಧೈರ್ಯ ಸಾಲದೆ ಪುಸ್ತಕದೊಳಗೆ ಮಸ್ತಕವನ್ನು ಹುದುಗಿಸಿ ಪಾಠ ಕೇಳುವ ಸೋಗು ಹಾಕಲಾರಂಭಿಸಿದೆವು.

ಹೀ
ಗೆ 15 ನಿಮಿಷ ಸರಿದು ಹೋಯ್ತು. ತರಗತಿಯಲ್ಲೆಲ್ಲಾ ಓಡಾಡುತ್ತಾ ಪಾಠ ಮಾಡುವುದನ್ನು ರೂಢಿಸಿಕೊಂಡಿದ್ದ ಮೇಡಂ, ಮಾನಿಟರ್ ಕುಳಿತಿದ್ದ ಸ್ಥಳದ ಮುಂದೆ ನಿಂತು ಏಕೋ ಒಂದೆರಡು ಬಾರಿ ಕೆಮ್ಮಿದರು. ಮತ್ತೆ ಐದು ನಿಮಿಷ ಕಳೆಯಿತು. ಇದ್ದಕ್ಕಿದ್ದಂತೆ ಮೇಡಂ ಧ್ವನಿಯಲ್ಲಾದ ಬದಲಾವಣೆ ಅವರ ಸಿಟ್ಟು ಈಗಾಗಲೇ ತನ್ನ ಮಿತಿಯನ್ನು ಮೀರಿದ್ದನ್ನು ಸ್ಪಷ್ಟಪಡಿಸಿತು. ಇನ್ನೇನು... ಅವರ ಸಿಟ್ಟಿನ ಲಾವಾ ಯಾರದೋ ತಲೆಯ ಮೇಲೆ ಅಪ್ಪಳಿಸಲಿದೆ, ಬಹುಶಃ ಶ್ರೀನಿವಾಸ ಮತ್ತೇನಾದರೂ ಆವಾಂತರ ಮಾಡಿರಬೇಕು ಎಂದು ಅವನ ಕಡೆ ತಿರುಗಿದ್ದೇ ತಡ... "ವಾಣಿ..." ಎಂದು ಅಬ್ಬರಿಸಿದ ಮೇಡಂ ಆಕೆಯತ್ತ ಅಸಹನೀಯವಾಗಿ ದಿಟ್ಟಿಸುತ್ತಿರುವುದು ಕಂಡುಬಂತು. ಅರೆ... ವಾಣಿ ಅಂದರೆ ನಮ್ಮ ಮಾನಿಟರ್ ಹೆಸರು.
"ಮಾನಿಟರ್ ಆಗಿ ನೀನೇ ಡಿಸಿಪ್ಲೀನ್ ಮೈಂಟೇನ್ ಮಾಡದಿದ್ರೆ ಹೇಗೆ? ಇದೇನಾ ನೀನು ಕಲಿತಿರೋದು? ಎಂದು ಆಕೆ ಕುಳಿತಿದ್ದ ಜಾಗದತ್ತ ಬೆಟ್ಟು ಮಾಡಿ ತೋರಿಸಿ ಗುಡುಗಲು ಆರಂಭಿಸಿದರು. "ವಾಣಿ, ಇದು ಹೇಗಾಯ್ತೋ ಗೊತ್ತಿಲ್ಲ ಮೇಡಂ..." ಎಂದು ಪರಿಪರಿಯಾಗಿ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದರೂ ಅವರು ಶಾಂತರಾಗಲಿಲ್ಲ. ಇಷ್ಟಕ್ಕೂ ಮೇಡಂ ಸ್ವಭಾವವೇ ಹಾಗಿತ್ತು. ಅವರಿಗೆ ಸಿಟ್ಟು ಬಂದರೆ ದೂರ್ವಾಸ, ವಿಶ್ವಾಮಿತ್ರರೂ ನಾಚಬೇಕು.

ಷ್ಟಕ್ಕೂ ಆಕೆ ಮಾಡಿದ್ದಾದರೂ ಏನು? ಎಂದು ತಲೆಕೆರೆದುಕೊಳ್ಳುತ್ತಿರುವಾಗಲೇ ನನ್ನ ದೃಷ್ಟಿ ವಾಣಿ ನಿಂತಿದ್ದ ಜಾಗದತ್ತ ಬಿತ್ತು... ಅಲ್ಲೆಲ್ಲಾ ನೆಲಗಡಲೆ ಸಿಪ್ಪೆ ಹರಡಿತ್ತು...!! ಈಚೆ ಏನೂ ಗೊತ್ತಿಲ್ಲದಂತೆ ಕುಳಿತಿದ್ದ ಚಿಂತಾಮಣಿಯ ತುಟಿಯಂಚಿನಲ್ಲಿ ಕಂಡೂ ಕಾಣದ ನಗು... ಸಿಟ್ಟಿನಿಂದ ಕೆಂಪಾಗಿದ್ದ ಶ್ರೀನಿಯ ಮೊಗದಲ್ಲಿ ಅಚ್ಚರಿ... ಇದನ್ನೆಲ್ಲಾ ನೋಡಿದ ಮೇಲೆ ಏನು ನಡೆಯಿತು ಎಂಬುದು ಸ್ಪಷ್ಟವಾಯಿತು. ಆದರೆ ಸಿಟ್ಟಿನ ಭರದಲ್ಲಿದ್ದ ಮೇಡಂ, ತಮ್ಮ ಪ್ರಿಯ ಶಿಷ್ಯೆ ಹೀಗೆ ಕ್ಲಾಸ್‌ನಲ್ಲಿ ನೆಲಗಡಲೆ ತಿಂದು ಸಿಪ್ಪೆ ಎಸೆಯುತ್ತಾಳೆಯೇ? ಎಂದು ಆಲೋಚಿಸಲಿಲ್ಲ. ವಾಣಿಯ ಮಾನಿಟರಿಂಗ್ ನ ಬಿಸಿ ಅನುಭವಿಸಿದ್ದ ಯಾರೊಬ್ಬರೂ ನಿಜ ಹೇಳುವ ಮನಸ್ಸು ಮಾಡಲಿಲ್ಲ... ಅಂದೇ ಕೊನೆ... ವಾಣಿ ಮತ್ಯಾವತ್ತೂ ಯಾರ ಕಲ್ಯಾಣ ಕಾರ್ಯಗಳ ಕುರಿತೂ ವರದಿ ತಯಾರಿಸಲಿಲ್ಲ... ಅಷ್ಟೇ ಅಲ್ಲಾ, ಯಾರು, ಎಷ್ಟೇ ಪ್ರೀತಿಯಿಂದ ಕೊಟ್ಟರೂ ನೆಲಗಡಲೆ ಮಾತ್ರ ತಿನ್ನುತ್ತಿರಲಿಲ್ಲ.

Thursday 12 February 2009

ಪ್ರೇಮ ಲಹರಿ

''ಲಹರಿ... ಮೋಹ ಲಹರಿ...
ನನ್ನಾ... ಮನವ ಸವರಿ...

ಮೌನ
ಮುರಿದಾಗಿದೆ..
ಮಾತು ಬರದಾಗಿದೆ...

ಹೇಳು ಬರಲೇನು ನಿನ್ನೊಂದಿಗೆ...
''

ದ್ದಾಗಿನಿಂದ ಕಾಡುತ್ತಿದ್ದ ಹಾಡನ್ನು ಗುನುಗುನಿಸುತ್ತ ಹೊರ ಬಂದ ನಾನು ಯಾವುದೋ ಲಹರಿಯಲ್ಲಿ ಕಳೆದು ಹೋಗಿದ್ದೆ. ಅದೇ ಗುಂಗಿನಲ್ಲಿ ಸ್ನಾನ ಮುಗಿಸಿ, ಹೊರಗೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ, ನಿತ್ಯದಂತೆ ಕಣ್ಣು ಫ್ರಿಜ್ ಮೇಲೆ ತಣ್ಣಗೆ ಕುಳಿತಿದ್ದ ಪುಟ್ಟ ಕ್ಯಾಲೆಂಡರ್'ನತ್ತ ಸರಿಯಿತು. ಕೆಂಪು ಇಂಕ್‌ನಲ್ಲಿ ಗುರುತುಮಾಡಿದ್ದ ದಿನಾಂಕವನ್ನು ನೋಡುತ್ತಿದ್ದಂತೆಯೇ ಮೈಮನಗಳಲ್ಲಿ ಪುಳಕ. ಅದು ಫೆಬ್ರುವರಿ 14. ಪ್ರೇಮಿಗಳ ದಿನ... ಅಂದರೆ ಮೂರು ವರ್ಷದ ಹಿಂದೆ ಇದೇ ದಿನದಂದು ನಾನವಳನ್ನು ನೋಡಿದ್ದು. ಸ್ವಪ್ನಾ... ಹೆಸರನ್ನು ನೆನೆದೊಡನೇ ಮೈಮನಸ್ಸುಗಳಲ್ಲಿ ರೋಮಾಂಚನ ಹೊಯ್ದಾಡತೊಡಗಿತು. ಸ್ವಪ್ನಾಳನ್ನು ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಿದ್ದಂತೆಯೇ ತುಟಿಯಂಚಿನಲ್ಲಿ ಕಿರುನಗೆಯೊಂದು ಅರಳಿತು. ಅದೊಂದು ಆಕಸ್ಮಿಕ ಭೇಟಿ. ಅಥವಾ ಒಂದು ಸಣ್ಣ ಅಪಘಾತ.
***
ಕಾಫೀ ಡೇ ಎದುರು ಕಾರು ನಿಲ್ಲಿಸಿ, ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಮುಂದೆ ಸ್ಕೂಟಿಯಲ್ಲಿ ಅಡ್ಡಾದಿಡ್ಡಿಯಾಗಿ ಬರುತ್ತಿದ್ದ ಹುಡುಗಿ ಕಣ್ಣಿಗೆ ಬಿದ್ದಳು. ಅರೆ! ಇದೇನು... ಆಕೆ ನನ್ನ ಕಾರಿನತ್ತಲೇ ಬರುತ್ತಿದ್ದಾಳೆ. ಬರೋ ರೀತಿ ನೋಡಿದರೆ ಪಕ್ಕಾ ’ಎಲ್ ಬೋರ್ಡ್’ ಥರಾ ಇದೆ.
"ಹೇಯ್! ಸ್ಟಾಪ್..." ಎಂದು
ನಾನು ಕೂಗುಷ್ಟರಲ್ಲಿ, 'ದಢ್!!!!!!!!!!!' ಎಂಬ ಸದ್ದು ಕೇಳಿಸಿತು.
ಕಣ್ಣು ಮುಚ್ಚಿ ಕಣ್ಣು ತೆರೆ
ಯುವಷ್ಟರಲ್ಲಿ ಎದುರಿಗಿದ್ದ ಸ್ಕೂಟಿ ಮಾಯ. ಏನಾಯ್ತು ಎಂದು ಇಳಿದು ನೋಡಿದರೆ ಮುಂದೆ ಬಿದ್ದಿದ್ದ ಸ್ಕೂಟಿ ಕಾರಿಗೆ ಮುತ್ತಿಕ್ಕುತ್ತಿತ್ತು. ಕಾರಿಗೆ ಡ್ಯಾಮೇಜ್ ಆಗಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವಷ್ಟೇ ನಾನು ಅದರ ಒಡತಿಯತ್ತ ನೋಡಿದ್ದು. ಸ್ಕೂಟಿಯ ಭಾರ ತಾಳಲಾರದೆ, ಕೊಸರಾಡುತ್ತಿದ್ದ ಆಕೆಯನ್ನು ನೋಡುವಾಗ ನಗು ಬಂದರೂ ತಡೆದುಕೊಂಡೆ. ಸ್ಕೂಟಿಯನ್ನು ಮೇಲೆತ್ತಿ ಅವಳತ್ತ ಕೈಚಾಚಿದೆ. ನನ್ನ ಕೈಹಿಡಿದುಕೊಂಡು, ಕಷ್ಟಪಟ್ಟು ಎದ್ದು ನಿಂತ ಆಕೆಯ ಮೊಗದಲ್ಲಿ ಒಂದು ಸಣ್ಣ ಭಯ ಮಿಶ್ರಿತ ಗೊಂದಲ.
"ಐ ಯಾಮ್... ಸೋ... ಸ್ಸಾರಿ. ಬ್ರೇಕ್ ಸರಿಯಾಗಿ ಹಿಡಿಯಲಿಲ್ಲ..." ಎಂಬ ವಾಕ್ಯಗಳನ್ನು ಪ್ರಯಾಸದಿಂದ ಉಸುರಿದ ಆಕೆಯ ಮೊಗ ಭಯದಿಂದ ಕೆಂಪಾಗಿತ್ತೋ ಅಥವಾ ನಾಚಿಕೆಯಿಂದ ರಂಗೇರಿತ್ತೋ ನನಗೆ ತಿಳಿಯಲಿಲ್ಲ. ಆದರೆ ತುಂಟಾಟವಾಡಿ ಅಮ್ಮನ ಕೈಯಲ್ಲಿ ಸಿಕ್ಕಿಹಾಕಿಕೊಂಡ ಪುಟ್ಟ ಹುಡುಗಿಯಂತೆ ನಿಂತಿದ್ದ ಆಕೆಯನ್ನು ಬೈಯ್ಯುವ ಉದ್ದೇಶ ಮಾತ್ರ ಮಾಯವಾಗಿತ್ತು.
"ಇಟ್ಸ್ ಓಕೆ. ನೀವು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ್ರಿ ಸರಿ. ಆದ್ರೆ ರಸ್ತೆಯಲ್ಲಿ ಓಡಾಡ್ತೀರೋ ಇನ್ಯಾವುದಾದ್ರೂ ವಾಹನಕ್ಕೆ ಡಿಕ್ಕಿ ಹೊಡೆದಿದ್ರೆ, ಇಷ್ಟು ಹೊತ್ತಿಗೆ ಸ್ಸಾರಿ ಕೇಳೋ ಸ್ಥಿತಿಯಲ್ಲಿ ನೀವು ಇರುತ್ತಿರಲಿಲ್ಲ. ಸ್ಕೂಟಿಯಲ್ಲಿ ಓಡಾಡುವಾಗ ಕೊಂಚ ಎಚ್ಚರಿಕೆಯಿಂದಿದ್ದರೆ ಒಳ್ಳೇದು. ಮನೆಯಿಂದ ಹೊರಡೋ ಮುಂಚೆ ಗಾಡಿ ಚೆಕ್ ಮಾಡಿಕೊಳ್ಳಬಾರದೆ...?" ಎಂದು ಸೌಮ್ಯವಾಗಿ ಹೇಳಿದಾಗ ಆಕೆಯ ಮುಖ ಮತ್ತಷ್ಟು ಕೆಂಪಾಯಿತು. ಈ ಬಾರಿ ಅದು ನಾಚಿಕೆಯಿಂದಲೇ ಇರಬೇಕು.
ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ, "ಅಯ್ಯಯ್ಯೋ! ಏನ್ರೀ ಇದು. ಡಿಕ್ಕಿ ಹೊಡೆದು ಏನಾದ್ರೂ ಡ್ಯಾಮೇಜ್ ಮಾಡ್ತೀರಾ. ಗಲಾಟೆ ಮಾಡಿ, ಸ್ವಲ್ಪ ಹೆಚ್ಚೇ ಕಾಸು ಕಿತ್ಕೊಂಡು ಸಾಯಂಕಾಲ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡೋಣಾ ಅಂತ ಪ್ಲಾನ್ ಹಾಕ್ಕೊಂಡಿದ್ರೆ ಕಾರಿಗೇನೂ ಆಗಿಲ್ವಲ್ರೀ. ನನ್ನ ಪಾರ್ಟಿ ಪ್ಲಾನ್ ಎಲ್ಲಾ ಹಾಳಾಗೋಯ್ತು..." ಎಂದು ಹುಸಿಗೋಪದಿಂದ ಹೇಳಿದರೆ, ನಗುವ ಸರದಿ ಅವಳದಾಯ್ತು.
"ಐಯಾಮ್... ರಿಯಲಿ... ಸ್ಸಾರಿ. ಬ್ರೇಕ್..." ಎಂದು ಮತ್ತೊಮ್ಮೆ ಉಲಿಯುತ್ತಿದ್ದ ಆಕೆಯ ಮಾತುಗಳಿಗೆ ಅರ್ಧದಲ್ಲೇ ಬ್ರೇಕ್ ಹಾಕಿ, "ನಿಮಗೆ ಏನೂ ಆಗಿಲ್ಲ ತಾನೆ?" ಎಂದೆ.
"ಇಲ್ಲಾ. ನನಗೇನೂ ಆಗಿಲ್ಲ. ನಿಮಗೆ?" ಎಂದು ಮರುಪ್ರಶ್ನೆ ಎಸೆದ ಆಕೆಯ ಮುಖದಲ್ಲಿ ಶುದ್ಧ ಮಗುವಿನ ಮುಗ್ಧತೆ.
ಈಗಂತೂ ನನಗೆ ನಗು ತಡೆಯಲಾಗಲಿಲ್ಲ. "ಅಲ್ಲಾ ಕಣ್ರೀ. ಸ್ಕೂಟಿಯಲ್ಲಿ ಬಂದು ಡಿಕ್ಕಿ ಹೊಡೆದಿದ್ದು ನೀವು. ನಿಮಗೇ ಏನೂ ಆಗಿಲ್ಲ ಅಂದ ಮೇಲೆ ಕಾರಿನೊಳಗಿದ್ದ ನನಗೇನಾಗುತ್ತೆ" ಎಂದು ನಗುವನ್ನು ತಡೆದುಕೊಳ್ಳುವ ವಿಫಲ ಯತ್ನ ಮಾಡಿದೆ. ಪಾಪ! ಆ ಹುಡುಗಿಯ ಕೆನ್ನೆ ಮತ್ತಷ್ಟು ರಂಗೇರಿತು. ಆಗಷ್ಟೆ ಆಕೆಯನ್ನು ನಾನು ಸರಿಯಾಗಿ ಗಮನಿಸಿದ್ದು. ತಿಳಿ ಹಸಿರು, ಕಡುನೀಲಿ ಮಿಶ್ರಿತ ಚೂಡಿದಾರ್‌ನಲ್ಲಿ ಆಕೆಯ ಗೌರವರ್ಣ ಮಿಂಚುತ್ತಿತ್ತು. ಗಾಳಿಯಲ್ಲಿ ಲಾಸ್ಯವಾಡುತ್ತಿದ್ದ ಮುಂಗುರುಳು. ನೀಳ ಮೂಗು. ಓಹ್! ಗಿಣಿ ಮೂಗು ಎಂದರೆ ಇದೇ ಇರಬೇಕು. ಗೊಂದಲ, ನಾಚಿಕೆ ಹಾಗೂ ಮುಗ್ಧತೆ ಇವೆಲ್ಲವೂ ಮೇಳೈಸಿದಂತಿದ್ದ ಆ ಕಣ್ಣುಗಳಂತೂ ಸ್ನಿಗ್ಧ ಸೌಂದರ್ಯದ ಚಿಹ್ನೆಗಳಂತಿದ್ದವು. ಅರೆ ಇದೇನಿದು... ಮತ್ತದೇ ಹಳೆಯ ಪದಗಳನ್ನೇ ಬಳಸಿ ಈಕೆಯನ್ನು ವರ್ಣಿಸುತ್ತಿದ್ದೇನಲ್ಲಾ ಎಂದು ಒಂದು ಕ್ಷಣ ಅನಿಸಿದರೂ, ಯಾಕೋ ಹೊಸ ಶಬ್ಧಗಳನ್ನು ಕಟ್ಟಿ ಆಕೆಯನ್ನು ಬಣ್ಣಿಸಲು ಸಾಧ್ಯವಾಗಲಿಲ್ಲ... ನನ್ನಲ್ಲಿದ್ದ ಪದಗಳೆಲ್ಲಾ ಮುಗಿದುಹೋದವೇ?! ಎಂಬ ಅಳುಕು ಕಾಡತೊಡಗಿತು. ಏನೋ ಗೊಂದಲ...
'ಆ ಕಣ್ಣುಗಳು...' ಇನ್ನೇನು ಆಕೆಯ ಸೌಂದರ್ಯೋಪಾಸನೆಯಲ್ಲಿ ಕಳೆದುಹೋಗಬೇಕು ಎನ್ನುವಷ್ಟರಲ್ಲಿ ಆಕೆ ನಿಧಾನಕ್ಕೆ ಸ್ಕೂಟಿಯನ್ನು ಹತ್ತಿದಳು. ಇನ್ನು ರಸ್ತೆಯಲ್ಲಿ ನಿಂತು ಇತರರಿಗೆ ಪುಕ್ಕಟೆ ಮನೋರಂಜನೆ ಒದಗಿಸುವುದು ಬೇಡ ಎಂದು ನಾನೂ ಕಾರಿನತ್ತ ನಡೆದೆ.
ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ, "ನಿಮ್ಮ ಪಾರ್ಟಿ ಪ್ಲಾನ್ ಹಾಳು ಮಾಡೋಕೆ ನಂಗ್ಯಾಕೋ ಇಷ್ಟ ಆಗ್ತಿಲ್ಲಾ. ನಿಮಗೆ ಅಭ್ಯಂತರ ಇಲ್ಲಾಂದ್ರೆ ಇಲ್ಲೇ ಒಂದು ಕಫ್ ಕಾಫಿ ಕುಡಿಯೋಣ್ವಾ" ಎಂದ ಆಕೆಯ ಕಣ್ಣುಗಳಲ್ಲಿ ತುಂಟ ನಗು. ಬೇಡವೆಂದು ನಿರಾಕರಿಸಲು ನನ್ನ ಬಳಿ ಕಾರಣಗಳಿರಲಿಲ್ಲ.
ಮುಂದಿನ 5 ನಿಮಿಷದಲ್ಲಿ ಕಾಫಿ ಡೇಯ ಸೌತ್ ಕಾರ್ನರ್ ಟೇಬಲ್ ಮೇಲೆ ನಮ್ಮಿಬ್ಬರ ಕಾಫಿ ಕಪ್‌ನಿಂದ ಹಬೆಯಾಡುತ್ತಿತ್ತು.
***
"ಆದಿ... ಇನ್ನೂ ರೆಡಿಯಾಗಿಲ್ವಾ?" ಎಂದು ನನ್ನ ಪತ್ನಿ ಕರೆದಾಗಲೇ ನಾನು ಮೂರು ವರ್ಷದ ಹಿಂದಿನ ನೆನಪಿನಿಂದ ವಾಸ್ತವ ಪ್ರಪಂಚಕ್ಕೆ ಮರಳಿದ್ದು. ಮಹಡಿಯಿಂದ ನಿಧಾನವಾಗಿ ಇಳಿದು ಬರುತ್ತಿದ್ದ ನನ್ನಾಕೆಯನ್ನು ನೋಡಿದೆ. ಆಗಷ್ಟೇ ಸ್ನಾನ ಮುಗಿಸಿದ್ದರಿಂದ ಆಕೆಯ ನೀಳ ಕೇಶರಾಶಿಯಿಂದ ನೀರು ತೊಟ್ಟಿಕ್ಕುತ್ತಿತ್ತು. ಕಡುಗೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ದಂತದ ಗೊಂಬೆ. ಸ್ನಿಗ್ಧ ಸೌಂದರ್ಯ ತುಂಬಿ ತುಳುಕುತ್ತಿದ್ದ ಆ ಕಣ್ಣುಗಳು. ಹೌದು ಅವೇ ಕಣ್ಣುಗಳು. ಅವೇ ಅಲ್ಲವೆ, ಪ್ರಥಮ ಭೇಟಿಯಲ್ಲೇ ನನ್ನನ್ನು ಸಂಪೂರ್ಣ ಶರಣಾಗತನಾಗುವಂತೆ ಮಾಡಿದ್ದು. ‘ಕಾಫಿ ಡೇ’ಯಲ್ಲಿ ನನ್ನಲ್ಲಿದ್ದ ಎಲ್ಲಾ ಧೈರ್ಯವನ್ನು ಒಗ್ಗೂಡಿಸಿ ಸ್ವಪ್ನಾಳಿಗೆ ಪ್ರಪೋಸ್ ಮಾಡುವಂತೆ ಪ್ರೇರೆಪಿಸಿದ್ದು. ಅಲ್ಲಿಂದ ಏನೂ ಹೇಳದೆ ಗಾಬರಿಯಿಂದ ಎದ್ದುಹೋದ ಸ್ವಪ್ನಾಳನ್ನು ಬಿಡದೇ ಬೆನ್ನುಹತ್ತಿ, ಕಾಡಿಸಿದ ನನ್ನ ಪ್ರೀತಿಗೆ ಒಪ್ಪಿಗೆಯ ಮುದ್ರೆ ಒತ್ತಿದ್ದು ಸಹ ಅವೇ ಕಣ್ಣುಗಳಲ್ಲವೆ... ಅಬ್ಬಾ! ನೆನೆಸಿಕೊಂಡರೆ ಎಲ್ಲಾ ಕನಸಿನಲ್ಲಿ ನಡೆದಂತಿದೆ. ಆದರೆ ಅದೇ ಕನಸು ಇಂದಿನ ವಾಸ್ತವ. ಈಗ ಸ್ವಪ್ನಾ ನನ್ನ ಅರ್ಧಾಂಗಿ. ಎರಡು ವರ್ಷಗಳ ಸುಧೀರ್ಘ ಪ್ರಯತ್ನದ ಬಳಿಕ ಅವಳ ಪ್ರೀತಿಯನ್ನು ಗೆದ್ದುದರ ಫಲವಾಗಿ ನನಗೆ ಸಿಕ್ಕ ಉಡುಗೊರೆ ನನ್ನ ಸ್ವಪ್ನಾ...
"ಹ್ಞೂಂ! ಮತ್ತೆ ಕನಸಲ್ಲಿ ಕಳೆದುಹೋದ್ಯಾ" ಎಂದು ನಗುತ್ತಾ ನನ್ನ ಬಳಿ ಬಂದ ಸ್ವಪ್ನಾ ಮೃದುವಾಗಿ ತಲೆ ನೇವರಿಸಿದಳು.
"ಹಾಗೇನಿಲ್ಲಾ... ಮತ್ತೆ ‘ಕಾಫಿ ಡೇ’ ಪ್ರಪೋಸಲ್ ನೆನಪಿಸಿಕೊಳ್ತಿದ್ದೆ ಅಷ್ಟೇ" ಎಂದು ಸ್ವಪ್ನಾಳನ್ನು ನನ್ನತ್ತ ಸೆಳೆದುಕೊಂಡೆ. ನನ್ನ ಹಿಡಿತದಿಂದ ಬಿಡಿಸಿಕೊಂಡು, ಮೆತ್ತಗೆ ಕಿವಿಹಿಂಡಿದ ಆಕೆ, "ಇವತ್ತು ನಮ್ಮ ಮದುವೆ ಆನಿವರ್ಸರಿ ಅನ್ನೋದು ನೆನಪಿದೆ ತಾನೆ. ಮೊದಲು ಮರ್ಯಾದೆಯಿಂದ ದೇವಸ್ಥಾನಕ್ಕೆ ನಡಿ. ಉಳಿದಿದ್ದೆಲ್ಲಾ ಆಮೇಲೆ..." ಎಂದು ನಗುತ್ತಾ ಕಾರಿನತ್ತ ಓಡಿದಳು. ಅವಳನ್ನು ಹಿಂಬಾಲಿಸಿದ ನಾನು, "ಅಲ್ಲಿಂದ ನೇರವಾಗಿ ‘ಕಾಫಿ ಡೇ’ಗೆ ಹೋಗೋಣ. ಅಲ್ಲಿ ಸೌತ್ ಕಾರ್ನರ್ ಟೇಬಲ್ ಇಂದು ನಮಗಾಗಿ ರಿಸರ್ವ್ ಆಗಿದೆ" ಎಂದು ಮೆತ್ತಗೆ ಅವಳತ್ತ ಬಾಗಿದೆ. ಸ್ವಪ್ನಾಳ ಕೆನ್ನೆ ಕೆಂಪಾಯ್ತು. ಆದರೆ ಈ ಬಾರಿ ಅದು ನಾಚಿಕೆಯಿಂದಲೋ ಅಥವಾ ನಾನಿತ್ತ ಸಿಹಿ ಮುತ್ತಿನಿಂದಲೋ ಎಂಬುದು ತಿಳಿಯಲಿಲ್ಲ...

ಕಲೆ : ಪ್ರಕಾಶ್ ಶೆಟ್ಟಿ ಉಳೆಪಾಡಿ